'ಎಲ್.ಪಿ.ಜಿ ಪಂಚಾಯತ್'ನಲ್ಲಿ ಭಾಗವಹಿಸಿದ ರಾಷ್ಟ್ರಪತಿ ಕೋವಿಂದ್
ನವದೆಹಲಿ, ಫೆಬ್ರವರಿ 13: ಇಂದು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಎಲ್.ಪಿ.ಜಿ ಪಂಚಾಯತ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಿದ್ದರು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಏನಿದು ಎಲ್.ಪಿ.ಜಿ ಪಂಚಾಯತ್?
ನೈಸರ್ಗಿಕ ಅನಿಲ ಬಳಸುವ ಗ್ರಾಹಕರು ತಮ್ಮ ನಡುವೆ ಚರ್ಚೆ ನಡೆಸಬೇಕು ಎಂಬ ಉದ್ದೇಶದಿಂದ ಈ ಎಲ್.ಪಿ.ಜಿ ಪಂಚಾಯತ್ ಪರಿಕಲ್ಪನೆ ಆರಂಭಿಸಲಾಗಿದೆ. ಈ ಮೂಲಕ ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಹಾಯವಾಗಲಿ ಮತ್ತು ಪರಸ್ಪರ ಗ್ಯಾಸ್ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಇದನ್ನು ಆರಂಭಿಸಲಾಗಿದೆ.
ಪ್ರತಿ ಎಲ್.ಪಿ.ಜಿ ಪಂಚಾಯತ್ ನಲ್ಲಿ ಸುಮಾರು 100 ಗ್ರಾಹಕರು ಇರಲಿದ್ದಾರೆ. ಅವರು ಇರುವ ಪ್ರದೇಶದಲ್ಲೇ ಈ ಪಂಚಾಯತ್ ಗಳನ್ನು ರಚಿಸಲಾಗುತ್ತದೆ. ಅನಿಲದ ಮಿತ ಬಳಕೆ ಮತ್ತು ಸುರಕ್ಷಿತ ಬಳಕೆ ಬಗ್ಗೆ ಜನರು ಈ ಪಂಚಾಯತ್ ಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇದೇ ಮಾರ್ಚ್ 31ಕ್ಕೂ ಮೊದಲು ದೇಶದಾದ್ಯಂತ ಇಂತಹ 1 ಲಕ್ಷ ಎಲ್.ಪಿ.ಜಿ ಪಂಚಾಯತ್ ಗಳನ್ನು ಆಯೋಜಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಉದ್ದೇಶಿಸಿದೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸರಕಾರದ ಉಜ್ವಲ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಬಲ ಬಂದಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಉಜ್ವಲ ಯೋಜನೆ ಭಾಗವಾಗಿ 'ಎಲ್.ಪಿ.ಜಿ ಪಂಚಾಯತ್' ಯಶಸ್ವಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.