ಸೆ.1 ರಿಂದ ಸದ್ಗುರು ನೇತೃತ್ವದಲ್ಲಿ Rally for Rivers ಆರಂಭ
ನಾಗರಿಕತೆಗಳು ಜೀವತಳೆದಿದ್ದೇ ನದಿ ದಂಡೆಗಳ ಮೇಲೆ. ಅದಕ್ಕೆಂದೇ ನದಿಗೂ-ನಾಗರಿಕತೆಗೂ ಅವಿನಾಭಾವ ಸಂಬಂಧ. ಆದರೆ ಹುಟ್ಟಿಸಿ, ಜೀವಜಲ ನೀಡಿ ಅಡಿಗಡಿಗೆ ಪೊರೆದ ನದಿಗಳು ಸ್ಥಿತಿ ಮಾತ್ರ ಇಂದು ಚಿಂತಾಜನಕವಾಗಿದೆ.
ಸ್ವಚ್ಛ ಭಾರತ ಟ್ವೀಟ್, ಜಗ್ಗಿ ವಾಸುದೇವ್ ರನ್ನು ಜಾಲಾಡಿದ ಟ್ವಿಟ್ಟಿಗರು
ನಾಗರಿಕತೆಯ ಭವಿಷ್ಯದ ದೃಷ್ಟಿಯಿಂದಲೂ ಈ ಸನ್ನಿವೇಶ ಮಾರಕವೇ. ಆದ್ದರಿಂದ ನದಿಗಳನ್ನು ಉಳಿಸುವ, ಬೆಳೆಸುವ ಆ ಮೂಲಕ ನಾಗರಿಕತೆಯನ್ನೂ ಉಳಿಸುವ ಪ್ರಯತ್ನ ತುರ್ತಾಗಿ ಆಗಬೇಕಾದ ಕೆಲಸ ಎಂಬುದನ್ನು ಅರಿತ ಅಧ್ಯಾತ್ಮ ಗುರು, ನಮ್ಮ ಮೈಸೂರಿನ ಸದ್ಗುರು ಜಗ್ಗಿ ವಾಸುದೇವ ಅವರು ತಮ್ಮ ಇಶಾ ಫೌಂಡೇಶನ್ ಮೂಲಕ ನದಿಗಳ ಪುನರುಜ್ಜೀವನಕ್ಕೆ ಮುಂದಾಗಿದ್ದಾರೆ.
ತಮಿಳುನಾಡಿನ ಕೋಯಿಮತ್ತೂರಿನಿಂದ ಸೆಪ್ಟೆಂಬರ್ 1 ರಿಂದ ರ್ಯಾಲಿ ಆರಂಭವಾಗಲಿದ್ದು, ಅಕ್ಟೋಬರ್ 2 ರಂದು ದೆಹಲಿಯಲ್ಲಿ ಮುಕ್ತಾಯವಾಗಲಿದೆ. ರ್ಯಾಲಿ ಫಾರ್ ರಿವರ್ಸ್ ಗೆ ಕೈಜೋಡಿಸುವ ಇಚ್ಛೆಯಿರುವವರು 80009 80009 ಮಿಸ್ ಕಾಲ್ ನೀಡುವ ಮೂಲಕ ಬೆಂಬಲ ಸೂಚಿಸಬಹದು.
ನದಿಗಳಿಗೆ ಪುನರ್ಜನ್ಮ ನೀಡುವ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಲುವಾಗಿ ರ್ಯಾಲಿ ಫಾರ್ ರಿವರ್ಸ್ ಎಂಬ ಅಮೂಲ್ಯ ಕಾರ್ಯಕ್ರಮವನ್ನು ಇಶಾ ಫೌಂಡೇಶನ್ ಹಮ್ಮಿಕೊಂಡಿದೆ. ನದಿ ಜೋಡಣೆ ಮತ್ತು ನದಿ ಸಂರಕ್ಷಣೆ ರ್ಯಾಲಿಯ ಆದ್ಯ ಉದ್ದೇಶ.
ಮೋದಿ ಅನಾವರಣ ಮಾಡಿದ 'ಆದಿಯೋಗಿ'ಯ ಆಕರ್ಷಕ ಚಿತ್ರಗಳು
ಈಗಾಗಲೇ ಸೆಲೆಬ್ರಿಟಿ ನಟ-ನಟಿಯರು, ಕ್ರಿಕೆಟಿಗರು, ರಾಜಕಾರಣಿಗಳು ಸೇರಿದಂತೆ ಎಲ್ಲ ಕ್ಷೇತ್ರದ ಹಲವಾರು ಗಣ್ಯರು ಬೆಂಬಲ ಸೂಚಿಸಿರುವ ಈ ರ್ಯಾಲಿ ಫಾರ್ ರಿವರ್ ಎಂದರೇನು? ಇದರ ಉದ್ದೇಶವೇನು? ಈ ರ್ಯಾಲಿ ಎಲ್ಲಿಂದ ಎಲ್ಲಿಯವರೆಗೆ? ಯಾರ ಮುಂದಾಳತ್ವ? ನೀವೂ ಈ ಅಭಿಯಾನದ ಭಾಗವಾಗಬೇಕಾದರೆ ಏನು ಮಾಡಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
|
ಏನಿದು ರ್ಯಾಲಿ ಫಾರ್ ರಿವರ್ಸ್?
60 ವರ್ಷ ವಯಸ್ಸಿನ ಸದ್ಗುರು ಜಗ್ಗಿ ವಾಸುದೇವ ಅವರೇ ಹೇಳುವಂತೆ, "ಇದು ಪ್ರತಿಭಟನೆಯಲ್ಲ, ಆಂದೋಲನವೂ ಅಲ್ಲ. ನಮ್ಮ ನದಿಗಳು ನಶಿಸಿಹೋಗುತ್ತಿರುವ ಕುರಿತು ಅರಿವು ಮೂಡಿಸುವುದಕ್ಕಾಗಿ ಮಾಡುತ್ತಿರುವ ಅಭಿಯಾನ ಇದು. ನೀರನ್ನು ಸೇವಿಸುವ ಪ್ರತಿಯೊಬ್ಬರೂ ನದಿಗಳಿಗಾಗಿ ರ್ಯಾಲಿ ಮಾಡಲೇ ಬೇಕು."
|
ಉದ್ದೇಶವೇನು?
ನಶಿಸಿಹೋಗುತ್ತಿರುವ ನದಿಗಳ ಕುರಿತು ಜನರಲ್ಲಿ ಅರಿವು ಮೂಡಿಸಿ, ಅವುಗಳ ಪುನರುಜ್ಜೀವನಕ್ಕೆ ಮುಂದಾಗುವುದೇ ಈ ರ್ಯಾಲಿಯ ಉದ್ದೇಶ. ನದಿ ಜೋಡಣೆ ಮತ್ತು ನದಿ ಸಂರಕ್ಷಣೆ ರ್ಯಾಲಿಯ ಆದ್ಯ ಗುರಿ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಹಯೋಗದಲ್ಲಿ ಇಶಾ ಫೌಂಡೇಶನ್ ಈ ರ್ಯಾಲಿಯನ್ನು ನಡೆಸುತ್ತಿದ್ದು, ಸದ್ಗುರು ಜಗ್ಗಿ ವಾಸುದೇವ ಅವರು ರ್ಯಾಲಿಯ ಮುಂದಾಳತ್ವ ವಹಿಸಲಿದ್ದಾರೆ.
ಎಲ್ಲಿಂದ, ಯಾವಾಗ ಆರಂಭ?
ರ್ಯಾಲಿ ಫಾರ್ ರಿವರ್ ಅಭಿಯಾನ ತಮಿಳುನಾಡಿನ ಕೋಯಿಮತ್ತೂರಿನಿಂದ ಸೆಪ್ಟೆಂಬರ್ 1 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 2 ರಂದು ದೆಹಲಿಯಲ್ಲಿ ಮುಕ್ತಾಯವಾಗಲಿದೆ. ಸರಿಸುಮಾರು ಒಂದು ತಿಂಗಳ ಕಾಲ ನಡೆಯುವ ಈ ರ್ಯಾಲಿ 16 ರಾಜ್ಯಗಳ ಮೂಲಕ ಹಾದುಹೋಗಿ, 7000 ಕಿ.ಮೀ.ದೂರವನ್ನು ಕ್ರಮಿಸಲಿದೆ.
ನದಿಗಳ ಪುನರುಜ್ಜೀವನ ಹೇಗೆ ಸಾಧ್ಯ?
ಈ ರ್ಯಾಲಿಯಲ್ಲಿ ಸಂಕಷ್ಟದಲ್ಲಿರುವ 30 ನದಿಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ. ನದಿಗಳ ಪುನರುಜ್ಜೀವನಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಸಲಹೆಯನ್ನೂ ಇಶಾ ನೀಡಲಿದೆ. ಈಗಾಗಲೇ ತಮಿಳು ನಾಡಿನ ಕೆಲವೆಡೆ ಇಶಾ ಫೌಂಡೇಶನ್ ವತಿಯಿಂದ ನದಿಗಳ ಉಳಿವಿಗೆ ಮಾಡಿದ ಯೋಜನೆಗಳು ಫಲ ನೀಡಿದ ಹಿನ್ನೆಲೆಯಲ್ಲಿ ಇವನ್ನು ದೇಶದಾದ್ಯಂತ ಪ್ರಯೋಗಿಸುವ ಕುರಿತೂ ಮನವಿಮಾಡಿಕೊಳ್ಳಲಾಗುತ್ತದೆ.
ಮನವಿಯಲ್ಲೇನಿರುತ್ತದೆ?
ನದಿಗಳ ಪುನರುಜ್ಜೀವನ ಹೇಗೆ ಸಾಧ್ಯ ಎಂಬ ಕುರಿತು ಪ್ರಾಯೋಗಿಕವಾಗಿ ಅಧ್ಯಯನ ಮಾಡಿ, ಯಶಸಾಧಿಸಿದ ಇಶಾ ತನ್ನ ಅನುಭವದ ಸಾರವನ್ನೇ ಮನವಿಯಲ್ಲಿ ನೀಡಲಿದೆ. ನದಿಗಳು ಹರಿಯುವ ಪ್ರದೇಶದ ದಡದ ಎರಡೂ ಕಡೆಗಳಲ್ಲಿ ಮರಗಳನ್ನು ಬೆಳೆಸುವುದಲ್ಲದೆ, ಉಪನದಿಗಳ ಎರಡೂ ದಂಡೆಗಳಲ್ಲೂ ಮರಬೆಳೆಸುವಂತೆ ಸಲಹೆ ನೀಡಲಾಗಿದೆ. ನದಿ ತಟದ ಬಳಿ ಸ್ವಂತ ಭೂಮಿ ಹೊಂದಿರುವವರು ಹಣ್ಣಿನ ಮರಗಳನ್ನು ಸಾವಯವ ಕೃಷಿ ಪದ್ಧತಿಯ ಮೂಲಕ ಬೆಳೆಸುವಂತೆಯೂ ಮನವಿ ಮಾಡಲಾಗಿದೆ. ಇದರಿಂದ ರೈತ ಪ್ರತಿ ವರ್ಷ ಪಡೆಯುವ ಬೆಳೆಗಿಂತ ದುಪ್ಪಟ್ಟು ಹೆಚ್ಚು ಬೆಳೆ ಪಡೆಯಬಲ್ಲ. ಹಾಗೆಯೇ ಮುಖ್ಯವಾಗಿ ಇದರಿಂದ ನದಿಯನ್ನು ಜೀವಂತವಾಗಿ ಉಳಿಸುವುದಕ್ಕೆ ಸಾಧ್ಯ!
ಕೃಷಿತಜ್ಞರು-ವಿಜ್ಞಾನಿಗಳ ಸಹಕಾರ
ಈ ಯೋಜನೆಗೆ ಕೃಷಿ ತಜ್ಞರು ಮತ್ತು ವಿಜ್ಞಾನಿಗಳ ಸಹಕಾರವೂ ಬೇಕೆಂದು ಇಶಾ ಹೇಳಿದೆ. ಯಾವ ಭೂಮಿಯಲ್ಲಿ, ಯಾವ ಹಮಾನಾದಲ್ಲಿ ಎಂಥ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಮಣ್ಣಿನ ಪರೀಕ್ಷೆ ಮತ್ತು ಹವಾಮಾನದ ಅಧ್ಯಯನದ ಮೂಲಕ ತಜ್ಞರೇ ನಿರ್ಧರಿಸಬೇಕಿದೆ. ಅಷ್ಟೇ ಅಲ್ಲ ಈ ಬೆಳೆಗಳಿಗೆ ಮಾರುಕಟ್ಟೆಯನ್ನು ಕಲ್ಪಿಸುವ ಮೂಲಕ ರೈತನಿಗೆ ಲಾಭವನ್ನು ನೀಡುವ ಬಗ್ಗೆಯೂ ಚಿಂತಿಸಬೇಕಿದೆ.
ಯಾವ ನದಿಗಳು ಅಳಿವಿನಂಚಿನಲ್ಲಿವೆ?
ಕಾವೇರಿ, ನರ್ಮದಾ, ಕೃಷ್ಣಾ, ಗೋದಾವರಿ, ಗಂಗಾ ಸೇರಿದಂತೆ ಭಾರತದ ಬಹುಮುಖ್ಯ ನದಿಗಳೇ ಇಂದು ಅಳಿವಿನಂಚಿನಲ್ಲಿರುವುದು ಅಪಾಯದ ಮುನ್ಸೂಚನೆ ಎನ್ನಿಸಿದೆ. ಆದ್ದರಿಂದ ಈ ಎಲ್ಲ ನದಿಗಳಿಗೆ ಮರಿಜನ್ಮ ನೀಡೂವ ಸಲುವಾಗಿ ಈ ರ್ಯಅಲಿ ನಡೆಯುತ್ತಿದೆ.
ಯಾರೆಲ್ಲ ಭಾಗವಹಿಸುತ್ತಾರೆ?
ಈ ರ್ಯಾಲಿ ಫಾರ್ ರಿವರ್ ಹಾದುಹೋಗುವ 16 ರಾಜ್ಯಗಳಲ್ಲಿ, 13 ರಾಜ್ಯದ ಮುಖ್ಯಮಂತ್ರಿಗಳು ರ್ಯಾಲಿಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಈ ರ್ಯಾಲಿಯಲ್ಲಿ ಭಾಗವಹಿಸಬಹುದು. ಅಲ್ಲದೆ ಹಲವು ಬಾಲಿವುಡ್ ನಟ-ನಟಿಯರೂ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ನೀವೂ ಬೆಂಬಲಿಸಬೇಕೇ?
ರ್ಯಾಲಿ ಫಾರ್ ರಿವರ್ ಗೆ ನೀವೂ ಬೆಂಬಲ ನೀಡಬೇಕೆಂದರೆ 80009 80009 ಈ ನಂಬರ್ ಗೆ ಕರೆ ಮಾಡಿ ನಿಮ್ಮ ಬೆಂಬಲ ಸೂಚಿಸಿ. ಅಥವಾ ಇಶಾ ಫೌಂಡೇಶನ್ ನ ಈ ವೆಬ್ ಸೈಟ್ ಗೆ ಹೋಗಿ, ನಿಮ್ಮ ಮೇಲ್ ಐಡಿ ಕೊಟ್ಟು ಬೆಂಬಲ ಸೂಚಿಸಿ.