ವಿಶೇಷ ಸಂದರ್ಶನ: ಸರ್ಕಾರ ಮತ್ತು ರೈತರ ನಡುವೆ ಮಧ್ಯವರ್ತಿಯಾದರಾ ಸಚಿವರು?
ನವದೆಹಲಿ, ಫೆಬ್ರವರಿ.07: ವಿವಾದಿತ ಕೃಷಿ ಕಾಯ್ದೆಗಳು ಮತ್ತು ಕೇಂದ್ರ ಸರ್ಕಾರದ ನೀತಿ ವಿರುದ್ಧ ಅನ್ನದಾತರು ಹೋರಾಟ ಮುಂದುವರಿದಿದೆ. ನವೆಂಬರ್.26ರಿಂದ ಇಂದಿನವರೆಗೂ ಕೇಂದ್ರ ಸರ್ಕಾರ ತಮಗೆ ನ್ಯಾಯ ನೀಡುತ್ತದೆ ಎಂಬ ನಿರೀಕ್ಷೆಯಲ್ಲೇ ಎದುರು ನೋಡುತ್ತಿದ್ದಾರೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಹೋರಾಟದಿಂದ ಹಿಂದೆ ಸರಿಯದಿರಲು ಅನ್ನದಾತರು ಪಣ ತೊಟ್ಟಿದ್ದಾರೆ.
ಕೇಂದ್ರದ ಎದೆಯಲ್ಲಿ ಭಯ: ರೈತರ ಬೆದರಿಸಲು ಶೌಚಾಲಯ, ನೀರು, ವಿದ್ಯುತ್ ವ್ಯತ್ಯಯ!?
ಕಳೆದ ನವೆಂಬರ್.26ರಿಂದ ಇಂದಿನವರೆಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಮತ್ತು ರೈತರ ಸಂಘಟನೆಗಳು ಮತ್ತು ಮುಖಂಡರ ನಡುವೆ 11 ಸುತ್ತಿನ ಮಾತುಕತೆ ನಡೆದಿದೆ. ಈ 11 ಸುತ್ತಿನ ಮಾತುಕತೆಯಲ್ಲಿ ಏನಾಯಿತು. ಕೇಂದ್ರ ಸರ್ಕಾರವು ರೈತರ ಎದುರಿಗಿಟ್ಟ ಪ್ರಸ್ತಾವನೆಗಳೇನು. ರೈತರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲವೇ. ರೈತರೊಂದಿಗಿನ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು ಹೇಳಿದ್ದೇನು. ರೈತರ ಹೋರಾಟ ಮುಂದುವರಿಯುವುದಕ್ಕೆ ಕಾರಣವೇನು ಎನ್ನುವುದರ ಕುರಿತು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಅವರು "ಇಂಡಿಯಾ ಟುಡೇ"ಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಸಂದರ್ಶನದ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಪ್ರಶ್ನೆ -1: ಈವರೆಗೂ ನಡೆದ ಹಲವು ಸುತ್ತಿನ ಸಭೆಯಲ್ಲಿ ಸಚಿವರು ಹಾಜರಿದ್ದರೆ?
ಉತ್ತರ : ಸಂಧಾನ ಮಾತುಕತೆಗೆ ಆಗಮಿಸುವ ಸಚಿವರು ಬೇರೆ ಯಾರೋ ಮೊದಲೇ ಬರೆದು ಕೊಟ್ಟಿರುವ ಚೀಟಿಗಳಲ್ಲಿನ ವಿಷಯವನ್ನು ಮಾತ್ರ ಹೇಳುತ್ತಿದ್ದರು. ಅದರ ಹೊರತಾಗಿ ಏನನ್ನೂ ಮಾತನಾಡುತ್ತಿರಲಿಲ್ಲ. ಅಲ್ಲಿ ಸರ್ಕಾರವೇ ಇರುತ್ತಿರಲಿಲ್ಲ. ಅನ್ಯರ ಮಾತುಗಳನ್ನು ಕೇಳಿಕೊಂಡು ಅದನ್ನು ಹೇಳುವುದಕ್ಕೆ ನಮ್ಮ ಬಳಿಗೆ ಬರುತ್ತಿದ್ದರು. ಆಗಾಗ ಚಹಾ ಕೂಟಕ್ಕೆ ಆಗಮಿಸುವಂತೆ ಪ್ರಸ್ತಾವನೆ ಸಲ್ಲಿಸುತ್ತಿದ್ದರು. ಆದರೆ ಸರ್ಕಾರವೇ ಇಲ್ಲ ಎಂದ ಮೇಲೆ ಯಾರನ್ನು ತಾನೇ ಪ್ರಶ್ನೆ ಮಾಡುವುದಕ್ಕೆ ಆಗುತ್ತದೆ.
ಪ್ರಶ್ನೆ -2: ಹಾಗಿದ್ದಲ್ಲಿ, ಈ ಸುದೀರ್ಘ ಮಾತುಕತೆಯಿಂದ ಮುಂದೆ ಏನಾಗಬಹುದು?
ಉತ್ತರ: ಅವರು ನಮ್ಮ ಬಳಿ ಒಂದು ಪ್ರಶ್ನೆಯನ್ನು ಕೇಳುತ್ತಿದ್ದರು. ಅದಕ್ಕೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಬೇರೋಬ್ಬರ ಮೊರೆಗೆ ಹೋಗುತ್ತಿದ್ದರು. ಮತ್ತೊಮ್ಮೆ ನಮ್ಮ ಬಳಿಗೆ ಬಂದು ಅದೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಹೇಳಿ ಹೊರಟು ಹೋಗುತ್ತಿದ್ದರು.
ರೈತರು ಮತ್ತು ಸಚಿವರೊಂದಿಗಿನ ಸಭೆ
ಪ್ರಶ್ನೆ - 3: ನಿಮ್ಮ ಜೊತೆಗೆ ಚರ್ಚೆಗೆ ಬರುತ್ತಿದ್ದವರು ಯಾರು, ಸಚಿವರೇ ಅಲ್ಲವೇ?
ಉತ್ತರ: ಕೇಂದ್ರ ಸರ್ಕಾರದಿಂದ ಕೇವಲ ಒಬ್ಬರೇ ಒಬ್ಬ ಸಚಿವರು ನಮ್ಮ ಜೊತೆ ಮಾತುಕತೆ ನಡೆಸಿದರು.
ಪ್ರಶ್ನೆ - 4: ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಅಲ್ಲವೇ?
ಉತ್ತರ: ಹೌದು, ತೋಮರ್ ಜೀ ಅವರೇ ಚರ್ಚೆ ನಡೆಸಿದ್ದು.
ಪ್ರಶ್ನೆ - 5: ಮತ್ತೆ ಪಿಯೂಶ್ ಗೋಯೆಲ್ ಅವರು?
ಉತ್ತರ: ಸಚಿವ ಪಿಯೂಶ್ ಗೋಯೆಲ್ ಅವರು ಕೂಡಾ ಒಂದೆರೆಡು ಬಾರಿ ಮಾತುಕತೆ ನಡೆಸಿದ್ದರು.
ತನ್ನ ನಿಲುವಿಗೆ ಬದ್ಧವಾದ ಕೇಂದ್ರ ಸರ್ಕಾರ
ಪ್ರಶ್ನೆ - 6: ನೀವು ಅಲ್ಲಿ ಏನನ್ನು ಚರ್ಚಿಸುತ್ತಿದ್ದಿರಿ?
ಉತ್ತರ: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ನಾವು ಮನವಿ ಮಾಡಿದೆವು.
ಪ್ರಶ್ನೆ - 7: ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಚವಾಗಿ ಹೇಳುತ್ತಿದೆ, ಹಾಗಿದ್ದರೂ ನೀವು ಅಲ್ಲಿಗೆ ಹೋಗಿದ್ದು ಏಕೆ?
ಉತ್ತರ: ಅವರು ನಮ್ಮನ್ನು ಆಹ್ವಾನಿಸುತ್ತಿದ್ದರು, ನಾವು ಹೋಗುತ್ತಿದ್ದೆವು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಮಾತು
ಪ್ರಶ್ನೆ - 8: ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಒಂದು ಕರೆ ಮಾಡಬಹುದಲ್ಲವೇ?
ಉತ್ತರ: ಸರಿ, ಹಾಗಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಂಬರ್ ಕೊಡಿ. ನಾನು ನನ್ನ ನಂಬರ್ ನ್ನು ಸಾರ್ವಜನಿಕವಾಗಿ ಹೇಳುತ್ತೇವೆ. ಪ್ರಧಾನಮಂತ್ರಿ ಕೂಡಾ ಅವರ ನಂಬರ್ ನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲಿ. ಆಗ ನಾವು ಅವರಿಗೆ ಕರೆ ಮಾಡುತ್ತೇವೆ. ನಮ್ಮ ಸಮಿತಿ ಏನು ಹೇಳುತ್ತದೆಯೋ ಅದನ್ನೇ ನಾವು ಮಾಡುತ್ತೇವೆ.
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ವಿವಿಧ ಗಡಿಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಜೊತೆಗೆ ಕೇಂದ್ರ ಸರ್ಕಾರದ ಪ್ರತಿನಿಧಿಗಳು ನಡೆಸಿದ 11 ಸುತ್ತಿನ ಸಂಧಾನ ಮಾತುಕತೆಯೂ ವಿಫಲವಾಗಿದೆ. ಆದರೆ ರೈತರು ತಮ್ಮ ಹೋರಾಟದ ಉದ್ದೇಶದ ಬಗ್ಗೆ ಸ್ಪಷ್ಟವಾಗಿದ್ದಾರೆ. ವಿವಾದಿತ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎನ್ನುವ ಬೇಡಿಕೆಗಳು ಈಡೇರಿಸುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಹೇಳಿದ್ದಾರೆ.