ರಾಜ್ಯಸಭೆ ಚುನಾವಣೆ: ಕೊರೊನಾ ಸೋಂಕಿತ ಶಾಸಕರಿಗೆ ಪ್ರತ್ಯೇಕ ಮತಕೇಂದ್ರ
ನವದೆಹಲಿ, ಜೂನ್ 17: ಎಂಟು ರಾಜ್ಯಗಳಲ್ಲಿ ಜೂನ್ 19ರಂದು ರಾಜ್ಯ ಸಭಾ ಚುನಾವಣೆ ನಡೆಯಲಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತ ಶಾಸಕರಿಗೆ ಪ್ರತ್ಯೇಕ ಮತಕೇಂದ್ರದ ವ್ಯವಸ್ಥೆ ಮಾಡಲಾಗಿದೆ.
ಆಯಾ ರಾಜ್ಯಗಳ ಚುನಾವಣಾ ಆಯೋಗಗಳು ರಾಜ್ಯಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿದೆ.ಕೊರೊನಾ ಸೋಂಕಿನ ಭೀತಿ ನಡುವೆಯೂ ಎಂಟು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಗುಜರಾತ್, ಆಂಧ್ರಪ್ರದೇಶ, ಜಾರ್ಖಂಡ್, ಮೇಘಾಲಯ, ಮಣಿಪುರ, ಮಧ್ಯಪ್ರದೇಶ, ಮಿಜೋರಾಂ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದೆ.
ಕರ್ನಾಟಕ; ರಾಜ್ಯಸಭೆ ಚುನಾವಣೆ, ನಾಲ್ವರು ಅವಿರೋಧ ಆಯ್ಕೆ
ಈ ರಾಜ್ಯಗಳಿಂದ ಒಂದು ಸಾವಿರ ಶಾಸಕರು ಆಯಾ ರಾಜ್ಯಗಳಲ್ಲಿ ಶಾಸಕರಿಗೂ ಕೊರೊನಾ ಸೋಂಕು ತಗುಲಿದ್ದು, ಇದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿದೆ. ಗುಜರಾತ್ನಲ್ಲಿ ಮೂವರು ಶಾಸಕರಿಗೆ ಕೊರೊನಾ ಸೋಂಕು ತಗುಲಿದ್ದು, ಇವರೂ ಕೂಡ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಬೇಕಾಗುತ್ತದೆ.
ಹೀಗಾಗಿ ಇವರನ್ನು ಮತದಾನ ಕೇಂದ್ರಕ್ಕೆ ಕರೆದೊಯ್ಯಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಇನ್ನುಳಿದ ರಾಜ್ಯಗಳಲ್ಲು ಶಾಸಕರಿಗೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಸೇರಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಧ್ಯಪ್ರದೇಶದ ಶಾಸಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಇವರು ಕೂಡಾ ಚುನಾವಣೆಯಲ್ಲಿ ಮತದಾನ ಮಾಡಬೇಕಿದೆ.
ಶಾಸಕರಿಗೆ ಪಿಪಿಇ ಕಿಟ್ ಹಾಕಿಸಿ ಆಂಬ್ಯುಲೆನ್ಸ್ ಮೂಲಕ ಮತ ಕೇಂದ್ರಕ್ಕೆ ಕರೆತರಲಾಗುತ್ತದೆ. ಅಲ್ಲಿರುವ ಚುನಾವಣಾ ಅಧಿಕಾರಿಗಳೂ ಪಿಪಿಇ ಕಿಟ್ ಧರಿಸುತ್ತಾರೆ. ಅವರು ಮತದಾನ ಮಾಡಿದ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.