ವಿಪಕ್ಷಗಳ ಬಹಿಷ್ಕಾರದ ನಡುವೆ ರಾಜ್ಯಸಭೆ ಕಲಾಪ ಅಂತ್ಯ: 3 ಕಾರ್ಮಿಕ ಮಸೂದೆಗಳ ಅಂಗೀಕಾರ
ನವದೆಹಲಿ, ಸೆಪ್ಟೆಂಬರ್ 23: ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿ ವಿರೋಧಪಕ್ಷಗಳು ಸಂಸತ್ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ನಾಲ್ಕು ಕಾರ್ಮಿಕ ಸಂಹಿತೆ ಮಸೂದೆಗಳ ಪೈಕಿ ಮೂರು ಮಸೂದೆಗಳನ್ನು ಅಂಗೀಕರಿಸಲಾಗಿದೆ.
ಸಂಸತ್ನ ಎರಡೂ ಸದನಗಳನ್ನು ಬಹಿಷ್ಕರಿಸಿ ಮಂಗಳವಾರದಿಂದ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಮಾರಕ ಮಸೂದೆಗಳನ್ನು ಏಕಪಕ್ಷೀಯವಾಗಿ ಅಂಗೀಕರಿಸಬಾರದು ಎಂದು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ವಿರೋಧಪಕ್ಷಗಳು ಪತ್ರ ಬರೆದಿದ್ದವು. ಭಾನುವಾರ ಕಲಾಪದ ವೇಳೆ ಕೃಷಿ ಸಂಬಂಧಿ ಮಸೂದೆಗಳನ್ನು ಮತ ವಿಭಜನೆಗೆ ಅವಕಾಶ ನೀಡದೆ ಅಂಗೀಕರಿಸಿರುವುದು ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯಸಭೆ ಮುಂಗಾರು ಅಧಿವೇಶನ: 1952ರಿಂದ ಮೂರನೇ ಬಾರಿ ಅತಿ ಕಡಿಮೆ ಅವಧಿ ಕಲಾಪ
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಉದ್ಯೋಗ ಸ್ಥಿತಿ ಸಂಹಿತೆ 2020, ಕೈಗಾರಿಕಾ ಸಂಬಂಧಗಳ ಸಂಹಿತೆ 2020 ಮತ್ತು ಸಾಮಾಜಿಕ ಸುರಕ್ಷತೆ ಸಂಹಿತೆಗಳನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿತ್ತು. ಅದಕ್ಕೀಗ ರಾಜ್ಯಸಭೆಯಲ್ಲಿಯೂ ಅನುಮೋದನೆ ಸಿಕ್ಕಿದ್ದು, ಇನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಸಹಿ ಬೀಳುವುದು ಬಾಕಿ ಇದೆ. ಮುಂದೆ ಓದಿ.
ಕಾರ್ಮಿಕರಿಗೆ ಸುರಕ್ಷತೆ
ಮೇಲ್ಮನೆಯಲ್ಲಿ ಮಸೂದೆಗಳನ್ನು ಮಂಡಿಸಿದ ಕಾರ್ಮಿಕ ಖಾತೆ ರಾಜ್ಯ ಸಚಿವ ಸಂತೋಷ್ ಗಾಂಗ್ವರ್, ಈ ಮಸೂದೆಗಳು ಕಾರ್ಮಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲಿವೆ ಎಂದರು. ಜಗತ್ತಿನಾದ್ಯಂತ ಇರುವ ಕಾರ್ಮಿಕ ಗುಣಮಟ್ಟಕ್ಕೆ ಸಮನಾಗಿ ಸುಧಾರಣೆ ತರುವ ಮೂಲಕ ವಿದೇಶಿ ಹೂಡಿಕೆಯನ್ನು ಹೆಚ್ಚಿಸಲು ನೆರವಾಗಲಿದೆ. ಈಗಾಗಲೇ 16 ರಾಜ್ಯಗಳು, 300ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳು ಸರ್ಕಾರದ ಅನುಮತಿ ಇಲ್ಲದೆ ಉದ್ಯೋಗ ಕಡಿತ ಮಾಡುವ, ಮುಚ್ಚುವ ಅವಕಾಶಗಳನ್ನು ನೀಡಿವೆ ಎಂದು ಸಚಿವರು ತಿಳಿಸಿದರು.
ಸರ್ಕಾರದ ಅನುಮತಿ ಬೇಡ
ಈ ಮಸೂದೆಗಳು ಕೆಲಸಗಾರರನ್ನು ಕಿತ್ತುಹಾಕಲು ಮತ್ತು ಅವರ ಪ್ರತಿಭಟನೆಯ ಹಕ್ಕುಗಳನ್ನು ಮೊಟಕುಗೊಳಿಸುವುದನ್ನು ಸುಲಭಗೊಳಿಸುವಂತಿವೆ. 300ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳು ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೆಯೇ ಅವರನ್ನು ಕೆಲಸದಿಂದ ತೆಗೆದುಹಾಕಲು ಕೈಗಾರಿಕಾ ಸಂಬಂಧಿತ ಸಂಹಿತೆ ಅನುವು ಮಾಡಿಕೊಡುತ್ತದೆ. ಇದುವರೆಗೂ 100 ಉದ್ಯೋಗಿಗಳಿರುವ ಕಂಪೆನಿಗಳಿಗೆ ಮಾತ್ರ ಈ ಅವಕಾಶವಿತ್ತು ಎಂದು ವಿರೋಧಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳು ಮಸೂದೆಗೆ ಅಸಮಾಧಾನ ವ್ಯಕ್ತಪಡಿಸಿವೆ.
ಪ್ರತಿಪಕ್ಷಗಳ ಬಹಿಷ್ಕಾರವೇ ಬಂಡವಾಳ: ಒಂದೇ ದಿನ 7 ಮಸೂದೆ ಪಾಸ್
ನೋಟಿಸ್ ಇಲ್ಲದೆ ಮುಷ್ಕರ ಮಾಡುವಂತಿಲ್ಲ
ಇದೇ ಕಾನೂನಿನಡಿ 60 ದಿನಗಳ ಪೂರ್ವ ನೋಟಿಸ್ ಇಲ್ಲದೆ ಯಾವುದೇ ಕೈಗಾರಿಕೆಯ ಕೆಲಸಗಾರ ಮುಷ್ಕರ ನಡೆಸುವಂತಿಲ್ಲ. ನೀರು, ವಿದ್ಯುತ್, ನೈಸರ್ಗಿಕ ಅನಿಲ, ದೂರವಾಣಿ ಮತ್ತು ಇತರೆ ಅಗತ್ಯ ಸೇವೆಗಳಂತಹ ಸಾರ್ವಜನಿಕ ಸೇವೆಗಳಿಗೆ ಮಾತ್ರ ಈ ನಿರ್ಬಂಧವಿತ್ತು. ಅಗತ್ಯ ಸೇವೆಗಳ ಕೆಲಸಗಾರರು ಯಾವುದೇ ಮುಷ್ಕರಕ್ಕೆ ಆರು ವಾರದ ಮುನ್ನ ನೋಟಿಸ್ ನೀಡಬೇಕು.
ಅಧಿವೇಶನ ಅಂತ್ಯ
ಅಕ್ಟೋಬರ್ 1ರವರೆಗೆ ನಿಗದಿಯಾಗಿದ್ದ ರಾಜ್ಯಸಭೆ ಅಧಿವೇಶನವನ್ನು ಕೊರೊನಾ ವೈರಸ್ ಸೋಂಕಿನ ಹೆಚ್ಚಳ ಮತ್ತು ವಿಪಕ್ಷಗಳ ಪ್ರತಿಭಟನೆ ಕಾರಣ ಹತ್ತು ಕಲಾಪಗಳಿಗೆ ಮೊಟಕುಗೊಳಿಸಲಾಗಿದೆ. ಸದನವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ. ಈ ಹತ್ತು ದಿನದಲ್ಲಿ 25 ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಆರು ಮಸೂದೆಗಳನ್ನು ಮಂಡಿಸಲಾಗಿದೆ. ಒಟ್ಟು 198 ಸಂಸದರು ವಿವಿಧ ಮಸೂದೆಗಳ ಚರ್ಚೆಯಲ್ಲಿ ಭಾಗಿಯಾಗಿದ್ದರು.