ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಪ್ರವೇಶ, ಕಾಂಗ್ರೆಸ್ ಇಂಗಿತ
ನವದೆಹಲಿ, ಫೆಬ್ರವರಿ 17: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್, ಬಿಹಾರದಲ್ಲಿನ ಚುನಾವಣೆಗೆ ಸಜ್ಜಾಗಲು ಇನ್ನೂ 8 ತಿಂಗಳು ಬಾಕಿಯಿದೆ. ಈ ನಡುವೆ ರಾಜ್ಯಸಭೆ ಚುನಾವಣೆಯತ್ತ ಗಮನ ಕೇಂದ್ರೀಕರಿಸಿದೆ.
ಪಕ್ಷ ಸಂಘಟನೆಗೆ ಒತ್ತು ನೀಡಿರುವ ಕಾಂಗ್ರೆಸ್, ರಾಜ್ಯಸಭೆಗೆ ಯಾರನ್ನು ಕಳಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಅವರನ್ನು ರಾಜ್ಯಸಭೆಗೆ ಕಳಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಹಬ್ಬಿದೆ.
ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?
ಪಕ್ಷದ ಹಿರಿಯ ಸದಸ್ಯರಾದ ಅಂಬಿಕಾ ಸೋನಿ, ಗುಲಾಮ್ ನಬಿ ಆಜಾದ್ ಮತ್ತು ದಿಗ್ವಿಜಯ ಸಿಂಗ್ ಅವರ ರಾಜ್ಯಸಭೆ ಅಧಿಕಾರಾವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಛತ್ತೀಸ್ ಗಡ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯದ ಕೋಟಾದಿಂದ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
2019ರಲ್ಲಿ ಸಕ್ರಿಯ ರಾಜಕೀಯದಲ್ಲಿರುವ ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದ ಚುನಾವಣೆಯ ಉಸ್ತುವಾರಿಗಳಲ್ಲಿ ಒಬ್ಬರೆನಿಸಿದ್ದರು. ಇನ್ನೂ ಶಾಸಕಿಯೂ ಆಗಿರದ ಪ್ರಿಯಾಂಕಾ ಅವರನ್ನು ಮೇಲ್ಮನೆಗೆ ಕಳಿಸುವ ಬಗ್ಗೆ ಕಾಂಗ್ರೆಸ್ಸಿನಲ್ಲಿ ಒತ್ತಡ ಹೆಚ್ಚಾಗಿದೆ. ಛತ್ತೀಸ್ ಗಡ ದ ನಾಯಕರು ಈಗಾಗಲೇ ಪ್ರಿಯಾಂಕಾ ಗಾಂಧಿ ಪ್ರವೇಶವನ್ನು ಬೆಂಬಲಿಸಲು ಪ್ರಸ್ತಾವನೆಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿದ್ದಾರೆ.>ಆದರೆ ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಸಭೆಗೆ ಕಳಹಿಸುವ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ
ಜ್ಯೋತಿರಾದಿತ್ಯಾ ಸಿಂಧಿಯಾ, ರಣದೀಪ್ ಸುರ್ಜೇವಾಲ ಹಾಗೂ ಆರ್ ಪಿಎನ್ ಸಿಂಗ್ ರನ್ನು ಮೇಲ್ಮನೆಗೆ ಕಳಿಸಲು ಕಾಂಗ್ರೆಸ್ ಸಜ್ಜಾಗಿದೆ. ಈ ಮೂರು ರಾಜ್ಯಗಳಲ್ಲದೆ ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಈ ಬಾರಿ ಹೆಚ್ಚು ರಾಜ್ಯಸಭೆ ಸ್ಥಾನ ಗಳಿಸುವ ನಿರೀಕ್ಷೆಯಲ್ಲಿದೆ.
ರಾಜಸ್ಥಾನದಿಂದ ಮೂರು, ಮಧ್ಯಪ್ರದೇಶದಿಂದ 2, ಛತ್ತೀಸ್ ಗಢದಿಂದ 2, ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ತಲಾ 1ಸ್ಥಾನ ಗಳಿಸುವ ನಿರೀಕ್ಷೆ ಹೊಂದಿದೆ.
ಮೋತಿಲಾಲ್ ವೋರಾ, ಮಧುಸೂದನ್ ಮಿಸ್ತ್ರಿ, ಕುಮಾರಿ ಸೆಲ್ಜಾ, ದಿಗ್ವಿಜಯ್ ಸಿಂಗ್, ಬಿಕೆ ಹರಿಪ್ರಸಾದ್, ಎಂವಿ ರಾಜೀವ್ ಗೌಡ ಅವರ ಅವಧಿ ಏಪ್ರಿಲ್ ತಿಂಗಳಿಗೆ ಮುಗಿಯಲಿದೆ. ಈ ಪೈಕಿ ದಿಗ್ವಿಜಯ್ ಸಿಂಗ್, ಸೆಲ್ಜಾ, ವೋರಾ ಪುನರಾಯ್ಕೆ ಖಚಿತವಾಗಿದೆ.
ಫೆಬ್ರವರಿ, ಜೂನ್, ಜುಲೈ ಹಾಗೂ ನವೆಂಬರ್ ಹೀಗೆ ನಾಲ್ಕು ಹಂತಗಳಲ್ಲಿ 60 ಸ್ಥಾನಗಳಿಗಾಗಿ ರಾಜ್ಯಸಭೆ ಚುನಾವಣೆ ನಡೆಯಲಿದೆ. ಸದ್ಯ 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ 82 ಸ್ಥಾನ, ಕಾಂಗ್ರೆಸ್ 46 ಸ್ಥಾನ, 12 ನಾಮಾಂಕಿತ ಸದಸ್ಯರಿದ್ದಾರೆ.