ರಾಜ್ಯಸಭೆ ಸೋಲು: ಅಮಿತ್ ಶಾ ಮುಂದೆ ರಾಹುಲ್ ಕಲಿಯಬೇಕಾದ್ದು ಬೆಟ್ಟದಷ್ಟು
ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಜಯಗಳಿಸಿದ್ದಾರೆ. ಕರ್ನಾಟಕದ ಬಿ ಕೆ ಹರಿಪ್ರಸಾದ್ ಸೋಲು ಅನುಭವಿಸಿದ್ದಾರೆ. ಅಷ್ಟೊಂದು ಸುದ್ದಿಯಿಲ್ಲದೇ ನಡೆಯುವ ಈ ಚುನಾವಣೆ ಈ ಬಾರಿ ಸುದ್ದಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ಸಿನ ನಾನಾ..ನೀನಾ ಪೈಪೋಟಿಯಿಂದ.
ಇತಿಹಾಸದಲ್ಲೇ ಇದೇ ಮೊದಲ ಬಾರಿ ಎನ್ನುವಂತೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಲೋಕಸಭೆಯ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಮತ್ತೀಗ ರಾಜ್ಯಸಭೆಯ ಉಪಸಭಾಪತಿ..ಹೀಗೆ ಎಲ್ಲಾ ಸರ್ವೋಚ್ಚ ಸಾಂವಿಧಾನಿಕ ಹುದ್ದೆಗಳಿಗೆ ಎನ್ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದವರು ಆಯ್ಕೆಯಾಗಿದ್ದಾರೆ.
ಜಂತರ್ ಮಂತರ್ ನಲ್ಲಿ ಮೋದಿ ವಿರುದ್ಧ ರಾಹುಲ್ ಗುಡುಗು!
ರಾಜ್ಯಸಭೆಯಲ್ಲಿ ಸೋಲಾಗಲು ಕಾರಣವೇನು ಎನ್ನುವುದನ್ನು ಯುಪಿಎ ಮೈತ್ರಿಕೂಟದಲ್ಲಿ ಆತ್ಮಾವಲೋಕನ ಮಾಡಿಕೊಂಡವರು ಬೊಟ್ಟು ತೋರಿಸುವುದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಡೆಗೆ. ಎಲ್ಲರನ್ನೂ ಒಗ್ಗೂಡಿಸುವ ಕಲೆ ರಾಹುಲ್ ಗೆ ಸಿದ್ದಿಸಿಲ್ಲ ಎಂದು ಆಪ್ ಆದ್ಮಿ ಪಕ್ಷದ ಮುಖಂಡರು ಬಹಿರಂಗವಾಗಿಯೇ ಹೇಳಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ರಾಹುಲ್ ವಿರುದ್ದ ಕಿಡಿಕಾರಿದ್ದಾರೆ.
ಯುಪಿಎ ಮತ್ತು ಎನ್ಡಿಎ ಮೈತ್ರಿಕೂಟದಿಂದ ಹೊರತಾದ ಪ್ರಾದೇಶಿಕ ಪಕ್ಷಗಳ ಮನವೊಲಿಕೆಗೆ ಕನಿಷ್ಠ ಪ್ರಯತ್ನವನ್ನೂ ರಾಹುಲ್ ಗಾಂಧಿ ಮಾಡಲಿಲ್ಲ. ಇವರ ಕಾರ್ಯಶೈಲಿ ಹೀಗೇ ಮುಂದುವರಿದರೆ, ಮೋದಿ ವಿರುದ್ದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೆಣಸುವುದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ ಎನ್ನುತ್ತಾರೆ ಯುಪಿಎ ಮೈತ್ರಿಕೂಟದ ಕೆಲವು ಸದಸ್ಯರು.
ಲೋಕಸಭೆ ಚುನಾವಣೆ : ದಕ್ಷಿಣದ ರಾಜ್ಯಗಳಿಗೆ ಬೆಂಗಳೂರಲ್ಲಿ ಅಮಿತ್ ಶಾ ಕಚೇರಿ!
ಗೆಲುವಿಗೆ ಅಷ್ಟೇನೂ ತ್ರಾಸ ಪಡಬೇಕಾಗಿಲ್ಲ ಎನ್ನುವುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಗೊತ್ತಿದ್ದರೂ, ಮೈತ್ರಿಕೂಟದಿಂದ ಹೊರತಾದ ಪಕ್ಷಗಳನ್ನು ಮನವೊಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾದರು. ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ಕಾಂಗ್ರೆಸ್ಸಿನ ಮೂರು ಸದಸ್ಯರು ಮತದಾನದಿಂದ ದೂರವಾಗಿದ್ದದ್ದು.
ಜೆಡಿಯು ಮುಖಂಡನನ್ನು ತಮ್ಮ ಅಭ್ಯರ್ಥಿಯನ್ನಾಗಿ ಮಾಡಿದ ಶಾ
ಅಮಿತ್ ಶಾ ಅವರ ಮತ್ತೊಂದು ಪ್ರಮುಖ ನಡೆಯೆಂದರೆ, ಉಪಸಭಾಪತಿ ಹುದ್ದೆಗೆ ಬಿಜೆಪಿಯ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಜೆಡಿಯು ಮುಖಂಡನನ್ನು ತಮ್ಮ ಅಭ್ಯರ್ಥಿಯನ್ನಾಗಿ ಮಾಡಿದ್ದು. ಇದರಿಂದ ಅಮಿತ್ ಶಾ ಜೊತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡಾ ತನ್ನ ಅಭ್ಯರ್ಥಿಯ ಗೆಲುವಿಗೆ ಪಣತೊಟ್ಟಿದ್ದು ಒಂದೆಡೆಯಾದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಜೆಡಿಯು ದೂರವಾಗದಂತೆ ನೋಡಿಕೊಳ್ಳಲು, ಅಮಿತ್ ಶಾ ಇಟ್ಟ ಚಾಣಾಕ್ಷ ನಡೆಯಿದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ರಾಹುಲ್ ಬಾಬಾ, ನಿಮಗೆ ಇಟಲಿ ಭಾಷೇಲಿ ಉತ್ತರ ನೀಡ್ತಿದ್ದೆ: ಶಾ ವ್ಯಂಗ್ಯ
28 ಸದಸ್ಯರ ಮತ ಎನ್ಡಿಎ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ
ಇತ್ತ ಎರಡೂ ಮೈತ್ರಿಕೂಟದಿಂದ ಹೊರತಾದ ಬಿಜು ಪಟ್ನಾಯಕ್ ಅವರ ಬಿಜೆಡಿ (09) , ಚಂದ್ರಶೇಖರ್ ರಾವ್ ಅವರ ಟಿಆರ್ಎಸ್ (06) ಮತ್ತು ಎಐಎಡಿಎಂಕೆ (13) ಬೆಂಬಲಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಮೂರು ಪಕ್ಷದಿಂದ ಸೇರಿ ಒಟ್ಟು 28 ಸದಸ್ಯರ ಮತ ಎನ್ಡಿಎ ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು.
ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ರಾಹುಲ್ ಮುಂದಾಗಲಿಲ್ಲ
ಇನ್ನೊಂದೆಡೆ, ಯುಪಿಎ ಮೈತ್ರಿಕೂಟದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ರಾಹುಲ್ ಗಾಂಧಿ ಮುಂದಾಗಲಿಲ್ಲ ಎನ್ನುವ ಮಾತಿದೆ. ನಮ್ಮ ಪಕ್ಷದ ಮೂವರು ಸದಸ್ಯರಲ್ಲಿ ಯಾರೊಬ್ಬರನ್ನೂ ರಾಹುಲ್ ಮಾತನಾಡಿಸಲಿಲ್ಲ. ತಮ್ಮ ಪಕ್ಷದ ಸದಸ್ಯರಿಗೇ ಬಿ ಕೆ ಹರಿಪ್ರಸಾದ್ ಪರ ಮತ ಚಲಾಯಿಸಲು ರಾಹುಲ್ ಕೇಳಿಕೊಂಡಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷ ಮತದಾನದಿಂದ ದೂರ ಉಳಿಯಿತು ಬೇರೆ..
ಏಳು ಸದಸ್ಯರು ಮತದಾನಕ್ಕೆ ಗೈರಾಗಿದ್ದರು
ಮತ್ತೊಂದು ಗಮನಿಸಬೇಕಾದ ಅಂಶವೇನಂದರೆ ವಿವಿಧ ಕಾರಣಗಳಿಂದ, ಕಾಂಗ್ರೆಸ್ ಜೊತೆಗಿರುವ ಟಿಎಂಸಿ, ಡಿಎಂಕೆ, ಎಸ್ಪಿಯ ಏಳು ಸದಸ್ಯರು ಮತದಾನಕ್ಕೆ ಗೈರಾಗಿದ್ದರು. ಬಿಜೆಪಿ-ಪಿಡಿಪಿ ಮೈತ್ರಿ ಮುರಿದಿದ್ದರೂ, ಪಿಡಿಪಿ ಸದಸ್ಯರ ಮನವೊಲಿಸುವ ಕೆಲಸಕ್ಕೆ ರಾಹುಲ್ ಗಾಂಧಿ ಮುಂದಾಗಲಿಲ್ಲ. ಪಿಡಿಪಿಯ ಇಬ್ಬರು ಸದಸ್ಯರಿದ್ದಾರೆ.
ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವೂ ಕೈಗೂಡಲಿಲ್ಲ
ಇವೆಲ್ಲಕ್ಕಿಂತ ಹೆಚ್ಚಾಗಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವೂ ಕೈಗೂಡಲಿಲ್ಲ. ಒಟ್ಟಿನಲ್ಲಿ, ಅವಿಶ್ವಾಸ ನಿರ್ಣಯದ ಮೇಲಿನ ಸೋಲಿನಂತೆ, ರಾಜ್ಯಸಭೆಯ ಉಪಾಧ್ಯಕ್ಷರ ಚುನಾವಣೆಯಲ್ಲೂ ರಾಹುಲ್ ಗಾಂಧಿ ವಿಫಲರಾದರು. ಮುಂಬರುವ ಚುನಾವಣೆಯಲ್ಲಿ ಮೋದಿ ವಿರುದ್ದ ಎಲ್ಲರೂ ಒಂದಾಗಬೇಕು ಎನ್ನುವ ರಾಹುಲ್ ಗಾಂಧಿ ನಿಲುವಿಗೆ ಸೋಲಾಗುತ್ತಲೇ ಇದೆ. ರಾಹುಲ್ ಗಾಂಧಿ ಪಾಠ ಕಲಿಯುವುದು ಯಾವಾಗ ಎನ್ನುವುದೇ ಇಲ್ಲಿ ದೊಡ್ಡ ಪ್ರಶ್ನೆ.