ಇಮ್ರಾನ್ ಖಾನ್ 'ಗೂಗ್ಲಿ'ಗೆ ರಾಜನಾಥ್ ಸಿಂಗ್ 'ರಿವರ್ಸ್ ಸ್ವೀಪ್'
ನವದೆಹಲಿ, ಸೆ 1: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಡೆಯಿಂದ ಬರುತ್ತಿರುವ 'ಅಣುಯುದ್ದ'ದ ಬೆದರಿಕೆಗೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರ್ಜರಿ ತಿರುಗೇಟು ನೀಡಿದ್ದಾರೆ.
ಕಾಶ್ಮೀರ ವಿಚಾರವನ್ನು ಜೀವಂತವಾಗಿಟ್ಟು, ಅಲ್ಲಿನ ಜನಬೆಂಬಲ ಪಡೆಯುವ ತಂತ್ರಗಾರಿಕೆ ಬಳಸುತ್ತಿರುವ, ಇಮ್ರಾನ್ ಖಾನ್, " ಕಾಶ್ಮೀರದ ಮೇಲೆ ಭಾರತ ನಡೆಸುತ್ತಿರುವ ದೌರ್ಜನ್ಯವನ್ನು ತಡೆಯದಿದ್ದಲ್ಲಿ, ಎರಡು ಅಣ್ವಸ್ತ್ರ ರಾಷ್ಟ್ರಗಳು ಯುದ್ದಕ್ಕೆ ಇಳಿಯುವುದು ನಿಶ್ಚಿತ" ಎಂದು ಹೇಳಿದ್ದರು.
ಪಾಕ್ ಮುಖಂಡನ ಬಾಯಲ್ಲಿ 'ಸಾರೇ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ'
ಇದಕ್ಕೆ ಪ್ರತಿಕ್ರಿಯಿಸಿರುವ ರಾಜನಾಥ್ ಸಿಂಗ್, " ಅಣ್ವಸ್ತ್ರವನ್ನು ನಾವು ಮೊದಲು ಬಳಸುವುದಿಲ್ಲ ಎನ್ನುವ ನಮ್ಮ ನಿಲುವಿಗೆ ನಾವು ಬದ್ದರಾಗಿದ್ದೇವೆ. ಆದರೆ, ಈ ನೀತಿ ಪರಿಸ್ಥಿತಿಯನ್ನು ನೋಡಿ ಬದಲಾಯಿಸ ಬೇಕಾಗಿ ಬರಬಹುದು" ಎಂದು ಸಿಂಗ್, ತಿರುಗೇಟು ನೀಡಿದ್ದಾರೆ.
ಕಾಶ್ಮೀರಕ್ಕಾಗಿ ಎಲ್ಲಾ ಮುಸ್ಲಿಂ ರಾಷ್ಟ್ರಗಳು ಒಂದಾಗಬೇಕು ಎಂದು ಇಮ್ರಾನ್ ಖಾನ್ ಮನವಿ ಮಾಡಿದ್ದರು. ಆದರೆ, ಪಾಕ್ ಮನವಿಗೆ ಸೊಪ್ಪು ಹಾಕದ ಈ ರಾಷ್ಟ್ರಗಳು, ಭಾರತದ ಪ್ರಧಾನಿ ಮೋದಿಯ ಕಳೆದ ಕೊಲ್ಲಿ ರಾಷ್ಟ್ರಗಳ ಭೇಟಿಯ ವೇಳೆ, ಮೋದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದು, ಪಾಕ್ ಅವಮಾನಕ್ಕೆ ಕಾರಣವಾಗಿತ್ತು.
ಉಭಯ ದೇಶಗಳ ನಡುವೆ ಯುದ್ದದ ವಾತಾವರಣವಿದೆ ಎನ್ನುವುದು ಪಾಕಿಸ್ತಾನದ ಕಪೋಕಲ್ಪಿತ ಸುದ್ದಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿಚಾರವನ್ನು ಜೀವಂತವಾಗಿಡಲು, ಪಾಕ್ ಈ ರೀತಿಯ ಹೇಳಿಕೆಯನ್ನು ನೀಡುತ್ತಿದೆ ಎಂದು ಭಾರತ ಸ್ಪಷ್ಟ ಪಡಿಸಿದೆ.
ಗಮನಿಸಬೇಕಾದ ಅಂಶವೇನಂದರೆ, ಪಾಕ್ ಪ್ರಧಾನಿ ಇಮ್ರಾನ್, ಯುದ್ದ, ಅದೂ ಅಣುಯುದ್ದದ ಬಗ್ಗೆ ಮಾತನಾಡುತ್ತಿದ್ದರೆ, ಅಲ್ಲಿನ ವಿದೇಶಾಂಗ ಖಾತೆಯ ಸಚಿವ ಖುರೇಷಿ, ಭಾರತದ ಜೊತೆಗೆ ಮಾತುಕತೆಗೆ ಸಿದ್ದ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.