ಬಾಬಾಜಿ ಹಾಗೂ ಗುರುರಾಯರ ಕೃಪೆಯಿಂದ ರಜನಿ ರಾಜಕೀಯ ಎಂಟ್ರಿ
ಬೆಂಗಳೂರು, ಡಿಸೆಂಬರ್ 31: ಸೂಪರ್ ಸ್ಟಾರ್ ರಜನಿಕಾಂತ್ ಅವರು ಆಧಾತ್ಮ ಗುರುಗಳ ಮೇಲೆ ಅಪಾರ ನಂಬಿಕೆ ಇರಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 'ತಾವು ರಾಜಕೀಯ ಪ್ರವೇಶದ ಬಗ್ಗೆ ನಿರ್ಧಾರ ಕೈಗೊಳ್ಳುವುದು ದೈವೇಚ್ಛೆ, ಗುರುಗಳ ಇಚ್ಛೆ, ಅಭಿಮಾನಿಗಳ ಆದೇಶ' ಎಂದೆಲ್ಲ ಹಲವು ಬಾರಿ ರಜನಿ ಅವರು ಹೇಳಿದ್ದು ನೆನಪಿರಬಹುದು. ಈಗ ಈ ಸಮಯ ಬಂದಿದೆ.
ರಜನಿಕಾಂತ್ ಹಿಮಾಲಯದ ಬಾಬಾ ಒಬ್ಬರನ್ನು ಬಹಳ ನಂಬುತ್ತಾನೆ. ಏನೇ ಮಹತ್ವದ ಕೆಲಸ ಮಾಡಬೇಕಿದ್ದರೂ ಅವನಿಗೆ ಬಾಬಾ ಅಪ್ಪಣೆ ಆಗಬೇಕು. ಇನ್ನು ರಾಜಕೀಯಕ್ಕೆ ಹೋಗುವುದಕ್ಕೆ ಕೂಡ ಬಾಬಾ ಅವರ ಅಪ್ಪಣೆಗಾಗಿ ರಜನಿ ಕಾಯುತ್ತಿದ್ದಾರೆ.
'ಹಾಗೇನಾದರೂ ಬಾಬಾ ಆಶೀರ್ವಾದ ಮಾಡಿದರೆ, ರಜನಿ ಖಂಡಿತ ರಾಜಕೀಯಕ್ಕೆ ಬರುತ್ತಾನೆ. ಅವನ ಮಾತುಗಳಲ್ಲಿ ಕೂಡ ರಾಜಕೀಯಕ್ಕೆ ಬರುವ ಬಯಕೆ ಎದ್ದು ಕಾಣುತ್ತಿದೆ ಎಂದು ರಜನಿ ಅವರ ಪರಮಾಪ್ತ ಗೆಳೆಯ ರಾಜ್ ಬಹದ್ದೂರ್ ಅವರು ಒನ್ ಇಂಡಿಯಾ ಜತೆ ರಜನಿ ಬಗ್ಗೆ ಹೇಳಿದ್ದರು.
ಅದರಂತೆ, ಉತ್ತರಾಖಂಡ್ ರಾಜ್ಯದ ಹಿಮಾಲಯದ ತಪ್ಪಲಿನಲ್ಲಿದ್ದ ಬಾಬಾ ಅವರ ಅನುಗ್ರಹ ರಜನಿ ಅವರಿಗೆ ಸಿಕ್ಕಿದೆ. ಮಾರ್ಚ್ನಲ್ಲೂ ಸಹ ರಜನಿ ಅವರು ಹಿಮಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಜತೆಗೆ ಗುರುರಾಯರ ಅನುಗ್ರಹ ಪಡೆಯಲು ಮಂತ್ರಾಲಯಕ್ಕೆ ಬರಲಿದ್ದಾರೆ.
ಹಿಮಾಲಯದಲ್ಲಿ ಧ್ಯಾನ ಕೇಂದ್ರ ನಿರ್ಮಾಣ
ಭಾರತೀಯ ಯೋಗದ ಸತ್ಸಂಗ ಸೊಸೈಟಿಯ ಶತಮಾನೋತ್ಸವ ಅಂಗವಾಗಿ ರಜನಿ ಮತ್ತವರ ಗೆಳೆಯರು ಹಿಮಾಲಯದಲ್ಲಿ ಧ್ಯಾನ ಕೇಂದ್ರ ನಿರ್ಮಿಸಿದ್ದಾರೆ. ಉತ್ತರಾಖಂಡ್ನ ದ್ರೋಣಗಿರಿ ಪರ್ವತದಲ್ಲಿ ಧ್ಯಾನ ಕೇಂದ್ರ ಸ್ಥಾಪಿಸಲಾಗಿದೆ. ಚಿತ್ರದಲ್ಲಿ ಆಪ್ತ ಗೆಳೆಯರೊಂದಿಗೆ ರಜನಿಕಾಂತ್
ರಜನಿ ಅವರ ಗುರು ಬಾಬಾಜಿ
ರಜನಿ ಅವರ ಆಧ್ಯಾತ್ಮ ಗುರು ಮಹಾವತಾರ ಬಾಬಾಜಿ ಅವರು ಕಡಲೂರಿನ ಪರಂಗಿಪೇಟ್ ಮೂಲದವರು. ಅಲ್ಲಿಂದ ಶ್ರೀಲಂಕಾಕ್ಕೆ ತೆರಳಿದರು. ಅಲ್ಲಿಂದ ಹಿಮಾಲಯದ ತಪ್ಪಲಿನಲ್ಲಿ ನೆಲೆಸಿ ಧಾನ್ಯಸ್ಥರಾದರು ಎನ್ನಲಾಗಿದೆ. ಈ ಬಗ್ಗೆ ರಜನಿ ನಟನೆಯ ಬಾಬಾ ಚಿತ್ರದಲ್ಲಿ ತೋರಿಸಲಾಗಿದೆ. ಈ ಬಾಬಾ ಅವರ ಅನುಗ್ರಹ ಪಡೆದ ಬಳಿಕ ರಜನಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಆಪ್ತರ ಹೇಳಿಕೆ.
ರಾಜಕೀಯ ಪ್ರವೇಶದ ಬಗ್ಗೆ ಅನುಗ್ರಹ
ರಾಯರ ಸನ್ನಿಧಾನಕ್ಕೆ ಕುಟುಂಬ ಸಮೇತರಾಗಿ ಆಗಾಗ ರಜನಿಕಾಂತ್ ಅವರು ಭೇಟಿ ನೀಡುತ್ತಿರುತ್ತಾರೆ. ವರನಟ ಡಾ.ರಾಜ್ ಕುಮಾರ್ ಅವರಂತೆಯೇ ರಜನಿಕಾಂತ್ ಸಹ ರಾಯರ ಮಹಾನ್ ಆರಾಧಕರು. ರಜನಿ ಅವರು 'ಶ್ರೀರಾಘವೇಂದ್ರ' (1985) ಎಂಬ ಚಿತ್ರದಲ್ಲಿ ರಾಯರ ಭಕ್ತನಾಗಿ ಅಭಿನಯಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಮಂತ್ರಾಲಯಕ್ಕೆ ಬಂದಿದ್ದ ರಜನಿ ಅವರು ರಾಜಕೀಯ ಪ್ರವೇಶದ ಬಗ್ಗೆ ಅನುಗ್ರಹ ಬೇಡಿದ್ದರು ಎಂಬ ಮಾಹಿತಿಯಿದೆ.
ಧ್ಯಾನವೇ ನನ್ನ ಯಶಸ್ಸಿನ ಗುಟ್ಟು
ಧ್ಯಾನವೇ ನನ್ನ ಯಶಸ್ಸಿನ ಗುಟ್ಟು ಎಂದು ಅನೇಕ ಬಾರಿ ಹೇಳಿಕೊಂಡಿರುವ ರಜನಿಕಾಂತ್ ಅವರಿಗೆ ಸೋಲಿನ ಕಹಿ ಸಾಕಷ್ಟು ಬಾರಿ ಎದುರಾಗಿದೆ. ಬಾಬಾ, ಲಿಂಗಾ ಚಿತ್ರಗಳು ಸೋತಾಗ ನಿರ್ಮಾಪಕರು, ವಿತರಿಕರಿಗೆ ತಮ್ಮ ಕೈಲಾದ ಆರ್ಥಿಕ ನೆರವು ನೀಡಿದ್ದಾರೆ. ಮಠ ಮಾನ್ಯಗಳಿಗೆ ಕೋಟ್ಯಂತರ ದಾನ ದೇಣಿಗೆ ನೀಡುತ್ತಲೇ ಇರುತ್ತಾರೆ. ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ ಎಂಬ ಭಾವನೆ ಇಟ್ಟುಕೊಂಡಿದ್ದಾರೆ.