ನಾಲ್ಕು ಗಂಟೆಗಳ ಕಾಲ ಕಂಬಿ ಹಿಡಿದೇ ತೂಗಾಡುತ್ತಿದ್ದೆವು; ದುರಂತದಲ್ಲಿ ಬದುಕಿ ಬಂದವರ ಕಥೆ
ಡೆಹ್ರಾಡೂನ್, ಫೆಬ್ರುವರಿ 09: "ಸುರಂಗದ ಬಳಿ ಕೆಲಸ ಮಾಡುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಶಬ್ದ ಕೇಳಿಸಿತು. ಜನರ ಕೂಗಾಟವೂ ಕೇಳಿಸುತ್ತಿತ್ತು. ಜನರು ನಮ್ಮನ್ನು ಹೊರಬರುವಂತೆ ಕೂಗಿಕೊಳ್ಳುತ್ತಿದ್ದರು. ಆದರೆ ನೋಡನೋಡುತ್ತಿದ್ದಂತೆ ಬೃಹತ್ ಪ್ರಮಾಣದಲ್ಲಿ ನೀರು ರಭಸವಾಗಿ ನುಗ್ಗುತ್ತಿರುವುದು ಕಂಡುಬಂತು. ನಾವು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ನಮ್ಮ ಕೈಗಳು ನಮ್ಮ ಜೀವವನ್ನೇ ಕಾಪಾಡಿದವು" ಎಂದು ಹಿಮಪ್ರವಾಹದಲ್ಲಿ ತಾವು ಗೆದ್ದುಬಂದ ಕಥೆಯನ್ನು ವಿವರಿಸಿದ್ದಾರೆ 28 ವರ್ಷದ ರಾಜೇಶ್ ಕುಮಾರ್.
ಹಿಮಪ್ರವಾಹದಿಂದ ಸಮೀಪದ ತಪೋವನ ಹೈಡ್ರೋಎಲೆಕ್ಟ್ರಿಕ್ ಕಾಂಪ್ಲೆಕ್ಸ್ಗೂ ನೀರು ನುಗ್ಗಿತ್ತು. ಅಲ್ಲೇ ಸುರಂಗದಲ್ಲಿ ರಾಜೇಶ್ ಕುಮಾರ್ ಹಾಗೂ ಇನ್ನಿತರ ಕೆಲಸಗಾರರು 300 ಮೀಟರ್ (ಸುಮಾರು 1000 ಅಡಿ) ಒಳಗೆ ಕೆಲಸ ಮಾಡುತ್ತಿದ್ದರು. ಸುರಂಗದಲ್ಲಿ ಸಿಲುಕಿದ್ದ ಅವರೆಲ್ಲರನ್ನೂ ರಕ್ಷಿಸಲಾಗಿದೆ. ಈ ಸಂದರ್ಭ ತಾವು ಪಾರಾದ ಕಥೆಯನ್ನು ರಾಜೇಶ್ ಕುಮಾರ್ ಹೇಳಿಕೊಂಡಿದ್ದಾರೆ. ಮುಂದೆ ಓದಿ...
ಸುರಂಗದಲ್ಲಿ ಸಿಲುಕಿಕೊಂಡಿದ್ದ ಹನ್ನೆರಡು ಮಂದಿ
ಹಿಮ ಪ್ರವಾಹ ಸಂಭವಿಸಿದ ಸಂದರ್ಭ ಸುರಂಗಕ್ಕೂ ನೀರು ಹರಿದು ಬಂದಿದ್ದು, ಅದರಲ್ಲಿ ಸುಮಾರು ಹನ್ನೆರಡು ಮಂದಿ ಸಿಕ್ಕಿಹಾಕಿಕೊಂಡಿದ್ದರು. ನೀರು ರಭಸವಾಗಿ ಬಂದಿದ್ದರಿಂದ ಓಡಿ ಹೋಗಲೂ ಆಗದೇ ಅದರೊಳಗೇ ಸಿಲುಕಿಕೊಂಡಿದ್ದರು. ಕೆಸರು, ನೀರಿನ ನಡುವೆ ಸಿಲುಕಿಕೊಂಡಿದ್ದ ಇವರೆಲ್ಲರನ್ನೂ ಇಂಡೋ-ಟೆಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸೋಮವಾರ ಸಂಜೆ ಚಮೋಲಿ ಜಿಲ್ಲೆಯ ನೆಲಮಾಳಿಗೆ ಸುರಂಗದಿಂದ ರಕ್ಷಿಸಿದ್ದಾರೆ.
ಉತ್ತರಾಖಂಡ ಹಿಮ ಪ್ರವಾಹ; ಅಷ್ಟಕ್ಕೂ ಘಟನೆ ಹಿಂದಿನ ಕಾರಣವೇನು?
"ಹಾಲಿವುಡ್ ಸಿನಿಮಾಗಳಲ್ಲಿ ನೋಡಿದ್ದೆವು"
"ಹೊರಗೆ ಜನರು ಕೂಗುತ್ತಿದ್ದುದನ್ನು ನೋಡಿ ನಾವು ಬೆಂಕಿ ಹತ್ತಿಕೊಂಡಿದೆ ಎಂದು ಭಾವಿಸಿದೆವು. ತಕ್ಷಣವೇ ಓಡಲು ಆರಂಭಿಸಿದೆವು. ಆದರೆ ಅದು ನೀರು ಎಂದು ಸೆಕೆಂಡುಗಳಲ್ಲೇ ಗೊತ್ತಾಯಿತು. ನೋಡನೋಡುತ್ತಿದ್ದಂತೆ ನೀರು ಆವರಿಸಿತ್ತು. ನಾವು ಸುರಂಗದ ಮೇಲ್ಫಾಗದ ಕಂಬಿಯನ್ನೇ ರಕ್ಷಣೆಗೆ ಹಿಡಿದುಕೊಂಡೆವು. ನಮಗೆ ಹಾಲಿವುಡ್ ಸಿನಿಮಾದಂಥ ಅನುಭವವಾಯಿತು" ಎಂದು ಹೇಳಿಕೊಂಡಿದ್ದಾರೆ.
|
"ನಾಲ್ಕು ಗಂಟೆಗಳ ಕಾಲ ಕಂಬಿ ಹಿಡಿದೇ ತೂಗಾಡುತ್ತಿದ್ದೆವು"
"ಸುರಂಗದ ಮೇಲ್ಭಾಗದ ಕಂಬಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರ ಇಟ್ಟುಕೊಂಡಿದ್ದೆವು. ಕಸ, ನೀರಿನ ನಡುವೆ ತಲೆ ಮೇಲಕ್ಕೆ ಎತ್ತಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದೆವು. ಒಬ್ಬೊರಿಗೊಬ್ಬರು ಧೈರ್ಯ ಹೇಳಿಕೊಳ್ಳುತ್ತಿದ್ದೆವು. ಆ ಧೈರ್ಯವೇ ನಮ್ಮನ್ನು ಕಾಪಾಡಿತು. ಏನೇ ಆಗಲಿ, ನಾವು ಹಿಡಿದುಕೊಂಡಿರುವ ಈ ರಾಡ್ ಗಳನ್ನು ಬಿಡಬಾರದು ಎಂದು ಒಬ್ಬೊರಿಗೊಬ್ಬರು ಹೇಳಿಕೊಳ್ಳುತ್ತಿದ್ದೆವು. ಕೊನೆಗೆ ನಮ್ಮ ಕೈಗಳು ನಮ್ಮ ಜೀವ ಉಳಿಸಿದವು" ಎಂದು ಭಾವುಕರಾದರು.
Video: ಉತ್ತರಾಖಂಡ್ ನಲ್ಲಿ ಕಾರ್ಮಿಕರ ರಕ್ಷಿಸಲು ಸುರಂಗಕ್ಕೆ ಇಳಿದ ಐಟಿಬಿಪಿ!
"ಬದುಕಿ ಬರುತ್ತೇವೆಂಬ ನಂಬಿಕೆಯೇ ಇರಲಿಲ್ಲ"
"ನೀರು, ಕಸ, ಕೆಸರು ಸ್ವಲ್ಪ ತಗ್ಗಿದ ಮೇಲೆ ಎಲ್ಲಿಂದಲೋ ಗಾಳಿ ಸಣ್ಣದಾಗಿ ಬೀಸಿದ ಅನುಭವವಾಯಿತು. ಕತ್ತಲೆ ನಡುವೆ ಮುಂದೆ ಕಂಬಿಗಳನ್ನು ಹಿಡಿದುಕೊಂಡೇ ಸಾಗಿದ ನಮಗೆ ಸಣ್ಣ ಕಿಂಡಿಯೊಂದು ಕಾಣಿಸಿತು. ಆದರೆ ಅದು ಎಲ್ಲಿಗೆ ಹೋಗುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ನಾವು ಬದುಕಿ ಹೊರ ಹೋಗುತ್ತೇವೆಂಬ ಭರವಸೆಯೂ ಇರಲಿಲ್ಲ. ಆದರೆ ಆ ಕಡೆಗೆ ಹೋದಾಗ ಸ್ವಲ್ಪ ಬೆಳಕು ಕೂಡ ಬಂದಿತ್ತು. ನಮ್ಮಲ್ಲೇ ಒಬ್ಬರಿಗೆ ಮೊಬೈಲ್ ಸಿಗ್ನಲ್ ಸಿಕ್ಕಿತು, ನಮ್ಮ ಜೀವ ಉಳಿದಂತಾಯಿತು. ಚಿಕ್ಕ ರಂಧ್ರದ ಮೂಲಕ ನಮ್ಮನ್ನು ರಕ್ಷಣಾ ಪಡೆ ಹೊರ ಕರೆತಂದರು. ಇದೊಂದು ಭಾವುಕ ಕ್ಷಣವೇ ಆಗಿತ್ತು" ಎಂದು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.