ಕೊರೊನಾ ಲಸಿಕೆ ನೀಡಿಕೆಗೆ ವಯಸ್ಸಿನ ಮಿತಿ ತೆಗೆದುಹಾಕಲು ರಾಜಸ್ಥಾನ, ಪಂಜಾಬ್ ಮುಖ್ಯಮಂತ್ರಿಗಳ ಮನವಿ
ನವದೆಹಲಿ, ಮಾರ್ಚ್ 24: ಕೊರೊನಾ ಲಸಿಕೆ ನೀಡಿಕೆಗಿರುವ ವಯಸ್ಸಿನ ಮಿತಿಯನ್ನು ತೆಗೆದುಹಾಕಲು ರಾಜಸ್ಥಾನ ಹಾಗೂ ಪಂಜಾಬ್ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಮಾರಕ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು. ಹೀಗಾಗಿ ಲಸಿಕೆ ನೀಡಿಕೆಗೆ ವಯೋಮಿತಿ ನಿಯಮ ತೆಗೆಯಿರಿ ಎಂದು ಕೇಳಿಕೊಂಡಿದ್ದಾರೆ.
ಕೋವಿಡ್ 19 ಲಸಿಕೆಗಳನ್ನು ಎಲ್ಲಾ ವಯಸ್ಸಿನವರಿಗೆ ಲಭ್ಯವಾಗುವ ಹಾಗೆ ಮಾಡುವುದರಿಂದ ಕೋವಿಡ್ ನ ರೂಪಾಂತರಿ ಅಲೆ ಅಥವಾ ಎರಡನೇ ಅಲೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ಸೂರತ್: ಒಂದೇ ದಿನ 34 ಮಂದಿ ಆಟೋ ಚಾಲಕರಿಗೆ ಕೊರೊನಾ ಸೋಂಕು
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈಗಾಗಲೇ ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ. ಆದರೂ, ಅತಿ ಶೀಘ್ರದಲ್ಲಿ ಹೆಚ್ಚು ಜನ ಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟಿಗೆ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಲಸಿಕೆ ವಿತರಣೆ ಬಗ್ಗೆ ಸರ್ಕಾರ ಗಮನ ಹರಿಸಬೇಕು.
ಕೋವಿಡ್-19 ವಿರುದ್ಧ ಗರಿಷ್ಠ ಲಸಿಕೆ ನೀಡುವ ಮೂಲಕ ಸಾರ್ವಜನಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು. ಆದ್ದರಿಂದ, ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕಬೇಕು ಮತ್ತು ಲಸಿಕೆ ಎಲ್ಲರಿಗೂ ಲಭ್ಯವಿರಬೇಕು ಎಂದು ಹೇಳಿದ್ದಾರೆ.
ಕೋವಿಡ್ 19 ರೂಪಾಂತರಿ ವೈರಸ್ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಆತಂಕಕಾರಿಯಾಗಿ ಕಾಣಿಸುತ್ತಿದೆ. ಲಸಿಕೆ ವಿತರಣೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.