ಜೈನರ ಸಲ್ಲೇಖನ ವ್ರತ ಕಾನೂನುಬಾಹಿರ ಆಚರಣೆಯಂತೆ!
ಜೈಪುರ, ಆಗಸ್ಟ್ 11 : ಜೈನ ಧರ್ಮದ ಹಲವಾರು ಆಚರಣೆಯಲ್ಲಿ ಸಲ್ಲೇಖನ ವ್ರತ ಅಗ್ರಮಾನ್ಯ ಪಡೆದಿದೆ. ಆದರೆ ರಾಜಸ್ತಾನ ಉಚ್ಚ ನ್ಯಾಯಾಲಯ ಸಲ್ಲೇಖನ ವ್ರತದ ಮೇಲೆ ಸೋಮವಾರ ನಿಷೇಧ ಹೇರಿದ್ದು, ಜೈನ ಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಸಲ್ಲೇಖನ ವ್ರತ ಅನುಸರಣೆ ಆತ್ಮಹತ್ಯೆಗೆ ಸಮಾನ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸುನೀಲ್ ಅಂಬ್ವಾವಿ ನೇತೃತ್ವದ ಖಂಡಪೀಠವು ಈ ತೀರ್ಮಾನ ಪ್ರಕಟಿಸಿದೆ.[ಭಾರತದ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಒಬಾಮಾ ಹೇಳಿದ್ದೇಕೆ?]
ಸಲ್ಲೇಖನ ವ್ರತವು ಕಾನೂನು ಬಾಹಿರವಾಗಿದೆ. ಇದು ಭಾರತೀಯ ದಂಡ ಸಂಹಿತೆ 306( ಆತ್ಮಹತ್ಯೆಗೆ ಪ್ರೇರಣೆ), 309 (ಆತ್ಮಹತ್ಯೆಗೆ ಯತ್ನ) ಅನುಸಾರ ಶಿಕ್ಷಾರ್ಹವಾಗಿದೆ. ಇದನ್ನು ಅನುಸರಿಸುವವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದೆ.
ಅರ್ಜಿ ಸಲ್ಲಿಸಿದವರು ಯಾರು? ಅರ್ಜಿಯಲ್ಲಿ ಏನಿತ್ತು?
ಸಲ್ಲೇಖನ ವ್ರತದ ವಿರುದ್ಧ ನಿಖಿಲ್ ಸೋನಿ ಎಂಬುವವರು 2006ರಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಳೆದ ಏಪ್ರಿಲ್ 23ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.
ಸೋನಿ ಅವರು ಈ ವ್ರತವು ಆತ್ಮಹತ್ಯೆ ಸಮಾನ. ಅನ್ನ-ನೀರು ತ್ಯಜಿಸಿ ಆಮರಣ ಉಪವಾಸ ಮಾಡಲಾಗುತ್ತದೆ. ಇದು ಬದುಕುವ ಹಕ್ಕಿನ ಉಲ್ಲಂಘನೆ. ದಯಾಮರಣಕ್ಕೆ ಅವಕಾಶ ಇಲ್ಲದಿರುವಾಗ, ಸತಿಪದ್ಧತಿ ಹಾಗೂ ಆತ್ಮಹತ್ಯೆ ನಿಷೇಧಿಸಿರುವಾಗ ಸಲ್ಲೇಖನ ವ್ರತಕ್ಕೆ ಹೇಗೆ ಅವಕಾಶ ನೀಡಲಾಗುತ್ತಿದೆ? ಇದನ್ನು ನಿಷೇಧಿಸಬೇಕು' ಎಂದು ಮನವಿ ಮಾಡಿದ್ದರು.
ಜೈನರ ವಾದವೇನು ?
ಸಲ್ಲೇಖನ ವ್ರತ ಜೈನರ ಪವಿತ್ರ ಆಚರಣೆ. ಜೈನ ಧರ್ಮದಲ್ಲಿ ಎಲ್ಲಾ ಆಚರಣೆಗಳಿಗಿಂತ ಇದು ವಿಭಿನ್ನ, ವಿಶೇಷವಾದುದು. ಇದು ಕೇವಲ ಸಾಯಲು ಮಾಡುವ ಉಪವಾಸವಲ್ಲ. ಮೋಕ್ಷ ಹೊಂದಲು ಮತ್ತು ಆತ್ಮವನ್ನು ಪವಿತ್ರಗೊಳಿಸಲು ನಡೆಯುವ ಅಂತಿಮ ತಪಸ್ಸು. ಕೋರ್ಟ್ ಇದರಲ್ಲಿ ಮಧ್ಯ ಪ್ರವೇಶಿಸಬಾರದು. ಧಾರ್ಮಿಕ ಆಚರಣೆಯಲ್ಲಿ ಮೂಗು ತೂರಿಸುವ ಕಾರ್ಯ ಮಾಡಬಾರದು ಎಂದು ಕೋರ್ಟಿನ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಸಲ್ಲೇಖನ ವ್ರತ ಎಂದರೇನು ?
ದೀಕ್ಷೆ ಸ್ವೀಕರಿಸಿದ ವ್ಯಕ್ತಿಯು ತನ್ನ ಇಚ್ಛೆಗೆ ಅನುಗುಣವಾಗಿ, ಆಮರಣ ಉಪವಾಸ ಮಾಡಿ ಇಹಲೋಕ ತ್ಯಜಿಸುವುದೇ ಸಲ್ಲೇಖನ ವ್ರತ. ಮೋಕ್ಷ ಪ್ರಾಪ್ತಿ ಹೊಂದುವ ಉದ್ದೇಶದಿಂದ ಈ ವ್ರತ ಆಚರಿಸಲಾಗುತ್ತದೆ ಎಂದು ಜೈನ ಧರ್ಮದಲ್ಲಿ ಪ್ರತೀತಿ ಇದೆ. ಪ್ರತಿ ವರ್ಷ ಸರಾಸರಿ 240 ಜೈನ ಧರ್ಮೀಯರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ ಎಂದು ಹೇಳಲಾಗಿದೆ.