ರಾಜಸ್ಥಾನ: ಇಟ್ಟಿಗೆಗಳಿಂದ ಹೊಡೆದು ಬಾಲಕಿ ಕೊಲೆ- ಅತ್ಯಾಚಾರದ ಶಂಕೆ
ಒಂಬತ್ತು ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಬರ್ಬರವಾಗಿ ಕೊಂದ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಆರೋಪಿಗಳು ಇಟ್ಟಿಗೆಗಳಿಂದ ಆಕೆಯ ತಲೆಗೆ ಹೊಡೆದಿದ್ದಾರೆ. ಸಾವಿಗೂ ಮುನ್ನ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿಲ್ಲ.
"ಹುಡುಗಿ ನಾಯಕ್ ಸಮುದಾಯದವಳು. ಮಂಗಳವಾರ ನಾಪತ್ತೆಯಾಗಿದ್ದಳು. ನಾವು ವಿಚಾರಿಸಿದಾಗ ಆಕೆಗಾಗಿ ಚಿಪ್ಸ್ ಪ್ಯಾಕೆಟ್ ಖರೀದಿಸಿದ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವುದು ನಮಗೆ ಕಂಡುಬಂದಿದೆ. ಇದು ಆರೋಪಿಗಳು ಆಕೆಗೆ ಆಮಿಷ ಒಡ್ಡಿ ಅಪಹರಿಸಿದ್ದಾರೆ ಎಂದು ಸೂಚಿಸುತ್ತದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಶರ್ಮಾ ಹೇಳಿದ್ದಾರೆ.
ಮೇಲ್ನೋಟಕ್ಕೆ ಹುಡುಗಿಯನ್ನು ಮೊದಲು ಬಟ್ಟೆಯ ತುಂಡಿನಿಂದ ಕತ್ತು ಹಿಸುಕಲಾಗಿದೆ ಎಂದು ತೋರುತ್ತದೆ. ನಂತರ ಆರೋಪಿಗಳು ಆಕೆಗೆ ಇಟ್ಟಿಗೆಯಿಂದ ಥಳಿಸಿದ್ದಾರೆ. ಶವವನ್ನು ಆಕೆಯ ಮನೆಯಿಂದ ಕನಿಷ್ಠ 1.5 ಕಿಮೀ ದೂರದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದು ಆರೋಪಿಯು ಹುಡುಗಿಗೆ ತಿಳಿದಿರಬೇಕು ಎಂದು ತಿಳಿಸುತ್ತದೆ. ಆಕೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಳೆಯೇ ಅಥವಾ ಇಲ್ಲವೇ ಎಂಬುದು ಶವಪರೀಕ್ಷೆ ವರದಿಯಲ್ಲಿ ಬಹಿರಂಗವಾಗಲಿದೆ ಎಂದು ಶರ್ಮಾ ಅವರು ಹೇಳಿದರು.
ಪ್ರಕರಣದ ಬಗ್ಗೆ ಮಾಹಿತಿ ಬಂದ ತಕ್ಷಣ ಎಸ್ಪಿ ಆನಂದ್ ಶರ್ಮಾ, ಅವರ ಡೆಪ್ಯೂಟಿ ಭನ್ವರಲಾಲ್, ಠಾಣಾಧಿಕಾರಿ ತೇಜ್ವಂತ್ ಸಿಂಗ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಶ್ವಾನದಳ ಸೇರಿದಂತೆ ಹಲವು ಪೊಲೀಸರ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಬಾಲಕಿಯ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದು, ಆಕೆ ಒಬ್ಬಳೇ ಮಗಳು ಎಂದು ಹೇಳಲಾಗುತ್ತಿದೆ. ಅಕ್ಕಪಕ್ಕದ ಮನೆಯವರು ಬಾಲಕಿಗಾಗಿ ಸಾಕಷ್ಟು ಸಮಯ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಶವ ಪತ್ತೆಯಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ದೇಶದೆಲ್ಲೆಡೆ ಮಹಿಳೆಯರನ್ನು ಕ್ರೂರವಾಗಿ ಹತ್ಯೆ ಮಾಡುವ ಸಂಖ್ಯೆ ಹೆಚ್ಚಾಗುತ್ತಿದ್ದು ಅಜಾಗ್ರತೆಯ ಭೀತಿ ಶುರುವಾಗಿದೆ.