ಫೇಸ್ಬುಕ್ ನಿರ್ದೇಶಕಿ ಅಂಖಿ ದಾಸ್ ವಿರುದ್ಧ ಎಫ್ಐಆರ್!
ರಾಯ್ ಪುರ್, ಆ. 18: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್ ತಮಗೆ ಬೆದರಿಕೆ ಕರೆ ಬರುತ್ತಿದೆ ಎಂದು ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರ ಬಳಿ ದೂರು ದಾಖಲಿಸಿದ್ದು ಓದಿರಬಹುದು. ಫೇಸ್ ಬುಕ್ ಸಂಸ್ಥೆಯ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಪಬ್ಲಿಕ್ ಪಾಲಿಸಿ ನಿರ್ದೇಶಕಿ ಅಂಖಿ ದಾಸ್ ಹಾಗೂ ಇತರ ಇಬ್ಬರ ವಿರುದ್ಧವೇ ದೂರು ದಾಖಲಾಗಿದೆ. ಅಂಖಿ ದಾಸ್ ನೀಡಿದ್ದ ದೂರಿನಲ್ಲಿ ಪತ್ರಕರ್ತ ಅವೇಶ್ ತಿವಾರಿ ಹೆಸರು ಉಲ್ಲೇಖವಾಗಿದೆ.
Recommended Video
ರಾಯಪುರ್ ಮೂಲದ ಪತ್ರಕರ್ತ ಅವೇಶ್ ತಿವಾರಿ ಅವರು, ಫೇಸ್ಬುಕ್ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್ ಹಾಗೂ ಇನ್ನಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಛತ್ತೀಸಗಢ ಪೊಲೀಸರು ಸೋಮವಾರ ತಡರಾತ್ರಿ ದೂರು ದಾಖಲಿಸಿಕೊಂಡಿದ್ದು, ರಾಯಪುರ್ ಠಾಣೆಯಲ್ಲಿ ಎಫ್ಐಆರ್ ಹಾಕಿದ್ದಾರೆ.
ಫೇಸ್ಬುಕ್ ಪಾಲಿಸಿ ಮುಖ್ಯಸ್ಥೆ ಅಂಖಿ ದಾಸ್ಗೆ ಜೀವ ಬೆದರಿಕೆ: ದೂರು ದಾಖಲು
ಅಂಖಿ ದಾಸ್, ಛತ್ತೀಸ್ ಗಢದ ರಾಮ್ ಸಾಹು, ಇಂದೋರ್ ನ ವಿವೇಕ್ ಸಿನ್ಹಾ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ ಆರೋಪ, ಕ್ರಿಮಿನಲ್ ಬೆದರಿಕೆ ಆರೋಪ ಹೊರೆಸಿ ಅವೇಶ್ ತಿವಾರಿ ಅವರು ದೂರು ಸಲ್ಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 295, 505(1)(ಸಿ), ಸೆಕ್ಷನ್ 506, ಸೆಕ್ಷನ್ 500 ಹಾಗೂ 34 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಯ್ ಪುರ್ ಠಾಣಾಧಿಕಾರಿ ಹೇಳಿದ್ದಾರೆ.
ಏನಿದು ಪ್ರಕರಣ: ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟವಾದ ಲೇಖನ ಕುರಿತು ತಿವಾರಿ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ ಅಂಖಿ ದಾಸ್ ಬಗ್ಗೆ ಉಲ್ಲೇಖವಾಗಿದೆ. ವಿವೇಕ್ ಹಾಗೂ ಸಾಹು ಎಂಬುವರು ಅಂಖಿ ಬೆಂಬಲಕ್ಕೆ ಬಂದಿದ್ದು, ಆಕೆ ಹಿಂದುವಾಗಿದ್ದು, ಆಕೆ ನಂಬಿಕೆಗೆ ಬೆಲೆ ಕೊಡು ಎಂದು ಹೇಳಿದ್ದಲ್ಲದೆ, ಆಕ್ಷೇಪಾರ್ಹ ಭಾಷೆ, ಚಿತ್ರ ಬಳಸಿ ಕಾಮೆಂಟ್ ಹಾಕಿದ್ದಲ್ಲದೆ ಬೆದರಿಕೆ ಒಡ್ಡಿದ್ದಾರೆ. ವಾಟ್ಸಾಪ್ ಕಾಲ್ ಮೂಲಕ ಕೂಡಾ ಬೆದರಿಕೆ ಕರೆ ಬಂದಿದ್ದರಿಂದ ಪೊಲೀಸರ ಮೊರೆ ಹೋಗಿದ್ದೇನೆ ಎಂದು ತಿವಾರಿ ಹೇಳಿದ್ದಾರೆ.
ಫೇಸ್ಬುಕ್ ಸ್ಪಷ್ಟನೆ: ಫೇಸ್ಬುಕ್ ತನ್ನ ನಿಯಮಗಳ ಪ್ರಕಾರ ಯಾವುದೇ ರಾಜಕೀಯ ಒತ್ತಡ ಅಥವಾ ತಾರತಮ್ಯವಿಲ್ಲದೆ ದ್ವೇಷ ಭಾಷಣದಂತಹ ಪೋಸ್ಟ್ಗಳನ್ನು ತಕ್ಷಣ ತೆಗೆದುಹಾಕುತ್ತದೆ ಎಂದು ಹೇಳಿದೆ. ಯಾವುದೇ ಪಕ್ಷ, ಯಾವುದೇ ರಾಜಕೀಯ ಸ್ಥಾನದಲ್ಲಿದ್ದರೂ, ಯಾವುದೇ ಸಂಬಂಧ ಇದ್ದರೂ ಕೂಡ ಹಿಂಸಾಚಾರ ಪ್ರಚೋದಿಸುವ ದ್ವೇಷದ ಭಾಷಣ, ಮಾತು ಹಾಗೂ ವಿಚಾರಗಳನ್ನು ನಾವು ನಿಷೇಧಿಸುತ್ತೇವೆ. ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತವೆ. ಈ ಕುರಿತು ಮತ್ತಷ್ಟು ಕೆಲಸಗಳು ಮಾಡುವ ಬಗ್ಗೆ ನಮಗೆ ತಿಳಿದಿದ್ದು, ಈ ಕುರಿತ ಕಾರ್ಯದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ ಎಂದಿದೆ.