'ಕ್ಷಮೆ ಕೇಳೋ ತನಕ ಮೋದಿಯನ್ನು ಸಂಸತ್ ಪ್ರವೇಶಿಸಲು ಬಿಡೆವು'
ವಿವಾದ ಭುಗಿಲೆಬ್ಬಿಸಿದ ಪ್ರಧಾನಿಯ 'ರೈನ್ ಕೋಟ್' ಟೀಕೆ; ಆಕ್ರೋಶಗೊಂಡ ಕಾಂಗ್ರೆಸ್ಸಿಗರಿಂದ ಪ್ರಧಾನಿ ಕ್ಷಮೆ ಯಾಚನೆಗೆ ಆಗ್ರಹ
ನವದೆಹಲಿ, ಫೆಬ್ರವರಿ 8: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ತಾವು ಮಾಡಿರುವ ಟೀಕೆಗೆ ಕ್ಷಮೆ ಕೋರುವವರೆಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸತ್ತು ಪ್ರವೇಶಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರೈನ್ ಕೋಟ್ ಧರಿಸಿ ಸ್ನಾನ ಮಾಡುವ ಕಲೆ ಚೆನ್ನಾಗಿ ಗೊತ್ತಿದೆ ಎಂದು ಮಾರ್ಮಿಕವಾಗಿ ಚುಚ್ಚಿದ್ದರು. ಈ ಹೇಳಿಕೆಯೀಗ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಮೇಲೆ ಕಾರ್ಮೋಡ ಆವರಿಸಿದಂತಾಗಿದೆ.[ರೈನ್ ಕೋಟ್ ಹಾಕ್ಕೊಂಡು ಸ್ನಾನ ಮಾಡೋದು ಸಿಂಗ್ ಗೆ ಗೊತ್ತು: ಮೋದಿ]
ಹಾಲಿ ನಡೆಯುತ್ತಿರುವ ಬಜೆಟ್ ಅಧಿವೇಶನಕ್ಕೂ ಮುನ್ನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಉಭಯ ಸದನಗಳ ಜಂಟಿ ಸದನಗಳನ್ನುದ್ದೇಶಿಸಿ ಮಾತನಾಡಿದ್ದರು. ಸಂಪ್ರದಾಯದ ಪ್ರಕಾರ, ಬುಧವಾರ ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಕಲಾಪ ಹಮ್ಮಿಕೊಳ್ಳಲಾಗಿತ್ತು.[2017ರ ವೇತನ ಮಸೂದೆ ತಿದ್ದುಪಡಿ ಕುರಿತ ಸುಗ್ರೀವಾಜ್ಞೆಗೆ ಲೋಕಸಭೆ ಒಪ್ಪಿಗೆ]
ಆ ಸಂದರ್ಭದಲ್ಲಿ ಮಾತನಾಡಿದ ಮೋದಿ, ಅಪನಗದೀಕರಣದಿಂದ ಭಾರತದ ಅರ್ಥ ವ್ಯವಸ್ಥೆ ಹಾಳಾಗಿದೆ ಎಂದು ಕಾಂಗ್ರೆಸ್ ಪಕ್ಷವು ಟೀಕಿಸಿದೆ. ಮನಮೋಹನ್ ಸಿಂಗ್ ಅವರೂ ಈ ಬಗ್ಗೆ ವಿಸ್ತೃತ ವರದಿಯನ್ನು ನೀಡಿದ್ದಾರೆ. ಆದರೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಭಾರತದ ಅರ್ಥ ವ್ಯವಸ್ಥೆ ಹಾಳಾಗಿರಲಿಲ್ಲವೇ? ಅವರ ವಿರುದ್ಧ ಯಾವುದೇ ಆರೋಪಗಳು ಬಂದಿರಲಿಲ್ಲವೇ? ಎಂದು ಕೇಳಿದ್ದರು.
ನಂತರ, ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ಮನಮೋಹನ್ ಸಿಂಗ್ ಅವರು ಎರಡು ಅವಧಿಯವರೆಗೆ ಪ್ರಧಾನಿಯಾಗಿದ್ದಾಗ ಕಲ್ಲಿದ್ದಲು ಹಗರಣ, 2ಜಿ ಸ್ಪೆಕ್ಟ್ರಂ ಹಗರಣ, ಹೆಲಿಕಾಪ್ಟರ್ ಹಗರಣ ಸೇರಿದಂತೆ ಹಲವಾರು ಹಗರಣಗಳು ಅವರನ್ನು ಸುತ್ತಿಕೊಂಡಿದ್ದವು. ಇದೆಲ್ಲಾ ಗೊತ್ತಿದ್ದೂ ಸಿಂಗ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ರೈನ್ ಕೋಟ್ ಹಾಕಿಕೊಂಡರೂ ನೀರು ತಾಗದಂತೆ ಸ್ನಾನ ಮಾಡುವುದು ಹೇಗೆಂದು ಅವರಿಗೆ ಗೊತ್ತಿದೆ ಎಂದು ಮೋದಿ ಹೇಳಿದ್ದರು.
ಪ್ರಧಾನಿಯವರ ಈ ಹೇಳಿಕೆಯಿಂದ ರೊಚ್ಚಿಗೆದ್ದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಅದರ ಬೆನ್ನಲ್ಲೇ ಈಗ, ಕಾಂಗ್ರೆಸ್ ಪಕ್ಷವು ಪ್ರಧಾನಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದೆ.