ರಾಜಸ್ಥಾನದಲ್ಲಿ ಅಬ್ಬರಿಸಿದ ವರುಣ, ಗುಜರಾತ್ ನಲ್ಲಿ ಮಳೆಗೆ 9 ಬಲಿ!
ನವದೆಹಲಿ, ಆಗಸ್ಟ್.24: ಕಳೆದ ಐದು ದಿನಗಳಿಂದ ಗುಜರಾತ್ ನಲ್ಲಿ ಮಾನ್ಸೂನ್ ಮಳೆಯು ಅಬ್ಬರಿಸಿ ಬೊಬ್ಬಿರಿಯುತ್ತಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ರಾಜಸ್ಥಾನದಲ್ಲೂ ಅತಿಹೆಚ್ಚು ಮಳೆಯಾಗಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುಜರಾತ್ ನ ಕಾದಿ ಪ್ರದೇಶದಲ್ಲಿ 33 ಸೆಂ.ಮೀ ಮತ್ತು ಉಮೇರ್ಪದಾ ಪ್ರದೇಶದಲ್ಲಿ 26 ಸೆಂ.ಮೀ ಮಳೆಯಾಗಿದೆ. ಸೌರಾಷ್ಟ್ರ, ಕುಟ್ಚ್, ಜೋಡಿಯಾ ಪ್ರದೇಶಗಳಲ್ಲಿ 34 ಸೆಂ.ಮೀ ಮಳೆಯಾಗಿದೆ. ಟಂಕರ್ ನಲ್ಲಿ 27 ಸೆಂ.ಮೀ, ಮೊರ್ಬಿ 25 ಸೆಂ.ಮೀ, ಬೆಚರಾಜ್ ಸೆಂ.ಮೀ, ಸರಸ್ವತಿ 21 ಸೆಂ.ಮೀ, ಕಂದ್ಲಾ ಏರೋಡ್ರಾಮೆ ಮತ್ತು ಸುರೇಂದ್ರನಗರ್ ನಲ್ಲಿ 18 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶಿವಮೊಗ್ಗ: ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಇನ್ನು, ಸೋಮವಾರ ಒಂದೇ ದಿನ ಗುಜರಾತ್ ನಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಸಿಲುಕಿ 9 ಮಂದಿ ಪ್ರಾಣ ಬಿಟ್ಟಿದ್ದು, 1900 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ರಾಜಸ್ಥಾನದಲ್ಲಿ 24 ಗಂಟೆಗಳಲ್ಲಿ ಭಾರಿ ಮಳೆ:
ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದಲ್ಲೂ ಭಾರಿ ಮಳೆಯಾಗಿದೆ. ಲೋಹಾರಿ, ಬನಸ್ವಾರ, ಭುಂಗ್ರಾ ಪ್ರದೇಶಗಳಲ್ಲಿ 18 ರಿಂದ 20 ಸೆಂ.ಮೀ ಮಳೆಯಾಗಿರುವ ಬಗ್ಗೆ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ನವದೆಹಲಿಯಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಇನ್ನು, ಮಳೆಯ ದಾಖಲೆಯ ಪ್ರಕಾರ, 15 ಮಿ.ಮೀ ಮಳೆಯನ್ನು ಅಲ್ಪ, 15 ರಿಂದ 64.5 ಮಿ.ಮೀ ಮಳೆಯನ್ನು ಸಾಧಾರಣ ಮತ್ತು 64.5 ಮಿ.ಮೀಟರ್ ಗಿಂತ ಹೆಚ್ಚಿನ ಮಳೆಯನ್ನು ಭಾರಿ ಮಳೆ ಎಂದು ಗುರುತಿಸಲಾಗುತ್ತದೆ.