ಹವಾಮಾನ ವರದಿ; ಮುಂದಿನ 4 ದಿನ ಮಳೆ ಸಾಧ್ಯತೆ
ಬೆಂಗಳೂರು, ಮೇ 22: ಚಂಡಮಾರುತ ಇತ್ಯಾದಿ ಕಾರಣಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯ ಆರ್ಭಟ ಇನ್ನೂ ಕೆಲ ದಿನಗಳ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ 4 ದಿನಗಳ ಕಾಲ ಕರ್ನಾಟಕ ಸೇರಿ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ.
ರಾಷ್ಟ್ರದ ಪಶ್ಚಿಮ ಮತ್ತು ಪೂರ್ವ ಭಾಗದ ಪ್ರದೇಶಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಉಷ್ಣ ಅಲೆಯಿಂದ ತತ್ತರಿಸಿರುವ ಉತ್ತರ ಭಾರತದ ಅನೇಕ ಪ್ರದೇಶಗಳಿಗೆ ಮಳೆ ತಂಪು ತಂದಿದೆ. ಕರ್ನಾಟಕ ಹಾಗೂ ಇತರ ದಕ್ಷಿಣ ರಾಜ್ಯಗಳಲ್ಲಿ ಸತತ ಮಳೆಯಿಂದ ರೈತರು ಸಂತಸಪಡಬೇಕೋ, ಬೆಳೆಹಾನಿಯಾಗುತ್ತದೆಂದು ವ್ಯಥೆಪಡಬೇಕೋ? ಎಂಬ ಗೊಂದಲಕ್ಕೆ ಬಿದ್ದಿರುವುದು ಹೌದು.
ಬೆಂಗಳೂರು ಮಳೆ, ಸಮಸ್ಯೆ ಎದುರಿಸಲು ಸಚಿವರ ತಂಡ ರಚನೆ
ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕೆಲ ದಿನಗಳಿಂದಲೂ ಬೆಂಗಳೂರು, ಹಾಸನ, ಕೊಪ್ಪಳ, ಧಾರವಾಡ, ಚಾಮರಾಜನಗರ, ಮೈಸೂರು, ಮಂಡ್ಯ, ಹಾವೇರಿ, ಶಿವಮೊಗ್ಗ, ಕಲಬುರಗಿ ಮೊದಲಾದ ಜಿಲ್ಲೆಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.
ಧಾರವಾಡದಲ್ಲಿ 96 ಲಕ್ಷ ರೂ. ಮೌಲ್ಯದ ರೈತರ ಬೆಳೆ ಹಾನಿಯಾಗಿದೆ. ಹಾವೇರಿಯಲ್ಲಿ 300ಕ್ಕೂ ಹೆಚ್ಚು ಮನೆಗಳು ಮಳೆಯಿಂದ ಹಾಳಾಗಿವೆ. ಶಿವಮೊಗ್ಗದಲ್ಲೂ ಹಲವು ಮನೆಗಳ ಛಾವಣಿಗಳು ಮಳೆಗಾಳಿಯಿಂದ ಕಿತ್ತುಹೋಗಿರುವುದು ವರದಿಯಾಗಿದೆ.
ದಕ್ಷಿಣದಲ್ಲಿ ನಾಲ್ಕು ದಿನ ಮಳೆ
ಬೆಂಗಳೂರು ಸಮೀಪದ ಆಂಧ್ರದ ರಾಯಲಸೀಮೆ ಸುತ್ತಮುತ್ತ ಚಂಡಮಾರುತ ಎದ್ದಿದ್ದು, ಅದರ ಪರಿಣಾಮವಾಗಿ ಮುಂದಿನ 4 ದಿನ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಅನೇಕ ಪ್ರದೇಶಗಳಲ್ಲಿ ಮಳೆ ಸುರಿಯುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಇದ್ದಷ್ಟು ತೀವ್ರತೆಯಲ್ಲಿ ಮಳೆ ಸುರಿಯುವ ಸಾಧ್ಯತೆ ಇಲ್ಲ. ಆದರೆ, ಕೆಲ ಪ್ರದೇಶಗಳಲ್ಲಿ ತುಸು ಹೆಚ್ಚು ಮಳೆಯಾಗಬಹುದು. ಆಂಧ್ರ, ತಮಿಳುನಾಡು ಮತ್ತು ತೆಲಂಗಾಣದ ಕೆಲ ಕಡೆ ಹೆಚ್ಚು ತೀವ್ರತೆಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಮಳೆ ಮನ್ಸೂಚನೆ: ಎಲ್ಲೆಲ್ಲಿ ತಿಳಿಯಿರಿ
ಈಶಾನ್ಯದಲ್ಲಿ ಮಳೆ
ಅರುಣಾಚಲಪ್ರದೇಶ, ಮಣಿಪುರ, ಮಿಝೋರಾಂ, ಅಸ್ಸಾಂ, ಮೇಘಾಲಯ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ ಹೆಚ್ಚು ಮಳೆಯಾಗುವ ಸಂಭವ ಇದೆ. ಮಂಗಳವಾರದ ಬಳಿಕ ಅಲ್ಲಿ ಮಳೆಯ ಪ್ರಮಾಣ ತಗ್ಗಬಹುದು ಎಂಬ ಮಾಹಿತಿ ಇದೆ.
ಕಾಶ್ಮೀರ, ಪಂಜಾಬ್ನಲ್ಲಿ
ಭಾರತದ ಉತ್ತರ ಮತ್ತು ವಾಯವ್ಯ ಭಾಗದಲ್ಲಿರುವ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಭಾನುವಾರ ಮತ್ತು ಸೋಮವಾರ (ಮೇ 22 ಮತ್ತು 23) ಅಲ್ಲಲ್ಲಿ ಭಾರೀ ಮಳೆಯಾಗಬಹುದು ಎಂದು ಎಚ್ಚರಿಸಲಾಗಿದೆ.
ರಾಜಧಾನಿ ದೆಹಲಿ ಸುತ್ತಮುತ್ತಲ ಪ್ರದೇಶದಲ್ಲಿ ಧೂಳುಗಾಳಿಯ ಕಾಟ ಇರಲಿದೆ. ಜೊತೆಗೆ ಕಡಿಮೆ ತೀವ್ರತೆಯ ಮಳೆಯೂ ಸುರಿಯುವ ಸಂಭವ ಇದೆ. ರಾಜಸ್ಥಾನದಲ್ಲಿ ಧೂಳಿನ ಗಾಳಿ ಭಾನುವಾರ ಶುರುವಾಗಿ ಬುಧವಾರದವರೆಗೂ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ.
ರಾಷ್ಟ್ರರಾಜಧಾನಿಯಲ್ಲಿ ಅಲರ್ಟ್
ಹಲವು ದಿನಗಳಿಂದ ಸತತವಾಗಿ ಬಿಸಿಲಿನ ಝಳಕ್ಕೆ ಕಂಗೆಟ್ಟು ಹೋಗಿರುವ ರಾಷ್ಟ್ರ ರಾಜಧಾನಿ ದೆಹಲಿ ಎನ್ಸಿಆರ್ ಪ್ರದೇಶಕ್ಕೆ ವರುಣ ತಂಪೆರೆಯುತ್ತಿದ್ದಾನೆ. ಸೋಮವಾರದಿಂದ ಬುಧವಾರದವರೆಗೆ ದೆಹಲಿಯಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆಯು ಇಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. 45 ಡಿಗ್ರಿಗಿಂತ ಹೆಚ್ಚು ಉಷ್ಣಾಂಶದಿಂದ ಬೇಯುತ್ತಿರುವ ದೆಹಲಿಯಲ್ಲಿ ತಾಪಮಾನ ಗಣನೀಯವಾಗಿ ತಗ್ಗುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)