ನ.14ರಿಂದ ಶ್ರೀರಾಮಚಂದ್ರನ ಮಾರ್ಗದಲ್ಲಿ ರಾಮಾಯಣ ಎಕ್ಸ್ ಪ್ರೆಸ್
ಬೆಂಗಳೂರು, ನವೆಂಬರ್ 13: ರಾಮಾಯಣ ಕಾಲದ ಪುರಾಣ ಪ್ರಸಿದ್ಧ ನಗರಗಳನ್ನು ಸಂಪರ್ಕಿಸುವ, ಶ್ರೀರಾಮಚಂದ್ರ ಸಾಗಿದ ಮಾರ್ಗದಲ್ಲಿ ಸಂಚರಿಸುವ ವಿಶೇಷ ರೈಲು ರಾಮಾಯಣ ಎಕ್ಸ್ ಪ್ರೆಸ್ ಗೆ ನವೆಂಬರ್ 14ರಿಂದ ಚಾಲನೆ ಸಿಗಲಿದೆ.
ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣ, ತಮಿಳುನಾಡಿನ ಮಧುರೈನಿಂದ ಏಕಕಾಲಕ್ಕೆ ಚಾಲನೆ ಸಿಗಲಿದೆ. 16 ದಿನಗಳ ಈ ಟೂರ್ ಪ್ಯಾಕೇಜ್ ನಲ್ಲಿ ಶ್ರೀರಾಮನ ಕಾಲದ ನಗರಗಳನ್ನು ವೀಕ್ಷಿಸಬಹುದಾಗಿದೆ. ಭಾರತವಲ್ಲದೆ ಶ್ರೀಲಂಕಾದ ನಗರಕ್ಕೂ ಸಂಪರ್ಕ ಸಿಗಲಿದೆ.
ಶ್ರೀ ರಾಮಾಯಣ ಯಾತ್ರಾ-ಶ್ರೀಲಂಕಾ ಯಾತ್ರೆ ವಿಶೇಷ ರೈಲಿನಲ್ಲಿ 800 ಮಂದಿ ಸಂಚರಿಸಬಹುದು. ದೆಹಲಿಯಿಂದ ಹೊರಟ ರೈಲು ಅಯೋಧ್ಯದಲ್ಲಿ ಮೊದಲಿಗೆ ತಲುಪಲಿದೆ. ಹನುಮನ್ ಗರ್ಹಿ ರಾಮ್ ಕೋಟ್ ಹಾಗೂ ಕನಕ್ ಭವನ್ ದೇಗುಲ ದರ್ಶಿಸಬಹುದು.
ನಂತರ ರಾಮಾಯಣ ಕಾಲದ ನಂದಿಗ್ರಾಮ, ಸೀತಾಮಾರ್ಹಿ, ಜನಕಪುರ, ವಾರಣಾಸಿ, ಪ್ರಯಾಗ್, ಶ್ರೀಂಗ್ವೇರ್ ಪುರ್, ಚಿತ್ರಕೂಟ, ನಾಸಿಕ್, ಹಂಪೆ ಹಾಗೂ ರಾಮೇಶ್ವರಂ ತಲುಪಲಿದೆ. ಸಫ್ದರ್ಜಂಗ್, ಗಾಜಿಯಾಬಾದ್, ಮೊರಾದಾಬಾದ್, ಬರೇಲಿ ಹಾಗೂ ಲಕ್ನೋ ಬೋರ್ಡಿಂಗ್ ತಾಣಗಳಾಗಿವೆ.
ಶ್ರೀಲಂಕಾದಿಂದ ಪ್ರಯಾಣಿಸುವವರಿಗೆ ಪ್ರತ್ಯೇಕ ಶುಲ್ಕ ಟಿಕೆಟ್ ಇರುತ್ತದೆ. ಶ್ರೀಲಂಕಾದಿಂದ ಪ್ರಯಾಣ ಆರಂಭಿಸಲು ಬಯಸುವವರು ಚೆನ್ನೈನಿಂದ ಕೊಲಂಬೋಗೆ ವಿಮಾನದಲ್ಲಿ ಪ್ರಯಾಣಿ ನಂತರ ರಾಮಾಯಣ ಯಾತ್ರಾ ಪ್ಯಾಕೇಜ್ ಪಡೆಯಬಹುದು. ಐ ಆರ್ ಸಿ ಟಿಸಿ 5ರಾತ್ರಿ/ 6 ದಿನಗಳ ಶ್ರೀಲಂಕಾ ಟೂರ್ ಪ್ಯಾಕೇಜ್ ಒಬ್ಬ ಪ್ರಯಾಣಿಕರಿಗೆ 36,970ರು ನಷ್ಟಿದೆ.