ರೈಲ್ವೆ ಇಲಾಖೆಯಲ್ಲಿನ್ನು ಅಧಿಕಾರಿಗಳ ಶಿಷ್ಟಾಚಾರಕ್ಕೆ ಕೊನೆ
ನವದೆಹಲಿ, ಅಕ್ಟೋಬರ್ 9: ಈ ವರೆಗೆ ಜಾರಿಯಲ್ಲಿದ್ದ ಶಿಷ್ಟಾಚಾರಗಳಿಗೆ ಕೊನೆ ಹೇಳಲು ರೈಲ್ವೆ ಸಚಿವಾಲಯವು ತೀರ್ಮಾನಿಸಿದೆ. ಅದರ ಭಾಗವಾಗಿ ವಿಐಪಿ ಸಂಸ್ಕೃತಿ ಕೊನೆಯಾಗಲಿದೆ.
ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೇ ಇಲಾಖೆಯಿಂದ ಪ್ರಮುಖ ನಿರ್ಧಾರ
ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ವಲಯಗಳಿಗೆ ಭೇಟಿ ನೀಡಲು ಬರುವಾಗ ಹಾಗೂ ಆ ನಂತರ ತೆರಳುವಾಗ ಪ್ರಧಾನ ವ್ಯವಸ್ಥಾಪಾಕರು ಹಾಜರಿರಬೇಕು ಎಂಬ ಶಿಷ್ಟಾಚಾರ ಮೂವತ್ತಾರು ವರ್ಷಗಳಿಂದ ಜಾರಿಯಲ್ಲಿದೆ. ಇಂಥ ಹಲವು ಶಿಷ್ಟಾಚಾರ ಇನ್ನು ಮುಂದೆ ಇರುವುದಿಲ್ಲ.
ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಅನುಸರಿಸುತ್ತಿದ್ದ ಶಿಷ್ಟಾಚಾರ ತಕ್ಷಣದಿಂದಲೇ ಅನ್ವಯ ಆಗುವಂತೆ ತೆಗೆದುಹಾಕಲಾಗಿದೆ. "ಯಾವುದೇ ರೈಲ್ವೆ ಅಧಿಕಾರಿ ಹೂಗುಚ್ಛ ಅಥವಾ ಉಡುಗೊರೆ ಕೊಡುವುದನ್ನು ಪ್ರೋತ್ಸಾಹಿಸುವುದಿಲ್ಲ" ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ತಿಳಿಸಿದ್ದಾರೆ.
ಇನ್ನು ರೈಲ್ವೆಯ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಸಹಾಯಕರಂತೆ ಕೆಲಸ ನಿರ್ವಹಿಸುತ್ತಿರುವವರನ್ನೂ ಬಿಡುಗಡೆಗೊಳಿಸುವಂತೆ ಸೂಚಿಸಿದ್ದು, ಕಳೆದ ಒಂದು ತಿಂಗಳಲ್ಲಿ ಆರರಿಂದ ಏಳು ಸಾವಿರ ನೌಕರರು ತಮ್ಮ ಕೆಲಸಗಳಿಗೆ ಮರಳಿದ್ದಾರೆ. ತುಂಬ ವಿಶೇಷ ಪ್ರಕರಣಗಳನ್ನು ಹೊರತುಪಡಿಸಿದಂತೆ, ಎಲ್ಲರೂ ತಮ್ಮ ಕೆಲಸಗಳಿಗೆ ಮರಳಲಿದ್ದಾರೆ.
ಅಷ್ಟೇ ಅಲ್ಲ, ಸ್ವತಃ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೂಚನೆ ನೀಡಿದ್ದು, ಹಿರಿಯ ಅಧಿಕಾರಿಗಳು, ಮೇಲ್ ಸ್ತರದ ಅಧಿಕಾರಿಗಳು ದುಬಾರಿ ಪ್ರಯಾಣಗಳನ್ನು ಬಿಟ್ಟು ಸಾಮಾನ್ಯ ಜನರ ಜತೆಗೆ ಬೆರೆಯುವಂತೆ ತಿಳಿಸಿದ್ದಾರೆ.
"ಈ ರೀತಿಯ ಶಿಷ್ಟಾಚಾರಗಳ ಹಿಂದೆ ಕಾರಣಗಳಿದ್ದವು. ಅವುಗಳೇನು ಅಂತ ನನ್ನಿಂದ ಹೇಳುವುದಕ್ಕೆ ಕಷ್ಟ. ಆದರೆ ಈಗ ಅವುಗಳಲ್ಲಿ ತರ್ಕವಿಲ್ಲ ಅನ್ನಿಸಬಹುದು. ಆದರೆ ಅಧಿಕಾರಿಗಳಿಗೆ ಏನು ಮಾಡಬೇಕು ಹಾಗೂ ಮಾಡಬಾರದು ಎಂಬ ಸ್ಪಷ್ಟ ಮಾರ್ಗಸೂಚಿ ಇದೆ. ಅವುಗಳನ್ನು ಆಗಾಗ ಪರಿಶೀಲಿಸಲಾಗುತ್ತದೆ" ಎಂದು ಹೆಸರು ಹೇಳಲಿಚ್ಛಿಸದ ರೈಲ್ವೆ ಮಂಡಳಿ ಮಾಜಿ ಸದಸ್ಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.