ರೈಲ್ವೆ ಬಜೆಟ್ 2015-16 : ಯಾರು, ಏನು ಹೇಳಿದರು?
ಬೆಂಗಳೂರು, ಫೆ. 26 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೊದಲ ಪರಿಪೂರ್ಣ ರೈಲ್ವೆ ಬಜೆಟ್ ಗುರುವಾರ ಮಂಡನೆಯಾಗಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಹೊಸ ರೈಲನ್ನು ಘೋಷಣೆ ಮಾಡದೆ, ಪ್ರಯಾಣ ದರವನ್ನು ಕಡಿಮೆ ಮಾಡದ ಬಜೆಟ್ ಮಂಡಿಸಿದ್ದಾರೆ.
ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆ 10 ನಿಮಿಷಗಳ ಕಾಲ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಸುರೇಶ್ ಪ್ರಭು ಅವರು, ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆಗೆ ಬಂಡವಾಳ ತರಲಾಗುವುದು ಎಂದು ಹೇಳಿದ್ದಾರೆ. ವಿವಿಧ ಪಕ್ಷಗಳ ಮುಂಡರು ರೈಲ್ವೆ ಬಜೆಟ್ ಬಗ್ಗೆ ಪತ್ರಿಕ್ರಿಯೆ ನೀಡಿದ್ದು, ಹೊಸ ಯೋಜನೆ ಘೋಷಿಸಿದ ಬಜೆಟ್ಅನ್ನು ಟೀಕಿಸಿದ್ದಾರೆ.
'ರೈಲ್ವೆ ಬಜೆಟ್ ಇಲಾಖೆಯನ್ನು ಅಭಿವೃದ್ಧಿಗೊಳಿಸುವ ಸ್ಪಷ್ಟವಾದ ಗುರಿಯನ್ನು ಹೊಂದಿದೆ. ಆದಾಯ ಸಂಗ್ರಹಣೆ ಮಾಡುವ ಮೂಲಕ ಅಭಿವೃದ್ಧಿ ಮಾಡಿ ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. [ರೈಲ್ವೆ ಬಜೆಟ್ 2015 ಲೈವ್: ಜನ ಸಾಮಾನ್ಯರ ಆಯವ್ಯಯ]
ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಇದು ಕನಸಿನ ಬಜೆಟ್, ಇದನ್ನು ಜಾರಿಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರೈಲ್ವೆ ಬಜೆಟ್ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ.
ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ
ರೈಲ್ವೆ ಬಜೆಟ್ ಇಲಾಖೆಯನ್ನು ಅಭಿವೃದ್ಧಿಗೊಳಿಸುವ ಸ್ಪಷ್ಟವಾದ ಗುರಿಯನ್ನು ಹೊಂದಿದೆ. ಆದಾಯ ಸಂಗ್ರಹಣೆ ಮಾಡುವ ಮೂಲಕ ಅಭಿವೃದ್ಧಿ ಮಾಡಿ ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕನಸಿನ ಬಜೆಟ್, ಜಾರಿ ಅಸಾಧ್ಯ
ಇದು ಕನಸಿನ ಬಜೆಟ್, ಇದನ್ನು ಜಾರಿಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಸಹಭಾಗಿತ್ವದ ಮೂಲಕ ಹಲವು ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಆದರೆ, ಯಾವ ಮಾರ್ಗದಲ್ಲಿ, ಎಷ್ಟು ಕಿ.ಮೀ. ಮುಂತಾದ ಮಾಹಿತಿಗಳಿಲ್ಲ. ಆದ್ದರಿಂದ ಇದು ಕೇವಲ ಘೋಷಣೆಯ ಬಜೆಟ್ ಆಗಿದೆ ಎಂದು ಖರ್ಗೆ ಟೀಕಿಸಿದ್ದಾರೆ.
ನಿರಾಸೆ ಉಂಟು ಮಾಡಿದ ಬಜೆಟ್
ಈ ಬಜೆಟ್ ನಿರಾಸೆ ಉಂಟುಮಾಡಿದೆ. ಹಳೆಯ ಯೋಜನೆಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ರೈಲ್ವೆ ಪ್ರಯಾಣದರ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು ಎಂದು ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.
|
ಒಂದು ಹೊಸ ರೈಲನ್ನು ಘೋಷಿಸಿಲ್ಲ
ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಒಂದು ಹೊಸ ರೈಲನ್ನು ಘೋಷಣೆ ಮಾಡಿಲ್ಲ, ಪ್ರಯಾಣದರವನ್ನಾದರೂ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಪ್ರತಿಕ್ರಿಯೆ ನೀಡಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ
ಕಳೆದ 9 ತಿಂಗಳಿನಲ್ಲಿ ರೈಲ್ವೆ ಇಲಾಖೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆದರೆ, ಸರ್ಕಾರ ಹಿಂದಿನ ಬಜೆಟ್ನ ಎಷ್ಟು ಯೋಜನೆಗಳನ್ನು ಅನುಷ್ಟಾನ ಮಾಡಿದೆ ಎಂದು ಮಾಹಿತಿ ನೀಡಲಿ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜನರಿಗೆ ನಿರಾಸೆ ಮಾಡಿದ್ದಾರೆ
ರೈಲ್ವೆ ಬಜೆಟ್ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿರುತ್ತದೆ. ಬಜೆಟ್ನಲ್ಲಿ ಪ್ರಯಾಣದರವನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸರ್ಕಾರ ಜನರಿಗೆ ನಿರಾಸೆ ಮಾಡಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ರೈಲ್ವೆ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಯಾಣಿಕರಿಗೆ ಆದ್ಯತೆ ನೀಡಲಾಗಿದೆ
ಈ ಬಾರಿಯ ರೈಲು ಬಜೆಟ್ನಲ್ಲಿ ಪ್ರಯಾಣಿಕರ ಸುರಕ್ಷತೆ, ಮೂಲ ಸೌಕರ್ಯ ಒದಗಿಸಲು ಅಗತ್ಯಗಮನ ನೀಡಲಾಗಿದೆ. ಉತ್ತಮ ಬಜೆಟ್ ನೀಡಿದ ಪ್ರಧಾನಿ ಮತ್ತು ರೈಲ್ವೆ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
ಲಾಭವನ್ನು ಜನರಿಗೆ ತಲುಪಿಸಿಲ್ಲ
ಕೇಂದ್ರ ರೈಲ್ವೆ ಬಜೆಟ್ನಿಂದ ಕರ್ನಾಟಕಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಿಂದ ರೈಲ್ವೆ ಇಲಾಖೆಗೆ ಸುಮಾರು 16 ಸಾವಿರ ಕೋಟಿ ರೂ.ಗಳಿಂತಲೂ ಹೆಚ್ಚಿನ ಉಳಿತಾಯವಾಗಿದೆ. ಈ ಲಾಭವನ್ನು ದರ ಕಡಿಮೆ ಮಾಡುವ ಮೂಲಕ ಜನರಿಗೆ ತಲುಪಿಸಬೇಕಿತ್ತ. ಆದರೆ, ಅದನ್ನು ಸರ್ಕಾರ ಮಾಡಿಲ್ಲ ಎಂದು ಟೀಕಿಸಿದ್ದಾರೆ.
ಪ್ರಯಾಣಿಕ ಸ್ನೇಹಿಯಾದ ಬಜೆಟ್ ಇದು
ರೈಲ್ವೆ ಬಜೆಟ್ ಪ್ರಯಾಣಿಕ ಸ್ನೇಹಿಯಾಗಿದೆ ಎಂದು ಮಾಜಿ ಸಿಎಂ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಪ್ರಯಾಣಿಕರಿಗೆ ಹೊರೆಯಾಗದ ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಬಜೆಟ್ಅನ್ನು ಮಂಡಿಸಲಾಗಿದೆ. ಆನ್ಲೈನ್ ಬುಕ್ಕಿಂಗ್, ಎಸ್ಎಂಎಸ್ ಸಂದೇಶ ರವಾನೆ, 4 ತಿಂಗಳ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮುಂತಾದ ಉತ್ತಮವಾದ ಯೋಜನೆಗಳನ್ನು ಜಾರಿಗೆ ತರುವ ಘೋಷಣೆ ಮಾಡಲಾಗಿದೆ ಎಂದು ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾತನ್ನು ಕೃತಿಗೆ ಇಳಿಸಲು ಸರ್ಕಾರ ವಿಫಲ
ಕೇಂದ್ರ ಸರ್ಕಾರ ತನ್ನ ಮಾತನ್ನು ಕೃತಿಗೆ ಇಳಿಸಲು ವಿಫಲವಾಗಿದೆ. ರೈಲ್ವೆ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ಸಿಕ್ಕಿಲ್ಲ. ಸ್ವತಂತ್ರ್ಯ ಬಂದ ಬಳಿಕ ರೈಲ್ವೆ ಬಜೆಟ್ನಲ್ಲಿ ರಾಜ್ಯವನ್ನು ಕಡೆಗಣಿಸುತ್ತಲೇ ಬರಲಾಗಿದೆ. ಕೇಂದ್ರ ಸರ್ಕಾರ ಬಣ್ಣದ ಮಾತುಗಳಿಂದ ಜನರ ಹೊಟ್ಟೆ ತುಂಬಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.