ರಾಹುಲ್ ಕೇಳಿದ 5 ಪ್ರಶ್ನೆಗಳಿಗೆ ಮೋದಿ ಉತ್ತರಿಸುವರೆ?
ಅಪನಗದೀಕರಣದ ವಿಚಾರವಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಮೋದಿ ಉತ್ತರಿಸುತ್ತಾರಾ?
ನವದೆಹಲಿ, ಡಿಸೆಂಬರ್ 28: ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಅಪನಗದೀಕರಣದ ಬಗ್ಗೆ ಶ್ವೇತ ಪತ್ರ ಹೊರಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಇದರ ಜತೆಗೆ ಐದು ಪ್ರಶ್ನೆಗಳನ್ನು ಸಹ ಕೇಳಿದ್ದು, ಕೆಲವು ಬೇಡಿಕೆಗಳನ್ನು ಸಹ ಇರಿಸಿದ್ದಾರೆ. ಇವೆಲ್ಲಕ್ಕೂ ಮೋದಿ ಉತ್ತರಿಸುತ್ತಾರಾ? ಕಾದು ನೋಡಬೇಕು.
ಆದರೆ, ರಾಹುಲ್ ಗಾಂಧಿ ಅವರು ಕೇಳಿದ ಪ್ರಶ್ನೆಗಳೇನು ಎಂಬುದು ತುಂಬ ಆಸಕ್ತಿಕರವಾಗಿದೆ. ವಿಪಕ್ಷಗಳೆಲ್ಲ ಸೇರಿ ಕೇಂದ್ರ ಸರಕಾರದ ಅಪನಗದೀಕರಣ ನಿರ್ಧಾರದ ವಿರುದ್ಧ ಒಂದು ಕಡೆ ಕಿಡಿ ಕಾರುತ್ತಿದ್ದರೆ, ನಾನು ಪಾಕಿಸ್ತಾನದವನಾ, ಭ್ರಷ್ಟಾಚಾರ ನಿಯಂತ್ರಣಕ್ಕೆ ತರಲು ತೆಗೆದುಕೊಂಡು ಈ ಕ್ರಮವೇ ತಪ್ಪಾ ಎಂದು ಸಾರ್ವಜನಿಕ ಸಭೆಯಲ್ಲಿ ಮೋದಿ ಪ್ರಶ್ನೆ ಮಾಡುತ್ತಿದ್ದಾರೆ.[ರಾಹುಲ್ ಹೀರೊ.. ಮೋದಿ ಝೀರೊ: ಪೂಜಾರಿ ಲೇವಡಿ]
ಒಟ್ಟಿನಲ್ಲಿ ಕೇಂದ್ರ ಸರಕಾರದ ವಿರುದ್ಧ ವಿಪಕ್ಷಗಳೆಲ್ಲ ಸೇರಿ, ಯುದ್ಧ ಘೋಷಿಸಿರುವುದಂತೂ ಹೌದು. ಇಂಥ ಸನ್ನಿವೇಶದಲ್ಲಿ ಪ್ರಧಾನಮಂತ್ರಿ ಹೇಗೆ ಉತ್ತರ ನೀಡುತ್ತಾರೆ? ಅದನ್ನು ನಿರೀಕ್ಷಿಸುವ ಮುನ್ನ ರಾಹುಲ್ ಗಾಂಧಿ ಅವರು ಕೇಳಿದ ಪ್ರಶ್ನೆಗಳೇನು ಎಂಬ ಬಗ್ಗೆ ತಿಳಿದುಕೊಳ್ಳಬೇಕು.
ಬಯಲಿಗೆ ಬಂದ ಕಪ್ಪು ಹಣ ಎಷ್ಟು?
ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರುಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರ ಘೋಷಿಸಿದ ನವೆಂಬರ್ 8ರ ನಂತರ ಬಯಲಿಗೆ ಬಂದ ಕಪ್ಪು ಹಣದ ಮೊತ್ತವೆಷ್ಟು?ಅದನ್ನು ಸಾರ್ವಜನಿಕರ ಮುಂದೆ ಇಡುತ್ತೀರಾ?
ಆರ್ಥಿಕ ನಷ್ಟ ಎಷ್ಟು?
ದೇಶಕ್ಕೆ ಆಗಿರುವ ಒಟ್ಟು ಆರ್ಥಿಕ ನಷ್ಟ ಎಷ್ಟು? ಅಪನಗದೀಕರಣ ಘೋಷಣೆ ನಂತರ ಎಷ್ಟು ಜನ ಕೆಲಸ ಹಾಗೂ ತಮ್ಮ ಜೀವನಾಧಾರವನ್ನು ಕಳೆದುಕೊಂಡಿದ್ದಾರೆ?
ಮೃತರ ಕುಟುಂಬಕ್ಕೆ ಪರಿಹಾರ ಏಕೆ ನೀಡುತ್ತಿಲ್ಲ?
ಅಪನಗದೀಕರಣದಿಂದ ಎಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ? ಸರಕಾರ ಯಾಕೆ ಮೃತರ ಕುಟುಂಬಕ್ಕೆ ಪರಿಹಾರ ನೀಡುತ್ತಿಲ್ಲ?
ತಯಾರಿ ಏನು ನಡೆದಿತ್ತು?
ಅಪನಗದೀಕರಣ ಜಾರಿಗೆ ಮುಂಚೆ ಸರಕಾರದಿಂದ ನಡೆದ ತಯಾರಿ, ಯಾರ್ಯಾರನ್ನು ಭೇಟಿ ಮಾಡಿದೆ? ಘೋಷಣೆಗೂ ಮುನ್ನ ಆರ್ಥಿಕ ತಜ್ಞರು, ಆರ್ ಬಿಐನ ಏಕೆ ಭೇಟಿ ಮಾಡಿಲ್ಲ?
ಹೆಸರು ಬಹಿರಂಗಪಡಿಸಿ
ನವೆಂಬರ್ 8ಕ್ಕೂ ಮುಂಚೆ ಅಂದರೆ ಆರು ತಿಂಗಳ ಹಿಂದಿನ ಅವಧಿಯಲ್ಲಿ ಯಾರ್ಯಾರು ತಮ್ಮ ಬ್ಯಾಂಕ್ ಖಾತೆಗೆ ಇಪ್ಪತ್ತೈದು ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಜಮೆ ಮಾಡಿದ್ದಾರೋ ಅವರೆಲ್ಲರ ಹೆಸರನ್ನು ಸರಕಾರ ಬಹಿರಂಗಪಡಿಸುತ್ತಾ?
ರಾಹುಲ್ ಮುಂದಿಟ್ಟಿರುವ ಬೇಡಿಕೆಗಳು
ಜನರು ತಮ್ಮದೇ ಹಣವನ್ನು ಬ್ಯಾಂಕ್-ಎಟಿಎಂನಿಂದ ತೆಗೆದುಕೊಳ್ಳುವುದಕ್ಕೆ ಇರುವ ಎಲ್ಲ ಮಿತಿಗಳನ್ನು ತೆಗೆದುಹಾಕಬೇಕು.
ಪಡಿತರ ಬೆಲೆ ಅರ್ಧಕ್ಕೆ ಇಳಿಸಿ
ಸರಕಾರ ವಿತರಿಸುವ ಪಡಿತರದ ಬೆಲೆಗಳನ್ನು ಒಂದು ವರ್ಷದ ಅವಧಿಗೆ ಅರ್ಧಕ್ಕೆ ಇಳಿಸಬೇಕು.
ಮಹಿಳೆಗೆ 25 ಸಾವಿರ ರುಪಾಯಿ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಕನಿಷ್ಠ ಒಬ್ಬ ಮಹಿಳೆ ಖಾತೆಯಲ್ಲಿ ಇಪ್ಪತ್ತೈದು ಸಾವಿರ ರುಪಾಯಿ ಜಮೆ ಮಾಡಬೇಕು.
ಕೂಲಿ ದ್ವಿಗುಣಗೊಳಿಸಿ
ಉದ್ಯೋಗ ಖಾತ್ರಿ ಯೋಜನೆ ಅಡಿ ಈಗ ನೀಡುತ್ತಿರುವ ಕೆಲಸದ ದಿನಗಳ ಸಂಖ್ಯೆ ಹಾಗೂ ಕೂಲಿಯನ್ನು ಒಂದು ವರ್ಷದ ಮಟ್ಟಿಗೆ ದ್ವಿಗುಣಗೊಳಿಸಬೇಕು.
ಶೇ 50ರಷ್ಟು ತೆರಿಗೆ ವಿನಾಯಿತಿ
ಸಣ್ಣ ಮಟ್ಟದ ಅಂಗಡಿಗಳ ಮಾಲೀಕರು ಮತ್ತು ವ್ಯಾಪಾರಿಗಳ ಆದಾಯ ತೆರಿಗೆ ಹಾಗೂ ಮಾರಾಟ ತೆರಿಗೆಗೆ ಶೇ 50ರಷ್ಟು ವಿನಾಯಿತಿ ನೀಡಬೇಕು.