ಪ್ರಧಾನಿ ಕನಸು ಕಾಣಲು ರಾಹುಲ್ಗೆ ಹಕ್ಕಿದೆ: ಶಿವಸೇನಾ
ಮುಂಬೈ, ಮೇ 10: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಿಯಾಗಲು ಸಿದ್ಧ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿಯ ಮಿತ್ರಪಕ್ಷ ಶಿವಸೇನಾ ಬೆಂಬಲ ವ್ಯಕ್ತಪಡಿಸಿದೆ.
ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರಧಾನಿಯಾಗುವ ಕನಸು ಕಾಣುವ ಹಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಪ್ರಧಾನ ಸೇವಕ ಎಂದು ಕರೆದುಕೊಳ್ಳುತ್ತಿರುವಾಗ, ದೇಶದ ಪ್ರತಿ ಸೇವಕನೂ ದೇಶದ ಪ್ರಧಾನಿಯಾಗಬಹುದು ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.
ಸಮೀಕ್ಷೆ ಮೀರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ: ರಾಹುಲ್ ವಿಶ್ವಾಸ
ಅಲ್ಲದೆ, ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸದ ರಾಹುಲ್ ಗಾಂಧಿ ಘನತೆ ಮೆರೆದಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿಗೆ ಸವಾಲೊಡ್ಡಬಲ್ಲರು ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ' ಪತ್ರಿಕೆಯಲ್ಲಿ ಹೇಳಿದೆ.
ಕಾಂಗ್ರೆಸ್ ಬಹುಮತ ಪಡೆದರೆ ತಾವೇ ಪ್ರಧಾನಿಯಾಗುವುದು ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಟೀಕಿಸುವ ಬದಲು ಬಿಜೆಪಿ ಸ್ವಾಗತಿಸಬೇಕಿತ್ತು ಎಂದು ಶಿವಸೇನಾ ಅಭಿಪ್ರಾಯಪಟ್ಟಿದೆ.
ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ
ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸುವುದಾಗಿ ಹೇಳಿಕೊಳ್ಳಬೇಕಿತ್ತು. ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಬೇಕೇ ಬೇಡವೇ ಎಂಬುದನ್ನು ಜನರು ತೀರ್ಮಾನಿಸುತ್ತಾರೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಹೇಳಿದೆ.
2014ರ ಚುನಾವಣೆಗೆ ಹೋಲಿಸಿದರೆ ರಾಹುಲ್ ಗಾಂಧಿ ಸಾಕಷ್ಟು ಬದಲಾಗಿದ್ದಾರೆ. ಅವರೊಬ್ಬ ದೃಢಮನಸ್ಸಿನ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಬರೆದಿದೆ.