ಬಂಡೀಪುರದಲ್ಲಿ ರಾತ್ರಿ ಸಂಚಾರ ಬೇಕೇ? ವನ್ಯಪ್ರಾಣಿಗಳ ಸಾವು ರಾಹುಲ್ ಗಾಂಧಿಗೆ ಕಾಣಿಸುತ್ತಿಲ್ಲವೇ?
ನವದೆಹಲಿ, ಸೆಪ್ಟೆಂಬರ್ 30: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕೆಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನಃ ವಿವಾದ ಹುಟ್ಟುಹಾಕಿದ್ದಾರೆ.
ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ, ಅಲ್ಲಿನ ವ್ಯಾಪಾರಿಗಳು, ಸರಕು ಸಾಗಣೆ ವಾಹನ ಮಾಲೀಕರು, ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಲಾಬಿಗೆ ಮಣಿದಿದ್ದಾರೆ. ಬಂಡೀಪುರ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಏನೇನು ಸಮಸ್ಯೆ ಆಗುತ್ತವೆ ಎಂಬ ತಿಳಿವಳಿಕೆಯೇ ರಾಹುಲ್ ಗಾಂಧಿ ಅವರಿಗೆ ಇಲ್ಲ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ರಾತ್ರಿ ಸಂಚಾರದ ಮೇಲೆ ಮತ್ತೆ ರಾಹುಲ್ ಗಾಂಧಿ ಕಣ್ಣು
ಬಂಡೀಪುರ ಮಾರ್ಗದ ಕುರಿತು ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಇದು ಮೊದಲೇನಲ್ಲ. ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಅದನ್ನು ಪ್ರಮುಖವಾಗಿ ಉಲ್ಲೇಖಿಸಿದ್ದರು. ರಾತ್ರಿ ವಾಹನ ಸಂಚಾರ ನಿಷೇಧದಿಂದ ಸಾವಿರಾರು ಸಂಖ್ಯೆಯ ಜನರಿಗೆ ಸಂಕಷ್ಟವಾಗಿದೆ. ಹೀಗಾಗಿ ನಿರ್ಬಂಧ ತೆರವು ಮಾಡಿ ಎಂದು ರಾಹುಲ್ ಗಾಂಧಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದರು. ಅದನ್ನು ಗಡ್ಕರಿ ತಿರಸ್ಕರಿಸಿದ್ದರು.
ಸಮುದಾಯದ ಹಿತಾಸಕ್ತಿ ರಕ್ಷಿಸಿ
'ನಮ್ಮ ಪರಿಸರವನ್ನು ರಕ್ಷಿಸುವ ನಮ್ಮ ಸಾಮೂಹಿಕ ಹೊಣೆಗಾರಿಕೆಯನ್ನು ಎತ್ತಿಹಿಡಿಯುವುದರ ಜತೆಗೆ ಸ್ಥಳೀಯ ಸಮುದಾಯಗಳ ಹಿತಾಸಕ್ತಿಗಳನ್ನು ರಕ್ಷಿಸಲು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕೆಂದು ಮನವಿ ಮಾಡುತ್ತೇನೆ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಉಪವಾಸ ಹೋರಾಟಕ್ಕೆ ಬೆಂಬಲ
'ಕೇರಳ ಮತ್ತು ಕರ್ನಾಟಕದಲ್ಲಿ ಲಕ್ಷಾಂತರ ಜನರಿಗೆ ತೀವ್ರ ಸಂಕಷ್ಟ ತಂದೊಡ್ಡಿರುವ ಎನ್ಎಚ್ 766ರಲ್ಲಿನ ನಿತ್ಯ 9 ಗಂಟೆ ಸಂಚಾರ ನಿಷೇಧದ ವಿರುದ್ಧ ಸೆ. 25ರಿಂದ ಅನಿರ್ದಿಷ್ಟಾವಧಿ ನಿರಶನ ನಡೆಸುತ್ತಿರುವ ಯುವಜನರಿಗೆ ನನ್ನ ಬೆಂಬಲ ಇದೆ' ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದರು.
ರಾಹುಲ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವನ್ಯಜೀವಿಗಳ ರಕ್ಷಣೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಪರಿಸರವಾದಿಗಳು ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?
ಸಂವೇದನಾರಹಿತ ಹೇಳಿಕೆ
'ವಯನಾಡು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿರುವ ವ್ಯಕ್ತಿ ಈ ರೀತಿ ಸಂವೇದನಾರಹಿತ ಮತ್ತು ಉಡಾಫೆಯ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದ ತೀವ್ರ ನಿರಾಸೆಯಾಗಿದೆ. ಇಂತಹ ಮಹತ್ವದ ವಿಚಾರಗಳಲ್ಲಿ ನಮ್ಮ ನಾಯಕರು ನೇರ ವಿಚಾರವಂತಿಕೆಯನ್ನು ಹೊಂದಿರಬೇಕೇ ಹೊರತು ಅದರ ಬಗ್ಗೆ ಲಘುವಾಗಿ ಇರಬಾರದು ಎಂದು ನಿರೀಕ್ಷಿಸುತ್ತೇವೆ. ಈ ವಿಚಾರವು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಎಂದೆನಿಸುತ್ತಿದೆ' ಎಂದು ಪರಿಸರವಾದಿ ಜೋಸೆಫ್ ಹೂವರ್ ಹೇಳಿರುವುದರನ್ನು ಬೆಂಗಳೂರು ಮಿರರ್ ವರದಿ ಮಾಡಿದೆ.
ಸಾಮಾನ್ಯ ತಿಳಿವಳಿಕೆಯೇ ಇಲ್ಲ
ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಮತ್ತೆ ಸಾಬೀತುಪಡಿಸಿದ್ದಾರೆ. ಅವರಿಗೆ ವನ್ಯಜೀವಿಗಳು, ಅವುಗಳ ರಕ್ಷಣೆಯ ಮಹತ್ವ ಮತ್ತು ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವುದರಿಂದ ಪ್ರಾಣಿಗಳ ಜೀವಕ್ಕೆ ಕುತ್ತು ತರಲಿದೆ ಎಂಬ ಸಂಗತಿಗಳೇ ಅರಿವಿಲ್ಲ. ಏಕೆ ನಿಷೇಧ ಹೇರಲಾಗಿದೆ ಎಂಬ ಸಾಮಾನ್ಯ ತಿಳಿವಳಿಕೆ ಕೂಡ ಇಲ್ಲ ಎಂದು ಟ್ವಿಟ್ಟರ್ನಲ್ಲಿ ಟೀಕಿಸಲಾಗಿದೆ.
ಇನ್ಮುಂದೆ ಬಂಡೀಪುರದ ಹುಲಿಯಮ್ಮನ ದೇಗುಲಕ್ಕೆ ಸಲೀಸಾಗಿ ಹೋಗುವಂತಿಲ್ಲ!
ಬಂಗಾಳದ ಆನೆಯ ಸಾವು ಕಾಣಿಸುತ್ತಿಲ್ಲವೇ?
ಶುಕ್ರವಾರವಷ್ಟೇ ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶವೊಂದರಲ್ಲಿ ರೈಲು ಡಿಕ್ಕಿಯಾಗಿ ಆನೆಯೊಂದು ಮೃತಪಟ್ಟಿದೆ. ಈ ದುರಂತ ನಡೆದಿರುವುದು ಬೆಳಗಿನ ಸಮಯದಲ್ಲಿ. ಬೆಳಗ್ಗೆ 8.30ರ ವೇಳೆ ಹಳಿ ದಾಟಿ ಇನ್ನೊಂದು ಬದಿಗೆ ಸಾಗುತ್ತಿದ್ದ ಆನೆಗೆ ರೈಲು ಡಿಕ್ಕಿ ಹೊಡೆದು ಆನೆ ನರಳಾಡುವ ಹೃದಯವಿದ್ರಾವಕ ಘಟನೆಯ ವಿಡಿಯೋ ವೈರಲ್ ಆಗಿದೆ. ಇದು ಆನೆಯ ಸ್ಥಳವನ್ನು ಮನುಷ್ಯ ಆಕ್ರಮಿಸಿಕೊಂಡದ್ದರ ಪರಿಣಾಮ. ಈ ಘಟನೆ ರಾಹುಲ್ ಗಾಂಧಿ ಅವರ ಕಣ್ಣಿಗೆ ಕಾಣಿಸಿಲ್ಲವೇ? ಇಂತಹ ಎಷ್ಟೊಂದು ಘಟನೆಗಳು ನಿತ್ಯವೂ ನಡೆಯುತ್ತಿವೆ. ಮೊದಲು ವನ್ಯಜೀವಿಗಳ ರಕ್ಷಣೆ ಬಗ್ಗೆ ಗಮನಹರಿಸಿ. ಇಂತಹ ವಿಚಾರಗಳಲ್ಲಿ ಚಿಲ್ಲರೆ ರಾಜಕೀಯ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಪರ್ಯಾಯ ಮಾರ್ಗ ಬಳಸಿಕೊಳ್ಳಿ
ಹಗಲಿನ ಹೊತ್ತು ನಡೆಯುವ ಅಪಘಾತಗಳಿಂದಲೇ ವನ್ಯಜೀವಿಗಳನ್ನು ಉಳಿಸುವುದು ಸಾಧ್ಯವಾಗುತ್ತಿಲ್ಲ. ಇನ್ನು ರಾತ್ರಿ ವೇಳೆ ಈ ರೀತಿ ಅಪಘಾತಗಳು ನಡೆದರೆ ಯಾರು ಹೊಣೆ? ಇದರಿಂದ ಮತ್ತಷ್ಟು ಪ್ರಾಣಿಗಳು ಸಾಯುವ ಸಾಧ್ಯತೆ ಇದೆ. ಪ್ರಾಣಿಗಳು ದಾಳಿ ಮಾಡಿ ಮನುಷ್ಯರು ಬಲಿಯಾಗುವ ಅಪಾಯವೂ ಇದೆ. ಕರ್ನಾಟಕಕ್ಕೆ ಪ್ರಯಾಣ ಮಾಡುವವರು ಹಗಲಿನ ವೇಳೆ ಪ್ರಯಾಣಿಸಲಿ. ಇಲ್ಲವೇ ರಾತ್ರಿ ಪ್ರಯಾಣಕ್ಕೆ ಇರುವ ಪರ್ಯಾಯ ಮಾರ್ಗವನ್ನು ಬಳಸಿಕೊಳ್ಳಲಿ. ವನ್ಯಜೀವಿಗಳ ಜೀವಕ್ಕೆ ಇರುವ ಮೌಲ್ಯಕ್ಕಿಂತ ರಾತ್ರಿ ಓಡಾಟಕ್ಕೆ ವೆಚ್ಚವಾಗುವ ಹಣ ಹೆಚ್ಚಲ್ಲ ಎಂದು ಅನೇಕರು ಹೇಳಿದ್ದಾರೆ.