'ಭಾರತದ ರಾಜಕೀಯದಲ್ಲಿ ಟ್ವಿಟ್ಟರ್ ಹಸ್ತಕ್ಷೇಪ': ತನ್ನ ಖಾತೆ ನಿರ್ಬಂಧಕ್ಕೆ ರಾಹುಲ್ ಕಿಡಿ
ನವದೆಹಲಿ, ಆ. 13: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದಕ್ಕಾಗಿ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ವಿರುದ್ದ ಹರಿಹಾಯ್ದಿದ್ದಾರೆ ಮತ್ತು ''ಕಂಪನಿಯು ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಮತ್ತು ಇದು ಪ್ರಜಾಪ್ರಭುತ್ವದ ರಚನೆಯ ಮೇಲೆ ದಾಳಿ,'' ಎಂದು ಹೇಳಿದ್ದಾರೆ.
ಶುಕ್ರವಾರ ರಾಹುಲ್ ಗಾಂಧಿ ವೀಡಿಯೊ ಹೇಳಿಕೆಯೊಂದನ್ನು ನೀಡಿದ್ದು, "ನನ್ನ ಟ್ವಿಟ್ಟರ್ ಖಾತೆಯನ್ನು ಸ್ಥಗಿತಗೊಳಿಸುವ ಮೂಲಕ, ಟ್ವಿಟ್ಟರ್ ನಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಕಂಪನಿಯು ತನ್ನ ವ್ಯವಹಾರವನ್ನು ಮಾಡುತ್ತಿದೆ. ನಾನು ಓರ್ವ ರಾಜಕೀಯ ವ್ಯಕ್ತಿಯಾಗಿ ಟ್ವಿಟ್ಟರ್ನ ಈ ನಡೆಯನ್ನು ಇಷ್ಟಪಡುವುದಿಲ್ಲ," ಎಂದು ಅಭಿಪ್ರಾಯಿಸಿದ್ದಾರೆ.
ರಣದೀಪ್ ಸುರ್ಜೇವಾಲಾ ಸೇರಿ ಕಾಂಗ್ರೆಸ್ನ 5 ಹಿರಿಯ ನಾಯಕರ ಟ್ವಿಟ್ಟರ್ ಲಾಕ್
"ಟ್ವಿಟ್ಟರ್ ದೇಶದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಹಾಗೂ ಖಾತೆಗಳನ್ನು ನಿರ್ಬಂಧಿಸಿರುವುದು ದೇಶದ ಪ್ರಜಾಪ್ರಭುತ್ವ ರಚನೆಯ ಮೇಲಿನ ದಾಳಿ. ಇದು ರಾಹುಲ್ ಗಾಂಧಿ ಮೇಲಿನ ದಾಳಿ ಅಲ್ಲ. ಇದು ರಾಹುಲ್ ಗಾಂಧಿಯನ್ನು ಸುಮ್ಮನೆ ಕೂರಿಸುವ ಕೆಲಸವಲ್ಲ. ನಾನು 19-20 ಮಿಲಿಯನ್ ಫಾಲೋವರ್ಸ್ಗಳನ್ನು ಟ್ವಿಟ್ಟರ್ನಲ್ಲಿ ಹೊಂದಿದ್ದೇನೆ. ನೀವು ಆ ಟ್ವಿಟ್ಟರ್ ಖಾತೆಗಳಿಗೂ ಅಭಿಪ್ರಾಯದ ಹಕ್ಕನ್ನು ನಿರಾಕರಿಸುತ್ತಿದ್ದೀರಿ," ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ, ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಹಾಗೂ ಹೆಚ್ಚಿನ ಸಂಖ್ಯೆಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಟ್ವಿಟ್ಟರ್ ಖಾತೆಯನ್ನು ಕಂಪನಿಯು ನಿರ್ಬಂಧಿಸಿದೆ ಎಂದು ಆರೋಪಿಸಿದೆ. ಟ್ವಿಟ್ಟರ್ ಮಾತ್ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿದೆ. ಕಾನೂನು ಉಲ್ಲಂಘಿಸಿ ದೆಹಲಿಯಲ್ಲಿ ಒಂಬತ್ತು ವರ್ಷದ ದಲಿತ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಚಿತ್ರಗಳನ್ನು ಹಂಚಿಕೊಂಡ ನಂತರ ರಾಹುಲ್ ಗಾಂಧಿಯವರ ವೈಯಕ್ತಿಕ ಟ್ವಿಟರ್ ಹ್ಯಾಂಡಲ್ ಅನ್ನು ನಿರ್ಬಂಧಿಸಿದ ಹಿನ್ನಲೆಯ ಬಳಿಕ ಹಲವಾರು ಕಾಂಗ್ರೆಸ್ ಮುಖಂಡರ ಟ್ವಿಟ್ಟರ್ ಲಾಕ್ ಆಗಿದೆ.
ಈ ಬಗ್ಗೆ ಸ್ಪಷ್ಟಣೆ ನೀಡಿದ ಟ್ವಿಟ್ಟರ್ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರ ಖಾತೆಗಳನ್ನು ನಿರ್ಬಂಧಿಸಿರುವುದು ನಿಯಮಗಳನ್ನು ಉಲ್ಲಂಘಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ ಹಿನ್ನೆಲೆ. ಈ ಕ್ರಮವನ್ನು ವೈಯಕ್ತಿಕ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ಮಾಡಲಾಗಿದೆ ಎಂದು ಹೇಳಿದೆ. ಆದರೆ ರಾಹುಲ್ ಗಾಂಧಿ "ಇದು ಅನ್ಯಾಯ ಮಾತ್ರವಲ್ಲ, ಟ್ವಿಟ್ಟರ್ ಒಂದು ತಟಸ್ಥ ವೇದಿಕೆ ಎಂಬ ಕಲ್ಪನೆಯನ್ನು ಉಲ್ಲಂಘಿಸುತ್ತಿದೆ. ಮತ್ತು ಹೂಡಿಕೆದಾರರಿಗೆ, ಇದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಏಕೆಂದರೆ ರಾಜಕೀಯ ಸ್ಪರ್ಧೆಯಲ್ಲಿ ಪಕ್ಷಗಳನ್ನು ತೆಗೆದುಕೊಳ್ಳುವುದು ಟ್ವಿಟ್ಟರ್ಗೆ ಪರಿಣಾಮ ಬೀರುತ್ತದೆ," ಎಂದು ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್ ನಾಯಕರ ಟ್ವಿಟ್ಟರ್ ಖಾತೆ ಲಾಕ್: ಸಂಸ್ಥೆ ಕೊಟ್ಟ ಸ್ಪಷ್ಟನೆ ಏನು?
"ನಮ್ಮ ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿಯಾಗುತ್ತಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಅವಕಾಶ ನೀಡಿಲ್ಲ. ಮಾಧ್ಯಮವನ್ನು ಕೂಡಾ ನಿಯಂತ್ರಿಸಲಾಗಿದೆ ಮತ್ತು ನಾವು ಟ್ವಿಟ್ಟರ್ನಲ್ಲಿ ನಮ್ಮ ಅಭಿಪ್ರಾಯವನ್ನು ಹಾಕುವಾಗ ನಮಗೆ ಇನ್ನೂ ಬೆಳಕಿನ ಹಾದಿ ಇದೆ ಎಂದು ನಾನು ಭಾವಿಸಿದೆ. ಆದರೆ ಟ್ವಿಟ್ಟರ್ ಕೂಡಾ ಪಕ್ಷಪಾತದ ವೇದಿಕೆಯಾಗಿದೆ. ಇದು ಅಂದಿನ ಸರ್ಕಾರ ಹೇಳುವುದನ್ನು ಕೇಳುತ್ತದೆ," ಎಂದು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, "ನರೇಂದ್ರ ಮೋದಿ ಸರ್ಕಾರ ಟ್ವಿಟ್ಟರ್ಗೆ ಬೆದರಿಕೆ ಹಾಕುವ ಮೂಲಕ ತಮ್ಮ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ ನಂತರ ಇದೀಗ 5 ಮಂದಿ ಕಾಂಗ್ರೆಸ್ ಹಿರಿಯ ನಾಯಕರ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಅಜಯ್ ಮಾಕೆನ್, ಮಾಣಿಕ್ಕಂ ಟಾಗೋರ್, ಜಿತೇಂದ್ರ ಸಿಂಗ್, ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಲಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಗುರುವಾರ ತಿಳಿಸಿದೆ.
ಇದಕ್ಕೂ ಹಿಂದೆ ಹಲವಾರು ಬಿಜೆಪಿ ನಾಯಕರುಗಳ ಹಾಗೂ ಸೆಲೆಬ್ರೆಟಿಗಳ ಟ್ವಿಟ್ಟರ್ನಲ್ಲಿನ ಬ್ಲೂ ಕಿಟ್ ಮಾಯಾವಾದಾಗ ಭಾರೀ ಚರ್ಚೆ ನಡೆದಿತ್ತು. ಟ್ವಿಟ್ಟರ್ ಈ ಸಂದರ್ಭದಲ್ಲೂ ಖಾತೆಗಳು ಸಕ್ರಿಯವಾಗಿ ಇರದ ಕಾರಣ ಬ್ಲೂ ಟಿಕ್ ತೆಗೆದು ಹಾಕಲಾಗಿದೆ ಅಧಿಕೃತ ಖಾತೆ ಎಂದು ದೃಢಪಟ್ಟ ಬಳಿಕ ಮತ್ತೆ ಬ್ಲೂ ಟಿಕ್ ಹಾಕಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿತ್ತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬ್ಲೂ ಟಿಕ್ ವಿಚಾರದಲ್ಲಿ ಮಾತನಾಡಿದ್ದ ನಾಯಕರುಗಳನ್ನು ಲೇವಡಿ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)