ಮೋದಿಯ ಹರ್ ಘರ್ ತಿರಂಗಾಕ್ಕೆ ರಾಹುಲ್ ಗಾಂಧಿ ಟಾಂಗ್
ನವದೆಹಲಿ,ಆಗಸ್ಟ್.3: ಹರ್ ಘರ್ ತಿರಂಗಾ ಆಂದೋಲನದ ಭಾಗವಾಗಿ ದೇಶದ ಎಲ್ಲ ಜನರು ತಮ್ಮ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ದೇಶದ ತಿರಂಗವನ್ನು ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಬೆನ್ನಲ್ಲೆ ರಾಹುಲ್ ಗಾಂಧಿ ತಮ್ಮ ಪ್ರೊಫೈಲ್ಗೆ ಜವಾಹರ್ಲಾಲ್ ನೆಹರು ಅವರ ಫೋಟೋ ಹಾಕಿ ಟಾಂಗ್ ಕೊಟ್ಟಿದ್ದಾರೆ.
ಭಾರತದ 75ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿ "ಹರ್ ಘರ್ ತಿರಂಗ" ಆಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರೊಫೈಲ್ ಬದಲಾಯಿಸಿದ ಒಂದು ದಿನದ ನಂತರ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ.
ಈಗ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕೂಡ ರಾಹುಲ್ ಗಾಂಧಿ ಬಳಸಿದ್ದ ಅದೇ ಪೋಟೋವನ್ನು ತನ್ನ ಪ್ರೊಪೈಲ್ ಆಗಿ ಬಳಸಿದೆ. ರಾಹುಲ್ ಗಾಂಧಿಯವರ ಹೊಸ ಟ್ವಿಟ್ಟರ್ ಪ್ರೊಫೈಲ್ ಫೋಟೋವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ಹಿಡಿದಿರುವ ಗ್ರೇಡಿಯಂಟ್ ಚಿತ್ರವನ್ನು ಒಳಗೊಂಡಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪೋಟೋ ಕಪ್ಪು ಬಿಳುಪಿನಲ್ಲಿದ್ದು, ಅವರು ರಾಷ್ಟ್ರಧ್ವಜ ಹಡಿದಿದ್ದಾರೆ.
ತ್ರಿವರ್ಣ ಧ್ವಜವು ದೇಶದ ಹೆಮ್ಮೆ. ಅದು ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿದೆ" ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಹರ್ ಘರ್ ತಿರಂಗ ಆಚರಣೆಯ ಭಾಗವಾಗಿ, ಆಗಸ್ಟ್ 2 ಮತ್ತು 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರಾಷ್ಟ್ರಧ್ವಜವನ್ನು ತಮ್ಮ ಪ್ರೊಫೈಲ್ ಫೋಟೋವಾಗಿ ಬಳಸಲು ನರೇಂದ್ರ ಮೋದಿ ದೇಶದ ನಾಗರಿಕರನ್ನು ಒತ್ತಾಯಿಸಿದ್ದರು.
ನೀವು ಕೂಡ ಪ್ರೊಫೈಲ್ ಚಿತ್ರ ಬದಲಾಯಿಸಿ
ಇಂದು ಆಗಸ್ಟ್ 2ನೇ ವಿಶೇಷ ದಿನವಾಗಿದೆ. ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ದೇಶ ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸುವ ಸಾಮೂಹಿಕ ಆಂದೋಲನವಾದ ಹರ್ ಘರ್ ತಿರಂಗಕ್ಕೆ ಸಿದ್ಧವಾಗಿದೆ. ನಾನು ನನ್ನ ಡಿಪಿ (ಪ್ರೊಫೈಲ್ ಚಿತ್ರ) ಬದಲಾಯಿಸಿದ್ದೇನೆ. ನೀವು ಕೂಡ ಪ್ರೊಫೈಲ್ ಚಿತ್ರ ಬದಲಾವಣೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಮೋದಿ ನಿನ್ನೆ ಟ್ವೀಟ್ ಮಾಡಿದ್ದರು.
ಪಿಂಗಲಿ ವೆಂಕಯ್ಯಗೆ ಪ್ರಧಾನಿ ಮೋದಿ ಗೌರವ
"ಹರ್ ಘರ್ ತಿರಂಗ" ಆಚರಣೆಯ ಭಾಗವಾಗಿ ಆಗಸ್ಟ್ 2 ರಿಂದ 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರಾಷ್ಟ್ರಧ್ವಜವನ್ನು ತಮ್ಮ ಪ್ರೊಫೈಲ್ ಫೋಟೋವಾಗಿ ಬಳಸಲು ಕೇಂದ್ರ ಸರ್ಕಾರವೂ ನಾಗರಿಕರಿಗೆ ಕರೆ ನೀಡಿದ್ದಾರೆ. ಈ ನಡುವೆ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯ ಅವರ ಜನ್ಮದಿನದಂದು ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದರು.
ಕೆಂಪುಕೋಟೆಯಿಂದ ಬೈಕ್ ರ್ಯಾಲಿ
ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಅರ್ಪಿಸಲು ಬುಧವಾರ ಕೆಂಪು ಕೋಟೆಯಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ ಹಲವು ಸಂಸದರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಕೆಂಪು ಕೋಟೆಯಿಂದ ಬೈಕ್ ನಲ್ಲಿ ತೆರಳಿದರು.
ಭಾರತದ ವೈಭವವನ್ನು ಹೆಚ್ಚಿಸಲು ಕೆಲಸ
ಈ ವೇಳೆ ಸಂಸದ ಅನುರಾಗ್ ಠಾಕೂರ್ ಅವರು ಮಾತನಾಡಿ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರನ್ನು ಸ್ಮರಿಸುತ್ತಿದ್ದೇವೆ ಎಂಬ ಸಂದೇಶವನ್ನು ನೀಡಲು ಎಲ್ಲರೂ ಒಗ್ಗೂಡಿ ಐತಿಹಾಸಿಕ ಕೆಂಪುಕೋಟೆಯಿಂದ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಅಜಾದಿ ಕಾ ಅಮೃತ್ ಮಹೋತ್ಸವ ನಾವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಭಾರತದ ವೈಭವವನ್ನು ಹೆಚ್ಚಿಸಲು ಕೆಲಸ ಮಾಡುತ್ತೇವೆ ಎಂದು ಹೇಳಿದರು.