ರಾಹುಲ್ ಗಾಂಧಿ, ಸ್ಟಾಲಿನ್, ಪ್ರಶಾಂತ್ ಕಿಶೋರ್ ಕೂಡ "ಪೆಗಾಸಸ್" ಗುರಿ...
ನವದೆಹಲಿ, ಜುಲೈ 20: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹಾಗೂ ಮಾಹಿತಿ ತಂತ್ರಜ್ಞಾನದ ನೂತನ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಕೂಡ ಇಸ್ರೇಲ್ ಮೂಲದ ಗೂಢಚರ್ಯೆ "ಪೆಗಾಸಸ್" ಗುರಿಯಾಗಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಭಾರತದ ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಇಸ್ರೇಲ್ನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯನ್ನು "ದಿ ವೈರ್" ಸೋಮವಾರ ಬಹಿರಂಗಪಡಿಸಿತ್ತು.
ಕೆಲವು ಸಚಿವರು, ವಿರೋಧ ಪಕ್ಷಗಳ ನಾಯಕರು, ಕಾನೂನು ಕ್ಷೇತ್ರದವರು ಉದ್ಯಮಿಗಳು, ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿ ಸುಮಾರು 300 ಭಾರತೀಯರ ಮೊಬೈಲ್ಗಳು ಹ್ಯಾಕ್ ಆಗಿವೆ ಎಂದು ವರದಿ ತಿಳಿಸಿತ್ತು.
ಈ ವರದಿ ಬೆನ್ನಲ್ಲೇ ವಿರೋಧ ಪಕ್ಷಗಳ ಮೂವರು ರಾಜಕಾರಣಿಗಳು, ಇಬ್ಬರು ಕೇಂದ್ರ ಸಚಿವರು, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ, ನಲವತ್ತು ಪತ್ರಕರ್ತರು ಹಾಗೂ ಚುನಾವಣಾ ಆಯೋಗದ ಆಯುಕ್ತರ ಮೊಬೈಲ್ಗಳ ಮೇಲೆ ಪೆಗಾಸಸ್ ತಂತ್ರಾಂಶ ಬಳಸಿ ಕಣ್ಗಾವಲು ನಡೆಸುವ ಗುರಿ ಇತ್ತು ಎನ್ನುವ ಅಂಶ ತಿಳಿದುಬಂದಿದೆ.
ರಾಜಕಾರಣಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೆಸರು ಕೇಳಿಬಂದಿದೆ. ನಿವೃತ್ತ ಚುನಾವಣಾ ಆಯುಕ್ತರಾದ ಅಶೋಕ್ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್ ಹಾಗೂ ಅಶ್ವನಿ ವೈಷ್ಣವ್ ಅವರನ್ನು ಗುರಿಯಾಗಿಸಿ ಕಣ್ಗಾವಲು ಇಡುವ ಪ್ರಯತ್ನ ನಡೆದಿತ್ತು ಎಂಬ ಮಾಹಿತಿ ತಿಳಿದುಬಂದಿದೆ.
ಭಾರತದ ಪತ್ರಕರ್ತರು, ರಾಜಕಾರಣಿಗಳ ಮೇಲೆ ಇಸ್ರೇಲ್ನ ಗೂಢಚರ್ಯೆ ತಂತ್ರಾಂಶ "ಪೆಗಾಸಸ್" ಕಣ್ಣು
ಈ ಸಾಫ್ಟ್ವೇರ್ ಅನ್ನು ಇಸ್ರೇಲ್ ಮೂಲದ ಎನ್ಎಸ್ಒ ತಯಾರಿಸಿದ್ದು, ಇದನ್ನು ಸರ್ಕಾರಗಳಿಗೆ ಮಾತ್ರ ಸರಬರಾಜು ಮಾಡಲಾಗುತ್ತದೆ ಎಂಬ ದೂರು ಕೂಡ ಕೇಳಿಬಂದಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ, "ಭಾರತದಲ್ಲಿ ಪ್ರಭಾವಿಗಳನ್ನು ಗುರಿಯಾಗಿಸಿಕೊಂಡು ಬೇಹುಗಾರಿಗೆ ನಡೆಯುತ್ತಿದೆ ಎನ್ನುವ ಆರೋಪ ಆಧಾರರಹಿತ" ಎಂದು ಹೇಳಿತ್ತು.
2018-19ರ ಅವಧಿಯಲ್ಲಿ ಈ ಬೇಹುಗಾರಿಕೆ ಚಟುವಟಿಕೆ ನಡೆದಿರುವ ಸಾಧ್ಯತೆಯಿದೆ ಎಂದು "ದಿ ವೈರ್" ತಿಳಿಸಿದೆ.
ಫ್ರಾನ್ಸ್ನ ಫಾರ್ಬಿಡನ್ ಸ್ಟೋರೀಸ್ ಹಾಗೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ನಡೆಸಿರುವ ತನಿಖಾ ಪತ್ರಿಕೋದ್ಯಮದ ಭಾಗವಾಗಿ ಈ ದತ್ತಾಂಶವನ್ನು ಹದಿನೈದು ಮಾಧ್ಯಮ ಸಂಸ್ಥೆಗಳ ಜೊತೆ ಹಂಚಿಕೊಳ್ಳಲಾಗಿದ್ದು, ದಿ ವೈರ್ ವರದಿಯನ್ನು ಪ್ರಕಟಿಸುತ್ತಿದೆ.