ರಾಹುಲ್ ಗಾಂಧಿ ನಿಜಕ್ಕೂ ಬ್ರಾಹ್ಮಣ ದತ್ತಾತ್ರೇಯ ಗೋತ್ರದವರಾಗಲು ಸಾಧ್ಯವೇ?
ನವದೆಹಲಿ, ನವೆಂಬರ್ 28: ಕಾಂಗ್ರೆಸ್ ವಿರೋಧಿಗಳ ಪಾಲಿಗೆ ಭೂರಿ ಭೋಜನದಂತಾಗಿರುವ ರಾಹುಲ್ ಗಾಂಧಿ ವಂಶವೃತ್ತಾಂತ ಸಾಕಷ್ಟು ಕುತೂಹಲವನ್ನೂ ಕೆರಳಿಸಿದೆ.
ಈ ಹಿಂದೆ ರಾಹುಲ್ ಗಾಂಧಿ ಚುನಾವಣೆ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ 'ಟೆಂಪಲ್ ರನ್' ಆರಂಭಿಸಿದ್ದ ರಾಹುಲ್, ವಿರೋಧಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಅದೇ ಅವರ ಗೋತ್ರವನ್ನು ಪ್ರಶ್ನಿಸುವಂತೆಯೂ ಬಿಜೆಪಿಯನ್ನು ಪ್ರೇರೇಪಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ರಾಹುಲ್ ಅವರದ್ದು ಭಾರತೀಯ ಗೋತ್ರ ಎಂದು ಹೇಳಿತ್ತು.
ಇತ್ತೀಚೆಗೆ ರಾಜಸ್ಥಾನದ ದೇವಸ್ಥಾನವೊಂದರ ಪೂಜಾರಿ, ರಾಹುಲ್ ಗಾಂಧಿ ಅವರದು ದತ್ತಾತ್ರೇಯ ಗೋತ್ರ, ಅವರು ಕಾಶ್ಮೀರಿ ಬ್ರಾಹ್ಮಣ ಎಂದು ಹೇಳಿದ್ದರು. ಇದರ ಬಳಿಕ ರಾಹುಲ್ ಗೋತ್ರ ಮತ್ತು ಜಾತಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ರಾಹುಲ್ ಗಾಂಧಿ ನೈಜ ಗೋತ್ರ ಯಾವುದು? ಅರ್ಚಕ ಬಹಿರಂಗಪಡಿಸಿದ ಸಂಗತಿ
ಹೀಗಾಗಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಗೋತ್ರವೇ ಪ್ರಮುಖ ಚರ್ಚೆಯ ವಿಚಾರವಾಗಿ ಬದಲಾಗಿದೆ.
ಮುಖ್ಯವಾಗಿ ಬಿಜೆಪಿ ಈ ವಿಚಾರವನ್ನು ರಾಹುಲ್ ಮತ್ತು ಕಾಂಗ್ರೆಸ್ ಅನ್ನು ಪ್ರಶ್ನಿಸಿಕೊಳ್ಳಲು ಬಳಸುತ್ತಿದೆ.
ರಾಹುಲ್ ಗಾಂಧಿಯ ತಾತ ಫಿರೋಜ್ ಗಾಂಧಿ ಹಿಂದೂವೇ ಅಲ್ಲ. ಹೀಗಿರುವಾಗ ರಾಹುಲ್ ಗಾಂಧಿ ಅವರದ್ದು ದತ್ತಾತ್ರೇಯ ಗೋತ್ರ ಆಗಲು ಹೇಗೆ ಸಾಧ್ಯ ಎಂದು ಬಿಜೆಪಿ ಬೆಂಬಲಿಗರು ಪ್ರಶ್ನಿಸಿದ್ದಾರೆ. ಹಿಂದೂ ಆಚರಣೆಯಲ್ಲಿ ಪುತ್ರನಿಗೆ ತಂದೆಯ ಗೋತ್ರ ವಂಶಪಾರಂಪರ್ಯವಾಗಿ ಬರುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ 'ಇಂಡಿಯಾ ಟುಡೆ' ವಿವಿಧ ಪರಿಣತರ ಹೇಳಿಕೆಗಳನ್ನು ಉಲ್ಲೇಖಿಸಿ ಬರೆದ ವರದಿಯ ಸಾರ ಇಲ್ಲಿದೆ.
ತಂದೆಯಿಂದ ಗೋತ್ರ ಪ್ರಾಪ್ತಿ
ಇತಿಹಾಸಕಾರ ಎಲ್ ಬಾಶಂ ಅವರ ಪ್ರಕಾರ ಗೋತ್ರ ಎನ್ನುವುದು ಮೊದಲು ಪ್ರಸ್ತಾಪ ಆಗಿರುವುದು ಅಥರ್ವ ವೇದದಲ್ಲಿ. ಎಲ್ಲ ಬ್ರಾಹ್ಮಣರೂ ಒಬ್ಬ ಋಷಿಯಿಂದ ಜನಿಸಿದವರು ಎಂಬುದು ನಂಬಿಕೆ. ಹೀಗಾಗಿ ಋಷಿ/ಸನ್ಯಾಸಿಗಳ ಹೆಸರಿನಲ್ಲಿಯೇ ಅವರ ಗೋತ್ರಗಳಿವೆ. ಒಂದೇ ಗೋತ್ರದಲ್ಲಿ ಜನಿಸಿದವರು ಒಂದೇ ಪೂರ್ವಜರಿಂದ ಜನಿಸಿದವರು ಎಂದು ಪರಿಗಣಿಸುವುದರಿಂದ ಸಗೋತ್ರ ವಿವಾಹಕ್ಕೆ ನಿಷಿದ್ಧವಿದೆ.
ತೇಜಪುರದ ಕೇಂದ್ರ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಚಂದನ್ ಕುಮಾರ್ ಶರ್ಮಾ ಅವರು ಹೇಳುವಂತೆ ಗೋತ್ರ ಪದ್ಧತಿಯು ಬ್ರಾಹ್ಮಣರಲ್ಲಿ ತಂದೆಯ ಮೂಲಕವೇ ಬರುತ್ತದೆ ವಿನಾ ತಾಯಿಯ ಮೂಲಕವಲ್ಲ.
'ರಾಹುಲ್ ಗಾಂಧಿ ಗೋತ್ರ ಯಾವುದು? ಅವರು ತೊಡುವ ಜನಿವಾರ ಯಾವುದು?'
ಕೌಲ್, ನೆಹರೂ ಎಂದು ಬದಲಾಗಿದ್ದು ಹೇಗೆ?
ಪಂಡಿತ್ ಮೋತಿಲಾಲ್ ನೆಹರೂ ಅವರ ಪೂರ್ವಜರು ಕಾಶ್ಮೀರ ಕೌಲ ಬ್ರಾಹ್ಮಣರು. ಅವರು ಕಾಶ್ಮೀರದಲ್ಲಿ ನೆಲೆಸಿದ್ದರು. ಕಾಶ್ಮೀರದ ಕೌಲ ಬ್ರಾಹ್ಮಣರದು ದತ್ತಾತ್ರೇಯ ಗೋತ್ರ.
1716ರಲ್ಲಿ ಅವರ ಪೂರ್ವಜರಾದ ಪಂಡಿತ್ ರಾಜ್ ಕೌಲ್ ದೆಹಲಿಗೆ ವಲಸೆ ಹೋದರು. ಅವರ ಮನೆ ಇದ್ದದ್ದು ಕಾಲುವೆ ಒಂದರ ಬಳಿ (ಕಾಲುವೆಗೆ ಕಾಶ್ಮೀರಿ ಭಾಷೆಯಲ್ಲಿ ನಹೆರ್ ಎಂದು ಕರೆಯುತ್ತಾರೆ). ನಹೆರ್ ಸಮೀಪ ವಾಸಿಸುವವರು ಎಂದು ಜನರ ಕರೆಯುತ್ತಿದ್ದರು. ಅದು ಕ್ರಮೇಣ ನೆಹರೂ ಆಗಿ ಬದಲಾಯಿತು. ಬಳಿಕ ಕೌಲ ಎಂಬ ಹೆಸರು ಮಾಯವಾಗಿ ನೆಹರೂ ಸರ್ ನೇಮ್ ಆಗಿ ಉಳಿದುಕೊಂಡಿತು.
ರಾಹುಲ್ ಗಾಂಧಿ ಪೂರ್ವಿಕರ ವಂಶವೃಕ್ಷ ಬಿಚ್ಚಿಟ್ಟ ಟ್ವೀಟ್ ಲೋಕ
ಫಿರೋಜ್ ಘಂಡಿ ಜನ್ಮಕಥೆ
ಇಂದಿರಾ ಗಾಂಧಿ ಅವರ ಪತಿ ಮತ್ತು ರಾಹುಲ್ ಗಾಂಧಿ ಅವರ ಅಜ್ಜ ಫಿರೋಜ್ ಜಹಾಂಗೀರ್ ಘಂಡಿ ಪಾರ್ಸಿ ಕುಟುಂದವರು. ಅವರು ಮುಂಬೈನ ತೆಹಮುಲ್ಜಿ ನಾರಿಮನ್ ಆಸ್ಪತ್ರೆಯಲ್ಲಿ 1912ರ ಸೆಪ್ಟೆಂಬರ್ 12ರಂದು ಜನಿಸಿದರು.
ಅವರ ಜೀವನ ಚರಿತ್ರೆಯನ್ನು ಸ್ವೀಡನ್ ಪತ್ರಕರ್ತ ಬೆರ್ಟಿಲ್ ಫಾಲ್ಕ್ ಬರೆದಿದ್ದರು. 'ಫಿರೋಜ್- ಮರೆತುಹೋದ ಗಾಂಧಿ' ಕೃತಿಯ ಪ್ರಕಾರ, ಫಿರೋಜ್ ಅವರ ತಂದೆ ಜಹಾಂಗೀರ್ ಫರೆದೂನ್ ಘಂಡಿ ಗುಜರಾತ್ನ ಭರೂಚ್ನಲ್ಲಿ ನೌಕಾ ಎಂಜಿನಿಯರ್ ಆಗಿದ್ದರು.
ಫಿರೋಜ್ ತಾಯಿ ರತಿಮಾಯಿ ಕಮಿಸ್ಸರಿಯತ್ ಗುಜರಾತ್ನ ಸೂರತ್ನವರು. ಈ ದಂಪತಿಯ ಐದನೇ ಹಾಗೂ ಕೊನೆಯ ಮಗ ಫಿರೋಜ್. ಅವರಿಗೆ ಕೆಲವು ತಿಂಗಳುಗಳಾಗಿದ್ದಾಗ ರತಿಮಾಯಿ ಅವರ ವೈದ್ಯ ಸಹೋದರಿ ಶಿರಿನ್ ಫಿರೋಜ್ ಅವರನ್ನು ದತ್ತು ತೆಗೆದುಕೊಂಡರು. ಅಲಹಾಬಾದ್ನಲ್ಲಿ ನೆಲೆಸಿದ್ದ ಅವರು ಮದುವೆಯಾಗಿರಲಿಲ್ಲ. ಆದರೆ, ಫಿರೋಜ್ ಅವರನ್ನು ತಮ್ಮ ಸ್ವಂತ ಮಗನಂತೆ ಬೆಳೆಸಿದರು.
|
ಮಹಾತ್ಮ ಗಾಂಧಿಯಿಂದ ಪ್ರಭಾವಿತ
ಇತಿಹಾಸಕಾರ ರಾಮಚಂದ್ರ ಗುಹಾ ಅವರು ಬರೆದಿರುವ 'ಇಂಡಿಯಾ ಆಫ್ಟರ್ ಗಾಂಧಿ' ಪುಸ್ತಕದಲ್ಲಿ, ಮಹಾತ್ಮಾ ಗಾಂಧಿ ಅವರಿಂದ ಸ್ಫೂರ್ತಿ ಪಡೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಫಿರೋಜ್, ತಮ್ಮ ಸರ್ ನೇಮ್ 'ಘಂಡಿ'ಯನ್ನು ಅವರು ಗಾಂಧಿ ಎಂದು ಬದಲಿಸಿಕೊಂಡರು.
ಮತಾಂತರ-ಮದುವೆಯ ಗೊಂದಲ
ಇಂದಿರಾಗಾಂಧಿ ಅವರನ್ನು ಮದುವೆಯಾದ ಬಳಿಕ ಫಿರೋಜ್ ಗಾಂಧಿ ಹಿಂದೂ ಆಗಿ ಮತಾಂತರ ಹೊಂದಿದ್ದರು ಎಂಬ ಮಾತಿಗೆ ಪುರಾವೆಗಳಿಲ್ಲ. ಮದುವೆಯ ಕಾರಣಕ್ಕಾಗಿ ಮತಾಂತರ ಆಗುವುದನ್ನು ನೆಹರೂ ಕೂಡ ವಿರೋಧಿಸಿದ್ದರು. ಅಂತರ್ ಧರ್ಮೀಯ ವಿವಾಹದ ವಿಚಾರದಲ್ಲಿ ಆಚರಣೆಗಳ ಬಗ್ಗೆ ಗೊಂದಲಗಳಿದ್ದವು. ಆಗ ಅಂತರ್ ಧರ್ಮೀಯ ಮದುವೆಗಳು ಹಿಂದೂ ಧರ್ಮದಂತೆ ಮಾತ್ರ ನಡೆದರೆ ಅದಕ್ಕೆ ಕಾನೂನಿನ ಮಾನ್ಯತೆ ಸಿಗುತ್ತಿರಲಿಲ್ಲ. ಕೋರ್ಟ್ನಲ್ಲಿ ಸಿವಿಲ್ ಮ್ಯಾರೇಜ್ ಅಗತ್ಯವಾಗಿತ್ತು. ಆದರೆ, ತಮ್ಮ ಮದುವೆ ಆಚರಣೆಗಳ ಬಳಿಕ ಫಿರೋಜ್ ಮತ್ತು ಇಂದಿರಾ ಸಿವಿಲ್ ಮ್ಯಾರೇಜ್ ಆಗಿದ್ದರೇ ಎಂಬ ಬಗ್ಗೆ ವಿಭಿನ್ನ ವಾದಗಳಿವೆ.
ಸಿವಿಲ್ ಮ್ಯಾರೇಜ್ ಕಾನೂನು
ವಿನೋದ್ ಮೆಹ್ತಾ ಅವರು ಬರೆದ 'ದಿ ಸಂಜಯ್ ಸ್ಟೋರಿ' ಪುಸ್ತಕದಲ್ಲಿ, 'ಮುಂದೆ ಬರಬಹುದಾದ ಕಾನೂನಾತ್ಮಕ ಆಕ್ಷೇಪಗಳನ್ನು ಎದುರಿಸಲು ಮತ್ತು ಹಿಂದೂ ಕಾನೂನುಗಳ ಸಾಂಪ್ರದಾಯಿಕ ತಿಳಿವಳಿಕೆಗಳನ್ನು ಪಡೆದುಕೊಳ್ಳಲು ಫಿರೋಜ್, ಹಿಂದೂಯಿಸಂಗೆ ಮತಾಂತರ ಹೊಂದಿದ್ದರು. ಕಾಶ್ಮೀರದಲ್ಲಿ ಕೆಲ ಸಮಯ ಮಧುಚಂದ್ರಕ್ಕೆ ತೆರಳಿದ್ದ ಈ ಜೋಡಿ, ಬಳಿಕ ಸಿವಿಲ್ ಮ್ಯಾರೇಜ್ ಕಾನೂನನ್ನೂ ಪಾಲಿಸಿದ್ದರು' ಎಂದು ಬರೆಯಲಾಗಿದೆ.
ಆದರೆ, ಇಂದಿರಾ ಗಾಂಧಿ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದಾಗ ಅವರು ಮತಾಂತರ ಮತ್ತು ಸಿವಿಲ್ ಮ್ಯಾರೇಜ್ ನಡೆದಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾಗಿಯೂ ಬರೆಯಲಾಗಿದೆ.
|
ಪೂರ್ವಿಕರ ಇತಿಹಾಸ
ತಮ್ಮ ಮುತ್ತಜ್ಜ ಜವಹರಲಾಲ್ ನೆಹರೂ ಅವರ ಮೂಲದ ಆಧಾರದಲ್ಲಿ ರಾಹುಲ್ ಗಾಂಧಿ ತಾವು ದತ್ತಾತ್ರೇಯ ಗೋತ್ರದವರು ಎಂದು ಹೇಳಿಕೊಂಡಿರುವುದು ಸ್ಪಷ್ಟ. ಐತಿಹಾಸಿಕ ದಾಖಲೆಗಳ ಪ್ರಕಾರ ಇಂದಿರಾ ಗಾಂಧಿ ಕೂಡ ಇದೇ ಪುಷ್ಕರ್ ದೇವಸ್ಥಾನದಲ್ಲಿ ತಾವು ತಂದೆಯ ಗೋತ್ರಕ್ಕೆ ಸೇರಿದ್ದಾಗಿ ಹೇಳಿಕೊಂಡಿದ್ದರಂತೆ.
ಆದರೆ, ಹಿಂದೂ ಸಂಪ್ರದಾಯದಲ್ಲಿ ಇದಕ್ಕೆ ಅನುಮತಿ ಇಲ್ಲ. ಯಾವುದೇ ವ್ಯಕ್ತಿ ಹಿಂದೂ ಆಗಿ ಮತಾಂತರ ಹೊಂದಿದ್ದರೂ, ಅವರಿಗೆ ಗೋತ್ರ ಪ್ರಾಪ್ತಿಯಾಗುವುದಿಲ್ಲ. ಹೀಗಾಗಿ ಫಿರೋಜ್ ಗಾಂಧಿ ಹಿಂದೂ ಧರ್ಮಕ್ಕೆ ಬದಲಾಗಿದ್ದರೂ ಸಂಪ್ರದಾಯದ ಪ್ರಕಾರ ಅವರಿಗೆ ಯಾವುದೇ ಗೊತ್ರ ಇಲ್ಲ ಎಂದು ಸಮಾಜಶಾಸ್ತ್ರಜ್ಞ ಡಾ. ಪ್ರೇಮ್ ಚೌಧರಿ ಹೇಳಿದ್ದಾರೆ.
ಎರಡೂ ಸಂಪ್ರದಾಯದಂತೆ ವಿಧಿವಿಧಾನ
ಫಿರೋಜ್ ಅವರ ಧರ್ಮದ ಕುರಿತಾದ ವಿವಾದ ಅವರ ನಿಧನದ ಬಳಿಕವೂ ಮುಂದುವರಿದಿತ್ತು. ಅವರ ಅಂತಿಮ ಸಂಸ್ಕಾರವನ್ನು ಹಿಂದೂ ಮತ್ತು ಪಾರ್ಸಿ ಎರಡೂ ಸಂಪ್ರದಾಯದಂತೆ ನೆರವೇರಿಸಲಾಗಿತ್ತು. ಫಿರೋಜ್ ಗಾಂಧಿ ಅವರ ಪಾರ್ಥಿವ ಶರೀರವನ್ನು ಮೊದಲು ದೆಹಲಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಬಳಿಕ ಅವರ ಅಸ್ಥಿಯನ್ನು ಅಲಹಾಬಾದ್ನ ಪಾರ್ಸಿ ಸ್ಮಶಾನದ ಸಮಾಧಿಯಲ್ಲಿ ಇರಿಸಲಾಗಿತ್ತು.
|
ಗಿರಿರಾಜ್ ಸಿಂಗ್ ಟ್ವೀಟ್
ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಾಲಿವುಡ್ ಸಿನಿಮಾ 'ಜಾಲಿ ಎಲ್ಎಲ್ ಬಿ' ಚಿತ್ರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಬ್ರಾಹ್ಮಣ ಅರ್ಚಕನ ವೇಷದಲ್ಲಿ ಗೋತ್ರದ ಬಗ್ಗೆ ಪ್ರಶ್ನಿಸಿದಾಗ ಸುಳ್ಳು ಹೇಳಿ ಸಿಕ್ಕಿಬೀಳುವ ದೃಶ್ಯವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.