ಜೊತೆಯಾಗಿ ಪ್ರಯಾಣಿಸಿದ 'ಮಹಾಘಟಬಂಧನ'ದ ಪ್ರಯಾಣಿಕರು!
Recommended Video
ನವದೆಹಲಿ, ಡಿಸೆಂಬರ್ 17: ಮಹಾಮೈತ್ರಿಕೂಟದ ನೇತೃತ್ವ ವಹಿಸುವವರು ಯಾರು ಎಂಬ ಪ್ರಶ್ನೆ ಈಗಾಗಲೇ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮೈತ್ರಿ ಮಾಡಿಕೊಂಡಿರುವ ಪಕ್ಷಗಳನ್ನು ಕಾಡುತ್ತಿದೆ.
ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣೆಗೆ ಮುಂದಡಿಯಿಡಲು ಇತರೆ ಪಕ್ಷಗಳು ಸಿದ್ಧರಿಲ್ಲ.
ಮಹಾಘಟಬಂಧನದ ಮೂಲಕ ಬಿಜೆಪಿ ಸರ್ಕಾರವನ್ನು ಉರುಳಿಸಿ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ಎಲ್ಲ ವಿರೋಧಪಕ್ಷಗಳು ಚುನಾವಣೆಯಲ್ಲಿ ಗೆದ್ದರೆ ರಾಹುಲ್ ಗಾಂಧಿ ಅವರನ್ನೇ ತಮ್ಮ ಸರ್ಕಾರದ ಪ್ರಯಾಣದ ನಾಯಕ ಎಂದು ಒಪ್ಪಿಕೊಳ್ಳುತ್ತಾರೋ ಇಲ್ಲವೋ. ಆದರೆ, 'ಮಹಾಘಟಬಂಧನದ ಪ್ರಯಾಣ'ದಲ್ಲಿ ಮಾತ್ರ ರಾಹುಲ್ ಗಾಂಧಿಯೇ ಮುಂಚೂಣಿಯಲ್ಲಿದ್ದಾರೆ.
2019ರ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಸೇರಿಕೊಂಡು ಮಹಾ ಮೈತ್ರಿಕೂಟ ರಚಿಸಿ ಭರ್ಜರಿ ಸಿದ್ಧತೆ ನಡೆಸಿವೆ. ಇಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಕೆಲವು ಪ್ರಮುಖ ಪಕ್ಷಗಳ ನಾಯಕರಿಗೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವುದು ಇಷ್ಟವಿಲ್ಲ. ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್, ಮಾಯಾವತಿ ಎಲ್ಲರೂ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಹೀಗಾಗಿ ಸೋಮವಾರ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೈತ್ರಿಕೂಟದ ಬಹುತೇಕ ನಾಯಕರು ಒಟ್ಟಿಗೆ ತೆರಳಿದ್ದು ಕುತೂಹಲ ಮೂಡಿಸಿತು.
ವಿರೋಧಪಕ್ಷಗಳ ಮುಖಂಡರು ಮೂರು ಸತತ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಶೇಷ ವಿಮಾನದಲ್ಲಿ ತೆರಳಿದರು. ವಿಮಾನ ನಿಲ್ದಾಣದಿಂದ ಸಮಾರಂಭದ ಸ್ಥಳಕ್ಕೆ ಬಸ್ನಲ್ಲಿ ಸಾಗಿದರು. ಇವರೆಲ್ಲರೂ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇದಿಕೆಯ ಮೇಲೆಯೂ ಕುಳಿತಿದ್ದರು.
|
ರಾಹುಲ್ ಮತ್ತು ಮನಮೋಹನ್ ಸಿಂಗ್ ಮುಂದೆ
ಸೋಮವಾರ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೀಗೆ ಮಹಾಘಟಬಂಧನದ ನಾಯಕರ ದಂಡು ಒಟ್ಟಿಗೆ ತೆರಳಿತ್ತು. ಅದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೊತೆ ರಾಹುಲ್ ಗಾಂಧಿ ಮೊದಲ ಸೀಟಿನಲ್ಲಿ ಕುಳಿತಿದ್ದರು. 2019ರ ಮಹಾಮೈತ್ರಿಕೂಟ ಪ್ರಧಾನಿ ಅಭ್ಯರ್ಥಿ ಎಂದು ರಾಹುಲ್ ಅವರ ಹೆಸರನ್ನು ಘೋಷಿಸಿದ ಮರು ದಿನವೇ ಅವರು 'ಮಹಾಮೈತ್ರಿಕೂಟದ ಪ್ರಯಾಣ'ದ ಮುಂಚೂಣಿಯಲ್ಲಿದ್ದದ್ದು ಕಾಕತಾಳೀಯವೂ ಇರಬಹುದು.
ಕಮಲ್ ನಾಥ್ ಪ್ರಮಾಣವಚನ: ವ್ಯಾಪಕ ಪ್ರಶಂಸೆಗೊಳಗಾದ ಶಿವರಾಜ್ ಸಿಂಗ್ ನಡೆ
ಮೂವರು ಪ್ರಯಾಣಿಕರ ಗೈರು
ಆದರೆ, ಸೋಮವಾರದ ಈ ಪ್ರಯಾಣದಲ್ಲಿ ಮೂವರು ಮುಖ್ಯ ಪ್ರಯಾಣಿಕರ ಗೈರು ಎದ್ದು ಕಾಣುತ್ತಿತ್ತು. ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಅಖಿಲೇಶ್ ಯಾದವ್. ಈ ಮೂವರೂ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಸ್ಟಾಲಿನ್ ಪ್ರಸ್ತಾವ ಮುಂದಿಟ್ಟಿದ್ದರಿಂದ ಅಸಮಾಧಾನಗೊಂಡವರು.
|
ಉಳಿದ ಪ್ರಯಾಣಿಕರಿದ್ದರು
ಉಳಿದಂತೆ ವಿರೋಧಪಕ್ಷಗಳ ಪ್ರಮುಖ ನಾಯಕರನ್ನು ತನ್ನೊಟ್ಟಿಗೆ ಕರೆದೊಯ್ಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಶರದ್ ಪವಾರ್, ಚಂದ್ರಬಾಬು ನಾಯ್ಡು, ತೇಜಸ್ವಿ ಯಾದವ್, ಎಂಕೆ ಸ್ಟಾಲಿನ್, ಫಾರೂಕ್ ಅಬ್ದುಲ್ಲಾ, ಕನಿಮೊಳಿ, ಪ್ರಫುಲ್ ಪಟೇಲ್, ಶರದ್ ಯಾದವ್, ಜೈಪುರದಿಂದ ಭೋಪಾಲ್, ಭೋಪಾಲದಿಂದ ರಾಯಪುರಕ್ಕೆ ತೆರಳಿದ ಮಹಾಘಟಬಂಧನದ ಪ್ರಯಾಣದಲ್ಲಿ ಜೊತೆಗಿದ್ದರು. ಬಸ್ನಲ್ಲಿ ತೆರಳುವಾಗ ತೆಗೆದ ಚಿತ್ರಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಯುವ ನಾಯಕರಾದ ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ, ಇಬ್ಬರೂ ಕ್ರಮವಾರಿ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಮುಖ್ಯಮಂತ್ರಿ ಗಾದಿಗೆ ಏರುವ ಅರ್ಹತೆ ಪಡೆದುಕೊಂಡಿದ್ದರೂ ಅವಕಾಶ ವಂಚಿತರಾದ ಯುವ ಮುಖಂಡರು. ಈ ಇಬ್ಬರೂ ಒಟ್ಟಿಗೇ ಕುಳಿತು ಪ್ರಯಾಣಿಸಿದರು.
'ಸಂತೋಷ ತುಂಬಿಕೊಂಡಿದೆ'
ಒಟ್ಟಿಗೆ ಸೇರಿಕೊಂಡ ಮುಖಂಡರು, ತಮ್ಮ ತಮ್ಮ ಕ್ಷೇತ್ರಗಳತ್ತ ಪ್ರಯಾಣಿಸುವವರೆಗೂ ಜೊತೆಯಲ್ಲೇ ಇದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಶೋಕ್ ಗೆಹ್ಲೋಟ್ ಭೋಪಾಲ್ನಲ್ಲಿ ಕಾಣಿಸಿಕೊಂಡರು. ಮಧ್ಯಪ್ರದೇಶದ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ, ರಾಜಸ್ಥಾನದಲ್ಲಿ ತಮ್ಮ ಸಂಬಂಧಿ ಬಿಜೆಪಿಯ ನಿರ್ಗಮಿತ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಂದ ಅಪ್ಪುಗೆ ಪಡೆದರು.
ಬಸ್ನಲ್ಲಿ ಎಲ್ಲರೂ ಪ್ರಯಾಣಿಸುವ ಚಿತ್ರ ಹಾಕಿಕೊಂಡಿದ್ದ ರಾಹುಲ್ ಗಾಂಧಿ, 'ಬಸ್ನಲ್ಲಿ ಎಲ್ಲೆಡೆ ಸಂತೋಷ ತುಂಬಿಕೊಂಡಿದೆ' ಎಂದು ಬರೆದಿದ್ದರು.