ಲೋಕಸಭೆ ಚುನಾವಣೆಗೆ ವಿಶೇಷ ಸಮಿತಿ ರಚಿಸಿದ ರಾಹುಲ್ ಗಾಂಧಿ
ನವದೆಹಲಿ, ಸೆಪ್ಟೆಂಬರ್ 15 : ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರು ಹಲವಾರು ಸಮಿತಿಗಳನ್ನು ವಿಶೇಷವಾಗಿ ರಚಿಸಿದ್ದು, ಅದಕ್ಕೆ ಪಿ ಚಿದಂಬರಂ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಅಧ್ಯಕ್ಷರನ್ನಾಗಿ ಮತ್ತು ಸಂಚಾಲಕರನ್ನಾಗಿ ನೇಮಕ ಮಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಬಿಕ್ಕಟ್ಟು: ರಾಹುಲ್ ಗಾಂಧಿಗೆ ವರದಿ ಸಾಧ್ಯತೆ
ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಚುನಾವಣೆ ಪ್ರಣಾಳಿಕೆ ಸಮಿತಿಗೆ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ ಅವರನ್ನು ಸಂಚಾಲಕನನ್ನಾಗಿ ನೇಮಿಸಿದ್ದಾರೆ. ಸಹಕಾರ ಸಮಿತಿಗೆ ಎಕೆ ಆಂಟನಿ ಅಧ್ಯಕ್ಷರಾದರೆ, ಜೈರಾಮ್ ರಮೇಶ್ ಸಂಚಾಲಕ. ಪ್ರಚಾರ ಸಮಿತಿಗೆ ಆನಂದ್ ಶರ್ಮಾ ಮತ್ತು ಪವನ್ ಖೇರಾ ಅವರು ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.
ಲೋಕಸಭೆ ಚುನಾವಣೆ 2019: ಕಾಂಗ್ರೆಸ್ಗೆ ಚಂದ್ರಬಾಬು ನಾಯ್ಡು ಬಲ?
ಹಲವು ನುರಿತ ರಾಜನೀತಿಜ್ಞರನ್ನು ಒಳಗೊಂಡಿರುವ ಈ ಸಮಿತಿಗಳು 2019ರ ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸುವುದರ ಜೊತೆಗೆ ಯೋಜನೆ, ತಂತ್ರಗಾರಿಕೆಯನ್ನು ರೂಪಿಸಲಿವೆ. ಈ ಮೂರು ಪ್ರಮುಖ ಸಮಿತಿಗಳನ್ನು ರಾಹುಲ್ ಗಾಂಧಿ ಅವರು ಆಗಸ್ಟ್ 25ರಂದು ಘೋಷಿಸಿದ್ದರು. ಈ ಸಮಿತಿಗಳಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಝಾದ್, ರಾಜದೀಪ್ ಸುರ್ಜೇವಾಲಾ ಮುಂತಾದವರೂ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.
ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ಹಿಂದೆ ಕೂಡ 2004, 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಸಂಚಾಲಕರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ರಾಜೀವ್ ಗೌಡ ಅವರು ಈಗಾಗಲೆ ಸಂಶೋಧನಾ ವಿಭಾಗದಲ್ಲಿ ತೊಡಗಿಕೊಂಡಿದ್ದು, ಆಯಾ ರಾಜ್ಯಗಳಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಯವರ ಭಾಷಣಗಳಿಗೆ ಮಾಹಿತಿ ಒದಗಿಸುತ್ತಿದ್ದಾರೆ.
ಮಂಡ್ಯದಲ್ಲಿ ರಮ್ಯಾ ಸ್ಪರ್ಧಿಸುತ್ತಾರಾ? ಇಲ್ವಾ? ಓವರ್ ಟು ರಂಜಿತಾ
ಪಿ ಚಿದಂಬರಂ ನೇತೃತ್ವದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯಲ್ಲಿಯೇ 19 ಸದಸ್ಯರಿದ್ದು, ಕುಮಾರಿ ಸೆಲ್ಜಾ, ಸಲ್ಮಾನ್ ಖುರ್ಷೀದ್, ಶಶಿ ತರೂರ್ ಮತ್ತಿತರರಿದ್ದಾರೆ. ಕಾಂಗ್ರೆಸ್ ಸ್ಟ್ರಾಟಜಿಸ್ಟ್ ಸ್ಯಾಮ್ ಪಿತ್ರೋಡ ಕೂಡ ಈ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. 2017ರ ಡಿಸೆಂಬರ್ ನಲ್ಲಿ ಗುಜರಾತ್ ನಲ್ಲಿ ನಡೆದ ವಿಧಾನಸಭೆ ಚುನಾವಣೆ ಮತ್ತು 2018ರ ಮೇನಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಯಾಮ್ ಪಿತ್ರೋಡಾ ಅವರು ತಂತ್ರಗಾರಿಕೆ ರೂಪಿಸಿದ್ದರು.
ಅಚ್ಚರಿಯ ಸಂಗತಿಯೆಂದರೆ, ಸ್ವತಃ ರಾಹುಲ್ ಗಾಂಧಿ ಅವರು ಈ ಯಾವ ಸಮಿತಿಯಲ್ಲಿಯೂ ಸದಸ್ಯರಾಗಿಲ್ಲ. ಬದಲಾಗಿ ಅವರು ಎಲ್ಲ ಸಮಿತಿಗಳ ಸಭೆಗಳಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ, ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವದ್ರಾ ಅವರು ಕೂಡ ಪರೋಕ್ಷವಾಗಿ ಈ ಸಮಿತಿಗಳಲ್ಲಿ ತಮ್ಮ ರಾಜಕೀಯ ಅನುಭವವನ್ನು ಧಾರೆ ಎರೆಯಲಿದ್ದಾರೆ.