ಬಿಜೆಪಿ ವಿರುದ್ಧ ಸಿಡಿದು ನಿಂತ ಮಮತಾಗೆ ರಾಹುಲ್ ಗಾಂಧಿ ಪತ್ರ ಬೆಂಬಲ
ನವದೆಹಲಿ, ಜನವರಿ 18: ವಿರೋಧ ಪಕ್ಷಗಳನ್ನೆಲ್ಲಾ ಒಟ್ಟು ಸೇರಿಸಿ ಭಾರಿ ಸಮಾವೇಶದ ಮೂಲಕ ಬಿಜೆಪಿ ವಿರುದ್ಧ ರಣಕಹಳೆ ಊದಲು ಸಿದ್ದವಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರಿಗೆ ಬಹಿರಂಗ ಪತ್ರ ಬರೆದಿರುವ ರಾಹುಲ್ ಗಾಂಧಿ ಅವರು, ಬಿಜೆಪಿ ವಿರುದ್ಧ, ಅದರ ಕೋಮುವಾದದ ವಿರುದ್ಧ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ರಾಹುಲ್ ಹೇಳಿದ್ದಾರೆ.
ದೇಶದಾದ್ಯಂತ ಬಿಜೆಪಿಯ ಕೋಮುವಾದಿ ಧೋರಣೆಯ ಬಗ್ಗೆ ಕೋಟ್ಯಂತರ ಜನರಿಗೆ ಅಸಮಾಧಾನವಿದೆ. ಮೋದಿ ಅವರ ಆಡಳಿತದ ಬಗ್ಗೆ ರೋಸಿ ಹೋಗಿದ್ದಾರೆ. ಅವರಿಗೆ ವಿರೋಧ ಪಕ್ಷಗಳ ಒಗ್ಗೂಡುವಿಕೆ ಹೊಸ ಆಶಾಕಿರಣ ನೀಡಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಕೊಲ್ಕತ್ತದ ಜನರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ, ನಮ್ಮ ಚಿಂತನೆಗೆ ಅವರು ಅಭೂತಪೂರ್ವ ಬೆಂಬಲ ಸೂಚಿಸುತ್ತಿದ್ದಾರೆ ಎಂದರು. ಮಮತಾ ದೀದಿ ಅವರಿಗೆ ಈ ನಿಟ್ಟಿನಲ್ಲಿ ನಾನು ಬೆಂಬಲ ಸೂಚಿಸುತ್ತಿದ್ದು, ಅವರು ಗಟ್ಟಿಯಾದ ಸಂದೇಶವನ್ನು ನೀಡಲಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳನ್ನು ಒಟ್ಟು ಸೇರಿಸಿ ಭಾರಿ ಸಮಾವೇಶವನ್ನು ನಾಳೆ ಕೊಲ್ಕತ್ತದಲ್ಲಿ ಆಯೋಜಿಸಿದ್ದಾರೆ. ಎಸ್ಪಿ ಮುಖಂಡ ಅಖಿಲೇಶ್ ಯಾದವ್, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಆರ್ಜೆಡಿ ಮುಖಂಡ ತೇಜಸ್ವಿ ಯಾದವ್, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್, ಎನ್ಸಿಪಿ ಮುಖಂಡ ಶರದ್ ಪವಾರ್, ರಾಜ್ಯದಿಂದ ದೇವೇಗೌಡ, ಕುಮಾರಸ್ವಾಮಿ ಅವರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ.
ಇದರ ಹೊರತಾಗಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ, ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ, ಪಾಟೀದಾರ್ ಮುಖಂಡ ಹಾರ್ದಿಕ್ ಪಟೇಲ್, ದಲಿತ ಮುಖಂಡ ಜಿಗ್ನೇಶ್ ಮೆವಾನಿ, ಜಾರ್ಖಂಡ್ ವಿಕಾಸ ಮೋರ್ಚಾದ ಬಾಬುಲಾಲ್ ಮರಾಂಡಿ ಅವರು ಸಹ ಸಮಾವೇಶದಲ್ಲಿ ಇರಲಿದ್ದಾರೆ.