ಇದಕ್ಕೆಲ್ಲಾ ನೀವೇ ಹೊಣೆ; ಕೇಂದ್ರವನ್ನು ದೂರಿದ ರಾಹುಲ್ ಗಾಂಧಿ
ನವದೆಹಲಿ, ಏಪ್ರಿಲ್ 23: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಜೊತೆಗೆ ಆಮ್ಲಜನಕ ಮತ್ತು ಐಸಿಯು ಹಾಸಿಗೆಗಳ ಕೊರತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದು, ಕೇಂದ್ರವೇ ಈ ಸಾವುಗಳ ಹೊಣೆಯನ್ನು ಹೊರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
Corona can cause a fall in oxygen level but it’s #OxygenShortage & lack of ICU beds which is causing many deaths.
— Rahul Gandhi (@RahulGandhi) April 23, 2021
GOI, this is on you.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾದಿಂದಾಗಿ ಮನುಷ್ಯನ ದೇಹದಲ್ಲಿ ಆಮ್ಲಜನಕ ಕೊರತೆ ಉಂಟಾಗಬಹುದು. ಆದರೆ ಆಮ್ಲಜನಕ ಪೂರೈಕೆ ಹಾಗೂ ಐಸಿಯು ಹಾಸಿಗೆ ಕೊರತೆಗೆ ಸರ್ಕಾರವೇ ಕಾರಣ. ಈ ಕಾರಣದಿಂದಲೇ ಹಲವು ಸಾವುಗಳು ಸಂಭವಿಸುತ್ತಿವೆ" ಎಂದು ದೂರಿದರು.
ಪ್ರಯೋಜನವಿಲ್ಲದ ಭಾಷಣ ಬಿಟ್ಟು, ಕೊರೊನಾಗೆ ಪರಿಹಾರ ನೀಡಿ: ರಾಹುಲ್
ಭಾರತದಲ್ಲಿ ಶುಕ್ರವಾರ 3,32,730 ಹೊಸ ಪ್ರಕರಣಗಳು ಪತ್ತೆಯಾಗಿವೆ. 2263 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ರಾಹುಲ್ ಗಾಂಧಿ, ಕೊರೊನಾ ನಿರ್ವಹಣೆ ಕುರಿತು ಕೇಂದ್ರ ಸರ್ಕಾರ ಸಮರ್ಪಕ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ತೀವ್ರವಾಗಿ ಕಾಡುತ್ತಿದೆ. ಇಂದು ಬೆಳಿಗ್ಗೆ ಶ್ರೀಗಂಗಾ ರಾಮ್ ಆಸ್ಪತ್ರೆಯಲ್ಲಿ 25 ರೋಗಿಗಳು ಸಾವನ್ನಪ್ಪಿದ್ದಾರೆ. ಆಮ್ಲಜನಕ ಕೊರತೆ ತೀವ್ರವಾಗಿ ಕಾಡುತ್ತಿದ್ದು, 60 ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿರುವುದಾಗಿ ಆಸ್ಪತ್ರೆ ತಿಳಿಸಿತ್ತು.