ಎರಡೇ ಸೀಟು ಗೆದ್ದು ಸರ್ಕಾರ ರಚಿಸಲು ಹೊರಟ ಬಿಜೆಪಿ: ರಾಹುಲ್ ತಪರಾಕಿ!
ನವದೆಹಲಿ, ಮಾರ್ಚ್ 06: ಮೇಘಾಲಯದಲ್ಲೂ ಬಿಜೆಪಿ ಸರ್ಕಾರಾನಾ..? OMG! ಹೇಗೆ ಸಾಧ್ಯ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡವರೂ ನಂಬಲೇಬೇಕು! ಬಿಜೆಪಿಯು ಮೇಘಾಲಯ ಪ್ರಾದೇಶಿಕ ಪಕ್ಷವಾದ ನ್ಯಾಶ್ನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ)ಯೊಂದಿಗೆ ಸೇರಿ ಇಲ್ಲಿ ಸರ್ಕಾರ ರಚಿಸಲು ಮುಂದಾಗಿದೆ.
ಬಿಜೆಪಿಯ ಈ ನಡೆಯನ್ನು 'ಅಧಿಕಾರದ ದುರಾಸೆ' ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಟೀಕಿಸುತ್ತಿವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸಹ ಈ ಕುರಿತು ಟ್ವೀಟ್ ಮೂಲಕ ಮಾತನಾಡಿದ್ದಾರೆ. ಎರಡೇ ಸೀಟು ಗೆದ್ದು, ಸರ್ಕಾರ ರಚಿಸಲು ಹೊರಟ ಬಿಜೆಪಿ ಜನತಾ ತೀರ್ಪನ್ನು ದಿಕ್ಕರಿಸುತ್ತಿದೆ ಎಂದು ಅವರು ಖಾರವಾಗಿ ಟ್ವೀಟ್ ಮಾಡಿದ್ದಾರೆ!
ಮೇಘಾಲಯದಲ್ಲಿ ಬಿಜೆಪಿಯೇ ಪ್ರಮುಖ ಪಕ್ಷವಾಗಿ ಸರ್ಕಾರ ರಚಿಸದಿದ್ದರೂ, ಮೇಘಾಲಯದಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸುವ ಪ್ರಯತ್ನಕ್ಕೆ ಈ ಮೂಲಕ ನಾಂದಿ ಹಾಡುತ್ತಿದೆ.
ಈಶಾನ್ಯ ಸೋಲಿನ ಕುರಿತು ಕೊನೆಗೂ ಪ್ರತಿಕ್ರಿಯೆ ನೀಡಿದ ರಾಹುಲ್
ಹಾಗೆ ಹೇಳೋಕೆ ಹೋದರೆ ಮೇಘಾಲಯದಲ್ಲಿ ಹೆಚ್ಚಿನ ಸೀಟು ಗೆದ್ದಿದ್ದು ಕಾಂಗ್ರೆಸ್! ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಚೆಲ್ಲಿತ್ತು. ಪ್ರಾದೇಶಿಕ ಪಕ್ಷಗಳಾದ ಯುಡಿಪಿ(ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿ) 6 ಮತ್ತು ಎನ್ ಪಿಪಿ 19 ಸ್ಥಾನ, ಇತರರು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.
|
ಬಿಜೆಪಿಗೆ ಅಧಿಕಾರದ ದುರಾಸೆ
ಕೇವಲ ಎರಡು ಕ್ಷೇತ್ರದಲ್ಲಿ ಗೆದ್ದು ಬಿಜೆಪಿ ಮೇಘಾಲಯದಲ್ಲಿ ತನ್ನ ಹುಸಿ ಸರ್ಕಾರ ರಚಿಸುತ್ತಿದೆ. ಮಣಿಪುರ ಮತ್ತು ಗೋವಾದಲ್ಲಿ ಮಾಡಿದಂತೆ ಜನತಾ ತೀರ್ಮಾನವನ್ನು ಧಿಕ್ಕರಿಸುತ್ತಿದೆ. ತಮ್ಮ ಹಣಬಲದೊಂದಿಗೆ ಅವಕಾಶವಾದಿ ಮೈತ್ರಿ ಆರಂಭಿಸಿ ಅಧಿಕಾರ ಕಬಳಿಸುತ್ತಿದೆ ಎಂದು ರಾಹುಲ್ ಗಾಂಧಿ ಬಿಜೆಪಿಗೆ ತಪರಾಕಿ ಕೊಟ್ಟಿದ್ದಾರೆ!
ಮರುಕಳಿಸಿದ ಗೋವಾ, ಮಣಿಪುರದ ಸ್ಥಿತಿ
ಕಳೆದ ವರ್ಷವೂ ಸರಿಸುಮಾರು ಇದೇ ಸಮಯದಲ್ಲಿ ಗೋವಾ ಮತ್ತು ಮಣಿಪುರದಲ್ಲೂ ಇಂಥದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣವಾಗಿದ್ದು, ಮಣಿಪುರದಲ್ಲಿ ಬಿಜೆಪಿ, ಎನ್ ಪಿಪಿ ಮೈತ್ರಿಕೂಟ ಸರ್ಕಾರ ರಚಿಸಲಿದೆ.
|
ಜನಾಭಿಪ್ರಾಯಕ್ಕೆ ರಾಹುಲ್ ಗೌರವ
ಈಟಲಿ ಪ್ರವಾಸದಲ್ಲಿದ್ದ ರಾಹುಲ್ ಗಾಂಧೀ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ನ ಕಳಪೆ ಪ್ರದರ್ಶನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ನಿನ್ನೆ ಟ್ವೀಟ್ ಮಾಡಿದ್ದ ಅವರು ಜನಾಭಿಪ್ರಾಯಕ್ಕೆ ಗೌರವ ನೀಡುವುದಾಗಿ ಹೇಳಿದ್ದರು. ಕಾಂಗ್ರೆಸ್ ಪಕ್ಷ, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಜನಾಭಿಪ್ರಾಯವನ್ನು ಗೌರವಿಸುತ್ತದೆ. ಈ ಭಾಗದಲ್ಲಿ ಮತ್ತೆ ಜನರ ವಿಶ್ವಾಸ ಗಳಿಸಲು ನಾವು ಶ್ರಮ ವಹಿಸುತ್ತೇವೆ. ಪಕ್ಷಕ್ಕಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ನನ್ನ ಪ್ರಾಮಾಣಿಕ ನಮನ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಮಿಶನ್ ಈಶಾನ್ಯ ಯಶಸ್ವಿ!
ಈಶಾನ್ಯ ರಾಜ್ಯಗಳಲ್ಲಿ ತನ್ನ ಹಿಡಿತ ಸಾಧಿಸಲು ಹಲವು ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಿರುವ ಬಿಜೆಪಿ ತ್ರಿಪುರದಲ್ಲಿನ ಅಭೂತಪೂರ್ವ ಗೆಲುವು, ನಾಗಾಲ್ಯಾಂಡ್ ನ ಅತ್ಯುತ್ತಮ ಪ್ರದರ್ಶನದಿಂದ ಹಿರಿಹಿಗ್ಗುತ್ತಿದೆ. ಮೇಘಾಲಯದಲ್ಲೂ ಸರ್ಕಾರ ರಚಿಸುವ ಎಲ್ಲಾ ಸಾಧ್ಯತೆಗಳನ್ನೂ ಬಳಸಿಕೊಂಡು ಅಲ್ಲೂ ತನ್ನ ಪಾರಮ್ಯ ಮೆರೆಯಲು ಹೊರಟಿದೆ. ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿರುವ ಬಿಜೆಪಿಗೆ ಈ ಗೆಲುವು ಸ್ಫೂರ್ತಿ ನೀಡಿದೆಯಾದರೂ, ಈ ವರ್ಷ ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಮೂರು ಪ್ರಮುಖ ರಾಜ್ಯಗಳೂ ವಿಧಾನಸಭೆ ಚುನಾವಣೆ ಎದುರಿಸಲಿವೆ. ಈ ಮೂರು ರಾಜ್ಯಗಳಲ್ಲೂ ಕಾಂಗ್ರೆಸ್ ಅಲೆ ಕೆಲಸ ಮಾಡಿದರೆ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗಿಯೇ ಬಿಡುತ್ತದೆ ಎನ್ನುವುದಕ್ಕಾಗುವುದಿಲ್ಲ.
ಈಶಾನ್ಯದ ಮೂರು ರಾಜ್ಯಗಳಲ್ಲೂ ಬಿಜೆಪಿಯದ್ದೇ ಸರ್ಕಾರ!