ನಿಮ್ಮಿಂದಲೇ ಈ ದ್ವೇಷ, ಕೋಪ: ಬಿಜೆಪಿಯನ್ನು ಕುಟುಕಿದ ರಾಹುಲ್ ಗಾಂಧಿ
ವಯನಾಡ್, ಜುಲೈ 1: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ರಾಹುಲ್ ಗಾಂಧಿ ಕೂಡ ಧ್ವನಿಗೂಡಿಸಿದ್ದಾರೆ.
ಭಾರತದಲ್ಲಿ ಇಂಥ ಸಿಟ್ಟು ಮತ್ತು ದ್ವೇಷದ ವಾತಾವರಣ ನಿರ್ಮಾಣ ಮಾಡಲು ಕೇಂದ್ರ ಸರಕಾರವೇ ಕಾರಣ ಎಂದು ಕಿಡಿಕಾರಿರುವ ರಾಹುಲ್ ಗಾಂಧಿ, ದೇಶ ಮತ್ತು ಜನರ ಹಿತಾಸಕ್ತಿಗೆ ಧಕ್ಕೆ ಬರುವ ರೀತಿಯ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ಪತ್ರಕರ್ತ ಜುಬೈರ್ ಬಂಧನ: ಬಿಜೆಪಿ ಸೇಡಿನ ರಾಜಕಾರಣ ಎಂದು ಆಕ್ರೋಶ
ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಸರ್ವೋಚ್ಚ ನ್ಯಾಯಾಲಯದ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಹೇಳಿದ್ದು ಸರಿ ಇದೆ. ಆದರೆ, ನೂಪುರ್ ಹೇಳಿಕೆಯಿಂದಲೇ ದೇಶದಲ್ಲಿ ಈ ಪರಿಸ್ಥಿತಿ ಬಂದಿಲ್ಲ. ಬದಲಾಗಿ ಇದು ಕೇಂದ್ರದ ಎನ್ಡಿಎ ಸರಕಾರ ತಂದಿಟ್ಟಿರುವ ಪರಿಸ್ಥಿತಿ ಎಂದು ಝಾಡಿಸಿದ್ಧಾರೆ.
ಯಾರೇ ಈ ಕೆಲಸ ಮಾಡಿರಲಿ, ಇದು ದೇಶಕ್ಕೆ ಧಕ್ಕೆ ತರುವ ಕೆಲಸವಾಗಿದೆ, ದೇಶಕ್ಕೆ ದ್ರೋಹ ಬಗೆದಂತೆ ಆಗುತ್ತದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರೂ ಅದ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ, ಆರೆಸ್ಸೆಸ್, ಪಿಎಂ, ಎಚ್ಎಂ ಕಾರಣ
"ಕೋಪದ ಮತ್ತು ದ್ವೇಷದ ವಾತಾವರಣ ಈ ದೇಶದಲ್ಲಿ ಇದೆ. ಈ ವಾತಾವರಣ ನಿರ್ಮಾಣ ಮಾಡಿದ್ದು ಈ ದೇಶದ ಪ್ರಧಾನಿ, ಗೃಹ ಮಂತ್ರಿ, ಬಿಜೆಪಿ ಮತ್ತು ಆರ್ಎಸ್ಎಸ್. ನೇರವಾಗಿ ಹೇಳಬೇಕೆಂದರೆ ಈ ವಾತಾವರಣ ನಿರ್ಮಿಸಿರುವುದು ದೇಶ ದ್ರೋಹದ ಕೃತ್ಯವಾಗಿದೆ. ಇಂಥದ್ದೊಂದು ವಾತಾವರಣವು ದೊಡ್ಡ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ," ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಕಚೇರಿ ಧ್ವಂಸ ಹಿನ್ನೆಲೆ: 19 ಜನರ ಬಂಧನ
ಕಾಂಗ್ರೆಸ್ ಒಗ್ಗೂಡಿಸುತ್ತೆ, ಬಿಜೆಪಿ ವಿಭಜಿಸುತ್ತದೆ
"ಕಾಂಗ್ರೆಸ್ ಪಕ್ಷ ವಿವಿಧ ಸಮುದಾಯಗಳ ನಡುವೆ ಬಾಂಧವ್ಯ ಬೆಳೆಸುತ್ತದೆ. ಆದರೆ, ಬಿಜೆಪಿ ಮತ್ತು ಆರ್ಎಸ್ಎಸ್ ಜನರ ಮಧ್ಯೆ ವಿಭಜನೆ ಸೃಷ್ಟಿಸುತ್ತದೆ" ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಕೇರಳದಲ್ಲಿ ತಾವು ಪ್ರತಿನಿಧಿಸುವ ವಯ್ನಾಡ್ ಕ್ಷೇತ್ರದ ಕಳಪೆಟ್ಟಾ ಬಳಿ ಎಸ್ಎಫ್ಐ ಕಾರ್ಯಕರ್ತರಿಂದ ಧ್ವಂಸಗೊಂಡಿದ್ದ ಕಾಂಗ್ರೆಸ್ ಕಚೇರಿಗೆ ಭೇಟಿ ಇತ್ತ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ನೂಪುರ್ ಶರ್ಮಾ ವಿವಾದವೇನು?
ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಇತ್ತೀಚೆಗೆ ಟಿವಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಅರಬ್ ದೇಶಗಳು ಆಕ್ಷೇಪ ವ್ಯಕ್ತಪಡಿಸಿದವು. ಬಿಜೆಪಿ ಪಕ್ಷ ತ್ವರಿತವಾಗಿ ಸ್ಪಂದಿಸಿ ನೂಪುರ್ ಶರ್ಮಾ ಅವರನ್ನು ವಜಾಗೊಳಿಸಿತು.
ದರ್ಜಿಯ ಕತ್ತು ಸೀಳಿದ ಮುಸ್ಲಿಮರು
ಇನ್ನೊಂದೆಡೆ ನೂಪುರ್ ಶರ್ಮಾ ಅವರನ್ನು ಸಮರ್ಥಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ರಾಜಸ್ಥಾನದ ದರ್ಜಿಯೊಬ್ಬನನ್ನು ಇಬ್ಬರು ಮುಸ್ಲಿಮರು ಕತ್ತು ಸೀಳಿ ಕೊಂದು ಹಾಕಿದ್ದಾರೆ. ಅಷ್ಟೇ ಅಲ್ಲ, ಘಟನೆಯ ವಿಡಿಯೋ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಗೂ ಎಚ್ಚರಿಕೆ ನೀಡಿದ್ಧಾರೆ. ಈ ದುರುಳರು ಇಸ್ಲಾಮಿಕ್ ಸ್ಟೇಟ್ ಉಗ್ರರ ಶೈಲಿಯಲ್ಲಿ ಹತ್ಯೆ ಮಾಡಿದ್ದರು. ಬಹುತೇಕ ಮುಸ್ಲಿಮ್ ಸಂಘಟನೆಗಳು ಮತ್ತು ಮುಖಂಡರು ಈ ಕೃತ್ಯವನ್ನು ಖಂಡಿಸಿದ್ದಾರಾದರೂ ಭಾರತದಲ್ಲಿ ಐಸಿಸ್ ಮಾದರಿಯ ಭಯೋತ್ಪಾದನೆ ಅಡಿ ಇಟ್ಟಿರುವುದಕ್ಕೆ ಇದು ಒಂದು ಸುಳಿವಾಗಿದೆ ಎನ್ನಬಹುದು.
ಸುಪ್ರೀಂ ಕೋರ್ಟ್ ತರಾಟೆ
ದೇಶದಲ್ಲಿ ಇಂಥ ಪರಿಸ್ಥಿತಿ ಉದ್ಭವಿಸಲು ನೂಪುರ್ ಶರ್ಮಾ ಅವರ ಎಲುಬಿಲ್ಲದ ನಾಲಗೆ ಕಾರಣ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇಡೀ ದೇಶಕ್ಕೆ ಬೆಂಕಿ ಹಚ್ಚಿದ ಈಕೆ ದೇಶದ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದೆ.
ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ಒಟ್ಟುಗೂಡಿಸಿ ವಿಚಾರಣೆ ಮಾಡಬೇಕು. ತನಗೆ ಜೀವ ಬೆದರಿಕೆ ಇದೆ ಎಂದು ನೂಪುರ್ ಶರ್ಮಾ ಮನವಿ ಮಾಡಿಕೊಂಡಿದ್ದಕ್ಕೆ ನ್ಯಾಯಾಲಯ ವ್ಯಂಗ್ಯ ಮಾಡಿದೆ. "ನೂಪುರ್ ಶರ್ಮಾ ತನಗೆ ಪ್ರಾಣ ಬೆದರಿಕೆ ಇದೆ ಎನ್ನುತ್ತಾರೆ. ಆದರೆ, ಅವರೇ ಈ ದೇಶಕ್ಕೆ ಬೆದರಿಕೆಯಾಗಿದ್ದಾರೆ" ಎಂದು ಕೋರ್ಟ್ ಹೇಳಿದೆ.
(ಒನ್ಇಂಡಿಯಾ ಸುದ್ದಿ)