ಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿ
ಉಜ್ಜೈನ್ (ಮಧ್ಯ ಪ್ರದೇಶ), ಅಕ್ಟೋಬರ್ 29 : "ರಫೇಲ್ ಡೀಲ್ ಬಗ್ಗೆ ಸಿಬಿಐ ನಿರ್ದೇಶಕರು ತನಿಖೆ ಮಾಡಲು ಹೊರಟಿದ್ದರು. ಮಾಡಿದ್ದರೆ ದೂಧ್ ಕಾ ದೂಧ್, ಪಾನಿ ಕಾ ಪಾನಿ (ಲೆಕ್ಕ ಚುಕ್ತಾ) ಆಗುತ್ತಿತ್ತು. ಅದಾಗಿದ್ದರೆ, ಚೌಕಿದಾರ್ ಚೋರ್ ಇದ್ದಾರೆ ಎಂದು ಇಡೀ ದೇಶಕ್ಕೆ ಗೊತ್ತಾಗುತ್ತಿತ್ತು ಎಂದು ಚೌಕಿದಾರರು ರಾತ್ರೋರಾತ್ರಿ 2 ಗಂಟೆಗೆ ಅವರನ್ನು ಕಿತ್ತು ಹಾಕಿದರು."
ರಫೇಲ್ ಡೀಲ್ ಹಿಡಿದುಕೊಂಡು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಉಜ್ಜೈನ್ ನಲ್ಲಿ ಮಹಾಕಾಳೇಶ್ವರನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಅವರು ಸೋಮವಾರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಉಗ್ರ ಭಾಷಣ ಮಾಡಿದರು.
ರಫೇಲ್ ವಿವಾದ: ಅರ್ಜಿ ವಿಚಾರಣೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್
ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟುವಾದ ಮಾತುಗಳಿಂದ ಟೀಕಿಸುತ್ತಲೇ ಇದ್ದ ರಾಹುಲ್ ಗಾಂಧಿ ಅವರು, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿ ಬಂದರೆ ಕೇವಲ ಹತ್ತೇ ದಿನಗಳಲ್ಲಿ ಎಲ್ಲ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ.
ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ
"ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ರಾಜ್ಯದ ಎಲ್ಲ ರೈತರ ಸಾಲವನ್ನು ಮನ್ನಾ ಮಾಡಲಿದ್ದಾರೆ. ಆ ಮುಖ್ಯಮಂತ್ರಿ ಏನೇನೋ ನೆವ ಹೇಳಿ ಸಾಲ ಮನ್ನಾ ಮಾಡದಿದ್ದರೆ ಮತ್ತೊಬ್ಬ ಮುಖ್ಯಮಂತ್ರಿ ಸಾಲ ಮನ್ನಾ ಮಾಡಲಿದ್ದಾರೆ" ಎಂದು ಬಿರುಬಿಸಿಲಿನಲ್ಲಿ ಅವರ ಮಾತು ಕೇಳುತ್ತ ಕುಳಿತಿದ್ದ ಜನರ ಮೇಲೆ ಭರವಸೆಗಳು ಸುರಿಮಳೆಗರೆದರು.
ನಂತರ ಒಂದು ಬಾಟಲಿ ನೀರನ್ನು ತೋರಿಸುತ್ತ, ಶಿಪ್ರಾ ನದಿಯನ್ನು ಸ್ವಚ್ಛಗೊಳಿಸಲು ರಾಜ್ಯ ಸರಕಾರ 400 ಕೋಟಿ ರುಪಾಯಿ ವ್ಯಯಿಸಿದೆ. ನೋಡಿರಿಲ್ಲಿ ನೀರಿನ ಗುಣಮಟ್ಟ ಹೇಗೆದೆ? ಇದನ್ನು ಯಾವುದಾದರೂ ಮಂತ್ರಿ ಕುಡಿದರೆ, ನಿಂತಲ್ಲಿಯೇ ಮೂರ್ಛೆ ಹೋಗುತ್ತಾನೆ ಎಂದು ಕಲುಷಿತವಾದ ಬಾಟಲಿ ನೀರನ್ನು ತೋರಿಸುತ್ತ ರಾಜ್ಯ ಸರಕಾರವನ್ನು ಲೇವಡಿ ಮಾಡಿದರು.
ಭಯೋತ್ಪಾದಕರಿಗೆ ಬಾಗಿಲನ್ನು ತೆರೆದಿಟ್ಟರು...
ಪ್ರಧಾನಿಯವರು ದೇಶವನ್ನು ಕಾಯುತ್ತಿರುವ ಸೈನಿಕರಿಗಾಗಿ ಏನು ಮಾಡಿದ್ದಾರೆ? ಪಂಚಾಯತ್ ರಾಜ್ ಅನ್ನು ಮುಗಿಸಿಬಿಟ್ಟರು, ಜಮ್ಮು ಮತ್ತು ಕಾಶ್ಮೀರವನ್ನು ದಹಿಸಿಬಿಟ್ಟರು, ಭಯೋತ್ಪಾದಕರಿಗೆ ಬಾಗಿಲನ್ನು ತೆರೆದಿಟ್ಟರು... ಹೀಗಿತ್ತು ರಾಹುಲ್ ಗಾಂಧಿ ಅವರ ಮಾತಿನ ವೈಖರಿ. ಮುಂದುವರಿಸುತ್ತ, ನನಗೆ ಯಾರೋ ಹೇಳಿದರು, ಕುಂಭ ಮೇಳದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ, ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು. ಆದರೆ, ರಾತ್ರೋರಾತ್ರಿ 2 ಗಂಟೆಗೆ ಸಿಬಿಐ ನಿರ್ದೇಶಕರನ್ನೇ ಮನೆಗೆ ಕಳುಹಿಸುತ್ತಾರೆಂದರೆ, ಇಂಥ ಪ್ರಕರಣಗಳಲ್ಲಿ ತನಿಖೆಯಾದರೂ ಹೇಗೆ ನಡೆಯುತ್ತದೆ ಎಂದು ರಾಹಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಮೋದಿಗೆ ಸಂಚಕಾರ ತರಲಿದ್ದ ಕೇಸುಗಳ ತನಿಖೆ ಮಾಡುತ್ತಿದ್ದ ಅಲೋಕ್ ವರ್ಮಾ
ಅಜ್ಜಿ ಅಮ್ಮ ಸಾಗಿದ ದಾರಿಯಲ್ಲಿ ಮಗ ರಾಹುಲ್
ಅಜ್ಜಿ ಇಂದಿರಾ ಮತ್ತು ತಾಯಿ ಸೋನಿಯಾ ಹಾಕಿಕೊಟ್ಟ ದಾರಿಯಲ್ಲಿಯೇ ರಾಹುಲ್ ಅವರು ಕೂಡ ಸಾಗುತ್ತಿದ್ದಾರೆ. 1979ರಲ್ಲಿ ಇಂದಿರಾ ಗಾಂಧಿ ಅವರು, ದೇಶದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು. ನಂತರ ಕೆಲವೇ ತಿಂಗಳಲ್ಲಿ ಅಧಿಕಾರ ಮರಳಿ ಪಡೆದಿದ್ದರು. ಅದೇ ರೀತಿ, ಸೋನಿಯಾ ಗಾಂಧಿ ಅವರು ಕೂಡ ಮಹಾಕಾಳೇಶ್ವರನಿಗೆ 2008ರಲ್ಲಿ ಪೂಜೆ ಸಲ್ಲಿಸಿದ್ದರು. ಆಗ, ಆ ಮಧ್ಯಪ್ರದೇಶದಲ್ಲಿ ಗೆಲುವು ಸಾಧಿಸದಿದ್ದರೂ ಕೇಂದ್ರದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದ್ದರು. ಅದೇ ರೀತಿ ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳು ಇರುವಾಗ ರಾಹುಲ್ ಗಾಂಧಿ ಅವರು ಇದೇ ಉಜ್ಜೈನ್ ನಲ್ಲಿರುವ ಮಹಾಕಾಳೇಶ್ವರನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಇದರ ಪ್ರಭಾವ ಲೋಕಸಭೆ ಚುನಾವಣೆಯ ಮೇಲೆ ಆಗುವುದಾ? ಮಹಾಕಾಳೇಶ್ವರನೇ 2019ರಲ್ಲಿ ಉತ್ತರ ನೀಡಲಿದ್ದಾನೆ.
ರಾಹುಲ್ ಅವರ ಗೋತ್ರ ಯಾವುದು?
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಹಿಂದೂತ್ವದ ಮೇಲೆ ಭಾರೀ ದಾಳಿ ಮಾಡಿರುವ ಬಿಜೆಪಿ, ರಾಹುಲ್ ಅವರು ಹಿಂದುವೇ (ಬ್ರಾಹ್ಮಣನೇ) ಆಗಿದ್ದರೆ ಅವರ ಗೋತ್ರ ಯಾವುದು, ಅವರು ಯಾವ ರೀತಿ ಜನಿವಾರ ಧರಿಸುತ್ತಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಅಣಕವಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಮತ್ತು ದೇಶದಲ್ಲಿ ಮತ್ತೆ ಅಧಿಕಾರ ಮರುಗಳಿಸುವ ನಿಟ್ಟಿನಲ್ಲಿ ಭರ್ಜರಿ ಪ್ರಚಾರ ಮಾಡುವುದರೊಂದಿಗೆ, ಮೋದಿಯವರ ವಿರುದ್ಧ ವಾಗ್ದಾಳಿ ಮಾಡುವುದರೊಂದಿಗೆ, ಟೆಂಪಲ್ ರನ್ ಕೂಡ ಭರ್ಜರಿಯಾಗಿಯೇ ಮಾಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಹಲವು ಸುತ್ತಿನ ಭೇಟಿ ನೀಡಿರುವ ರಾಹುಲ್ ಅವರು ಹೋದಲ್ಲೆಲ್ಲ ಒಂದಿಲ್ಲೊಂದು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.
'ರಾಹುಲ್ ಗಾಂಧಿ ಗೋತ್ರ ಯಾವುದು? ಅವರು ತೊಡುವ ಜನಿವಾರ ಯಾವುದು?'
ನವೆಂಬರ್ 28ರಂದು ಚುನಾವಣೆ, ಡಿ.11 ಫಲಿತಾಂಶ
ಮಧ್ಯ ಪ್ರದೇಶದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನು ಸರಿಯಾಗಿ 30 ದಿನಗಳ ನಂತರ ನವೆಂಬರ್ 28ರಂದು, ಬುಧವಾರ ಒಂದೇ ಹಂತದಲ್ಲಿ 230 ಸ್ಥಾನಗಳಿರುವ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. 2013ರಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಮತ್ತೆ ಅಧಿಕಾರ ಮರಳಿ ಪಡೆಯುವ ಹವಣಿಕೆಯಲ್ಲಿದೆ. ಬಹುಮತ ಗಳಿಸಲು ಬೇಕಿರುವುದು 116 ಸ್ಥಾನಗಳು. ಕಳೆದೆರಡು ಅವಧಿಗಳಿಂದ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೆಳಗಿಳಿಸಿ ಅಧಿಕಾರ ಗದ್ದುಗೆಯೇರುವ ಹುನ್ನಾರದಲ್ಲಿದೆ ಕಾಂಗ್ರೆಸ್. ಆದರೆ, ಒಂದು ವೇಳೆ ಗೆದ್ದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಿಲ್ಲ. ಉಳಿದ ನಾಲ್ಕು ರಾಜ್ಯಗಳು ಸೇರಿದಂತೆ ಮಧ್ಯ ಪ್ರದೇಶದ ಚುನಾವಣೆಯ ಫಲಿತಾಂಶ ಡಿಸೆಂಬರ್ 11ರಂದು ದೊರೆಯಲಿದೆ.