ಈ ಸರ್ಕಾರದ್ದು 'ನಾವಿಬ್ಬರು, ನಮಗಿಬ್ಬರು ನೀತಿ': ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ, ಫೆಬ್ರವರಿ 11: ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶವನ್ನು 'ನಾವಿಬ್ಬರು ನಮಗಿಬ್ಬರು' ನೀತಿಯಡಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ನಲ್ಲಿ ಗುರುವಾರ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.
'ಹಮ್ ದೋ ಹಮಾರೆ ದೋ' ನೀತಿಯು ಅಪನಗದೀಕರಣ, ಸರಕು ಮತ್ತು ಸೇವೆಗಳ ತೆರಿಗೆ, ಲಾಕ್ಡೌನ್ ಮತ್ತು ಇತ್ತೀಚಿನ ಮೂರು ಕೃಷಿ ಕಾಯ್ದೆಗಳಲ್ಲಿ ಜಾರಿಯಲ್ಲಿದೆ ಎಂದು ರಾಹುಲ್ ಟೀಕಿಸಿದರು.
''ಕುಟುಂಬ ಯೋಜನೆಗೆ ನಾವು ಬಳಸುತ್ತಿದ್ದ 'ನಾವಿಬ್ಬರು, ನಮಗಿಬ್ಬರು' ಎಂಬ ಘೋಷಣೆ ನಿಮಗೆಲ್ಲರಿಗೂ ನೆನಪಿರಬೇಕು. ಆ ಘೋಷಣೆಗೆ ಈ ಸರ್ಕಾರ ಹೊಸ ಅರ್ಥ ನೀಡುತ್ತಿದೆ. ಈ ಸರ್ಕಾರವು ನಾಲ್ಕು ಜನರಿಂದ ನಡೆಯುತ್ತಿದೆ. 'ನಾವಿಬ್ಬರು. ನಮಗಿಬ್ಬರು''' ಎಂದು ಲೇವಡಿ ಮಾಡಿದರು.
ಆದರೆ ರಾಹುಲ್ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ಬದಲಾಗಿ ಪ್ರತಿಯೊಬ್ಬರಿಗೂ ಅವರು ಗೊತ್ತು ಎಂದರು. ರೈತರ ಪ್ರತಿಭಟನೆ ಕಾಣಿಸುವ ರೀತಿಯಂತೆ ಇಲ್ಲ. ಇದು ಅನೇಕರಿಗೆ ಉಳಿವಿನ ಹೋರಾಟ ಕೂಡ. ಇದು ರೈತರ ಪ್ರತಿಭಟನೆ ಎಂದಷ್ಟೇ ನೀವು ಭಾವಿಸುತ್ತಿದ್ದೀರಿ. ಆದರೆ ಅದು ತಪ್ಪು. ಇದು ಭಾರತದ ಪ್ರತಿಭಟನೆ. ರೈತರು ಅದನ್ನು ಮುನ್ನಡೆಸುತ್ತಿದ್ದಾರಷ್ಟೇ ಎಂದರು. ಮುಂದೆ ಓದಿ.
ಆರ್ಥಿಕತೆಯೇ ನಾಶವಾಗಲಿದೆ
'ಇದಕ್ಕೆ ಕೃಷಿ ಕಾಯ್ದೆಗಳು ಕಾರಣ. ಇದು ರೈತರನ್ನು ಸಂಕಷ್ಟಕ್ಕೆ ನೂಕುವುದು ಮಾತ್ರವಲ್ಲ, ಮಧ್ಯವರ್ತಿಗಳನ್ನು ಮುಗಿಸುತ್ತದೆ ಮತ್ತು ಸಣ್ಣ ಅಂಗಡಿ ಮಾಲೀಕರಿಗೆ, ಸಣ್ಣ ಉದ್ಯಮಗಳ ಪಾಲಿಗೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಶೀಲರಿಗೆ ಭಾರಿ ಹೊಡೆತ ನೀಡುತ್ತದೆ. ಇದರಿಂದ ದೇಶದ ಗ್ರಾಮೀಣ ಆರ್ಥಿಕತೆ ನಾಶವಾಗುತ್ತದೆ' ಎಂದು ಆರೋಪಿಸಿದರು.
ಗದ್ದಲ ಸೃಷ್ಟಿಸಿದ ಬಿಜೆಪಿ
ರಾಹುಲ್ ಗಾಂಧಿ ಭಾಷಣದ ಮಧ್ಯೆ ಬಿಜೆಪಿ ಸಂಸದರು ತೀವ್ರ ಗದ್ದಲ ಸೃಷ್ಟಿಸುವ ಮೂಲಕ ಅವರ ಮಾತಿಗೆ ಅಡ್ಡಿಪಡಿಸಿದರು. ಇದು ಬಜೆಟ್ ಅಧಿವೇಶನ ಬಜೆಟ್ ಕುರಿತಾದ ವಿಚಾರದ ಬಗ್ಗೆ ಚರ್ಚಿಸಿ ಎಂದು ಆಡಳಿತ ಪಕ್ಷದವರು ಆಗ್ರಹಿಸಿದರು. 'ಕೃಷಿ ಕೂಡ ಬಜೆಟ್ನ ಭಾಗ' ಎಂದು ರಾಹುಲ್ ತಿರುಗೇಟು ನೀಡಿದರು.
ಸ್ನೇಹಿತರಿಗೆ ಲಾಭ
'ಪ್ರಮುಖ ಉದ್ಯಮಿಗಳಿಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲ ಕೃಷಿ ಕಾಯ್ದೆಯ ಉದ್ದೇಶ. ಅವರಲ್ಲಿ ಒಬ್ಬ ಉದ್ಯಮಿ ಎಲ್ಲರಿಗೂ ತಿಳಿದಿರುವಂತೆ ಸರ್ಕಾರದ ಮೊದಲ ಸ್ನೇಹಿತ. ಎರಡನೆಯ ಕಾಯ್ದೆಯ ಉದ್ದೇಶವೆಂದರೆ ಕಾನೂನಿನ ಲಾಭವು ಅವರ ಎರಡನೆಯ ಸ್ನೇಹಿತನಿಗೆ ಸಿಗುವಂತೆ ಮಾಡುವುದಾಗಿದೆ' ಎಂದು ಆರೋಪಿಸಿದರು.
ಬೆನ್ನೆಲುವು ತುಂಡು ಮಾಡಿ ತಿನ್ನಿಸುತ್ತಾರೆ
'ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಅವರು ರೈತರು, ಕಾರ್ಮಿಕರು, ಸಣ್ಣ ಪುಟ್ಟ ಅಂಗಡಿ ಮಾಲೀಕರು, ಮಧ್ಯವರ್ತಿಗಳನ್ನು ಒಡೆಯುವುದರ ಮೂಲಕ ಭಾರತದ ಬೆನ್ನೆಲುಬನ್ನು ತುಂಡುಮಾಡುವುದು ಮತ್ತು ಅದರ ತುಣುಕುಗಳನ್ನು ಈ ಸ್ನೇಹಿತರಾದ ದೊಡ್ಡ ಉದ್ಯಮಿಗಳಿಗೆ ತಿನ್ನಿವುದಾಗಿದೆ' ಎಂದು ಟೀಕಿಸಿದರು.
ನಿಮ್ಮ ಸೋಲು ಖಚಿತ
'ಈ ದೇಶದ ರೈತರು ಮತ್ತು ಕಾರ್ಮಿಕರು ನಿಮ್ಮನ್ನು ನಾಶ ಮಾಡುತ್ತಾರೆ. ಅವರ ಎದುರು ನೀವು ಗೆಲ್ಲಲಾರಿರಿ. ರೈತರು ಒಂದು ಇಂಚ್ ಕೂಡ ಹಿಂದೆ ಸರಿಯಲಾರರು. ನೀವು ಈ ಕಾಯ್ದೆಗಳನ್ನು ರದ್ದುಪಡಿಸಲೇಬೇಕು. ಕೊನೆಯಲ್ಲಿ ನೀವು ಸೋಲುತ್ತೀರಿ. ಇದು ಖಚಿತ' ಎಂದು ಎಚ್ಚರಿಸಿದರು.