ಸರ್ಕಾರಕ್ಕೆ ತಿರುಗೇಟು ನೀಡಲು ಬರುವುದಿಲ್ಲ: ರಾಹುಲ್ ಗಾಂಧಿ
ನವದೆಹಲಿ, ನವೆಂಬರ್ 23: ಭೂತಾನ್ ಪ್ರದೇಶದ ಗಡಿಭಾಗದೊಳಗೆ ಹಳ್ಳಿಯನ್ನು ನಿರ್ಮಿಸುವ ಮೂಲಕ ದೋಕ್ಲಾಂನಲ್ಲಿ ಚೀನಾದಿಂದ ಭಾರತಕ್ಕೆ ಮತ್ತೆ ಅಪಾಯದ ಬೆದರಿಕೆ ಎದುರಾಗಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಚೀನಾದ ಭೂರಾಜಕೀಯ ತಂತ್ರಗಳಿಗೆ ಭಾರತದ ಸಾರ್ವಜನಿಕ ಸಂಪರ್ಕ ಚಾಲಿತ ಮಾಧ್ಯಮ ತಂತ್ರಗಳಿಂದ ಎದುರೇಟು ನೀಡಲು ಸಾಧ್ಯವಿಲ್ಲ. ಈ ಸರಳ ಸಂಗತಿಯು ಭಾರತ ಸರ್ಕಾರವನ್ನು ನಡೆಸುತ್ತಿರುವವರ ಮನಸಿನೊಳಗೆ ಇದೆಲ್ಲ ಮೂಡುವುದಿಲ್ಲ' ಎಂದು ಟೀಕಿಸಿದ್ದಾರೆ.
ಭೂತಾನ್ ಒಳಗೆ ಹಳ್ಳಿ ನಿರ್ಮಿಸಿದ ಚೀನಾ?: ಅಧಿಕಾರಿಗಳ ನಿರಾಕರಣೆ
ಭೂತಾನ್ನ ಎರಡು ಕಿಮೀ ಗಡಿಯೊಳಗೆ ಚೀನಾವು ಹಳ್ಳಿಯನ್ನು ನಿರ್ಮಿಸಿದ್ದು, ಅಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಈ ಪ್ರದೇಶವು ಈ ಹಿಂದೆ ದೋಕ್ಲಂನಲ್ಲಿ ಬಿಕ್ಕಟ್ಟು ತಲೆದೋರಿದ್ದ ಸ್ಥಳದಿಂದ ಕೇವಲ 9 ಕಿಮೀ ದೂರವಿದ್ದು, ಭಾರತಕ್ಕೆ ಅಪಾಯ ತಂದೊಡ್ಡಲಿದೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಭೂತಾನ್ ನಿರಾಕರಿಸಿತ್ತು. ಭೂತಾನ್ ಒಳಗೆ ಚೀನಾದ ಯಾವುದೇ ಹಳ್ಳಿ ಇಲ್ಲ ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿತ್ತು. ಈ ವರದಿ ಬಂದ ಕೆಲವು ದಿನಗಳ ಬಳಿಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
2017ರಲ್ಲಿ ಭಾರತ ಮತ್ತು ಚೀನಾ ನಡುವೆ 73 ದಿನಗಳ ಕಾಲ ದೋಕ್ಲಾಂ ಬಿಕ್ಕಟ್ಟು ತಲೆದೋರಿತ್ತು. ಪ್ರಸ್ತುತ ಭಾರತ-ಚೀನಾ ಪಡೆಗಳ ಪೂರ್ವ ಲಡಾಖ್ನ ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ ಮೇ ತಿಂಗಳಿನಿಂದ ಪರಸ್ಪರ ಕಾದಾಟ ನಡೆಸುತ್ತಿವೆ. ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದರೆ, ಕೆಲವೇ ಗಂಟೆಗಳಲ್ಲಿ ಚೀನಾ ಪಡೆಗಳನ್ನು ನೂರು ಕಿಮೀ ಗಡಿಯೊಳಗೆ ಓಡಿಸುತ್ತಿತ್ತು ಎಂದು ಈ ಹಿಂದೆ ರಾಹುಲ್ ಗಾಂಧಿ ಹೇಳಿದ್ದರು.