ವಲಸೆ ಕಾರ್ಮಿಕರ ಖಾತೆಗೆ ಹಣ ಹಾಕಿ: ಸರ್ಕಾರಕ್ಕೆ ರಾಹುಲ್ ಗಾಂಧಿ ಆಗ್ರಹ
ನವದೆಹಲಿ, ಏಪ್ರಿಲ್ 20: ಕೋವಿಡ್-19 ಹೆಚ್ಚಳದ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಹೇರುತ್ತಿರುವುದರಿಂದ ದೇಶದ ಅನೇಕ ಭಾಗಗಳ ವಲಸಿಗರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿ ಹೋಗುತ್ತಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಎಂದು ನೆನಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವಲಸಿಗರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಹಣ ವರ್ಗಾವಣೆ ಮಾಡಲಿದೆಯೇ ಎಂದು ಕೇಳಿದ್ದಾರೆ.
'ವಲಸೆ ಕಾರ್ಮಿಕರು ಮತ್ತೊಮ್ಮೆ ಗುಳೆ ಹೋಗುತ್ತಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಚೀನಾದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ: ರಾಹುಲ್ ಗಾಂಧಿ
ಮತ್ತೊಂದು ಟ್ವೀಟ್ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅವರು, 'ಆದರೆ ಕೊರೊನಾ ಹರಡುತ್ತಿರುವುದಕ್ಕೆ ಸಾರ್ವಜನಿಕರನ್ನು ದೂಷಿಸುತ್ತಿರುವ ಸರ್ಕಾರವೊಂದು ಅಂತಹ ಸಾರ್ವಜನಿಕ ಕಲ್ಯಾಣದ ಕ್ರಮವನ್ನು ತೆಗೆದುಕೊಳ್ಳುತ್ತದೆಯೇ?' ಎಂದು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಆರು ದಿನಗಳ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಲಾಕ್ಡೌನ್ ಹಾಗೂ ಕಠಿಣ ನಿರ್ಬಂಧಗಳು ಮುಂದುವರಿಯುವ ಸಾಧ್ಯತೆ ಇದೆ. ಇದರಿಂದ ನೂರಾರು ವಲಸಿಗರು ಸೋಮವಾರ ಸಂಜೆ ತಮ್ಮ ಊರುಗಳಿಗೆ ಮರಳಲು ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ತುಂಬಿಕೊಂಡಿದ್ದರು. ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.
ಮಹಾರಾಷ್ಟ್ರದಲ್ಲಿಯೂ ನಿರ್ಬಂಧಗಳನ್ನು ಜಾರಿಗೆ ತಂದಿರುವುದರಿಂದ ವಿವಿಧ ರಾಜ್ಯಗಳ ವಲಸಿಗರು ತಮ್ಮ ಊರುಗಳಿಗೆ ಮರಳಿ ಹೋಗುತ್ತಿದ್ದಾರೆ.