ನೀವು ಲೆಕ್ಕ ಮಾಡಿಲ್ಲ ಅಂದರೆ ಯಾವ ಕಾರ್ಮಿಕನೂ ಸತ್ತಿಲ್ಲವೇ: ರಾಹುಲ್ ಗರಂ
ನವದೆಹಲಿ, ಸೆಪ್ಟೆಂಬರ್ 15: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೊವಿಡ್ ಲಾಕ್ಡೌನ್ ಅವಧಿಯಲ್ಲಿ ಮನೆಗೆ ಮರಳುವಾಗ ಎಷ್ಟು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನುವ ಅಂಕಿ-ಅಂಶಗಳು ತಿಳಿದಿಲ್ಲ ಎಂದು ಸಂಸತ್ನಲ್ಲಿ ಸರ್ಕಾರ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
मोदी सरकार नहीं जानती कि लॉकडाउन में कितने प्रवासी मज़दूर मरे और कितनी नौकरियाँ गयीं।
— Rahul Gandhi (@RahulGandhi) September 15, 2020
तुमने ना गिना तो क्या मौत ना हुई?
हाँ मगर दुख है सरकार पे असर ना हुई,
उनका मरना देखा ज़माने ने,
एक मोदी सरकार है जिसे ख़बर ना हुई।
ಲಾಕ್ಡೌನ್ ಸಂದರ್ಭದಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾದು ಅಥವಾ ಎಷ್ಟು ಮಂದಿ ಕೆಲಸ ಕಳೆದುಕೊಂಡರು ಎಂಬುದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ, ಇವರ ಬಳಿ ಮಾಹಿತಿ ಇಲ್ಲ ಎಂದ ಮಾತ್ರಕ್ಕೆ ಯಾರೂ ಸತ್ತಿಲ್ಲ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ.
ಉದ್ಯೋಗ ಕಳೆದುಕೊಂಡ ವಲಸೆ ಕಾರ್ಮಿಕರು, ಮೃತರ ಅಂಕಿಅಂಶಗಳಿಲ್ಲ: ಕೇಂದ್ರ
ಮೃತಪಟ್ಟ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ಇಲ್ಲ
ಮಾರ್ಚ್ನಲ್ಲಿ ಶುರುವಾದ ಲಾಕ್ಡೌನ್ ಅವಧಿಯಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಮಾಹಿತಿಯು ಕೇಂದ್ರದ ಬಳಿ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಅದರ ಸಂಬಂಧ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕೆಲಸ ಕಳೆದುಕೊಂಡ ಕಾರ್ಮಿಕರ ಪರಿಶೀಲನೆ ನಡೆದಿಲ್ಲ
ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವ ಬಗ್ಗೆ ಸರ್ಕಾರದಿಂದ ಪರಿಶೀಲನೆ ನಡೆದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಗಂಗ್ವಾರ್ ಉತ್ತರಿಸಿದ್ದಾರೆ. ಸಾವಿಗೀಡಾಗಿರುವ ವಲಸೆ ಕಾರ್ಮಿಕರ ಲೆಕ್ಕ ಇಲ್ಲದ ಕಾರಣ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವ ಅಥವಾ ಆರ್ಥಿಕ ಸಹಕಾರ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.
63,07,000ಕ್ಕೂ ಹೆಚ್ಚು ಮಂದಿ ವಿವಿಧೆಡೆ ಸಾಗಿದ್ದಾರೆ
63,07,000ಕ್ಕೂ ಅಧಿಕ ವಲಸೆ ಕಾರ್ಮಿಕರು ಕೊವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಜನರು ದೇಶದ ವಿವಿಧ ಭಾಗಗಳಿಗೆ ತೆರಳಿದ್ದಾರೆ. 4611 ಶ್ರಮಿಕ್ ವಿಶೇಷ ರೈಲುಗಳು ವಲಸಿಗರನ್ನು ಕರೆದೊಯ್ಯಲು ಕಾರ್ಯಾಚರಿಸಿವೆ ಎಂದು ಗಂಗ್ವಾರ ಮಾಹಿತಿ ನೀಡಿದ್ದಾರೆ. ಅಂದಾಜಿನ ಪ್ರಕಾರ ದೇಶದಲ್ಲಿ ಕೊರೊನಾಸೋಂಕಿನಿಂದಾಗಿ 12.2 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಅವರಲ್ಲಿ ಶೇ.75ರಷ್ಟು ಜನರು ಸಣ್ಣ ವರ್ತಕರು ಹಾಗೂ ದಿನಗೂಲಿ ಕಾರ್ಮಿಕರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನೀವು ಲೆಕ್ಕ ಮಾಡಿಲ್ಲ ಅಂದರೆ ಯಾರೂ ಸತ್ತಿಲ್ಲವೇ?
ನೀವು ಲೆಕ್ಕ ಮಾಡಿಲ್ಲ, ಅಂದರೆ ಯಾರೂ ಸತ್ತಿಲ್ಲವೇ? ದುರದೃಷ್ಟವೆಂದರೆ ಇದರಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಲಸೆ ಕಾರ್ಮಿಕರು ಮೃತಪಟ್ಟಿದ್ದನ್ನು ಇಡೀ ಜಗತ್ತೇ ನೋಡಿದೆ. ಆದರೆ ಮೋದಿ ಸರ್ಕಾರಕ್ಕೆ ಮಾತ್ರ ಅದರ ಅರಿವಿಲ್ಲ ಎಂದು ಲೇವಡಿ ಮಾಡಿದ್ದಾರೆ.