ರಾಜ್ಯಸಭೆಗೆ ಚುನಾವಣೆ: ಎಎಪಿ ಆಫರ್ ತಿರಸ್ಕರಿಸಿದ ರಘುರಾಮ್ ರಾಜನ್
ನವದೆಹಲಿ, ನವೆಂಬರ್ 9: ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಎಎಪಿ ನೀಡಿದ ಆಹ್ವಾನವನ್ನು ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ನಯವಾಗಿ ತಿರಸ್ಕರಿಸಿದ್ದಾರೆ.
ಈ ಸಂಬಂಧ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿರುವ ರಾಜನ್, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ವೃತ್ತಿ ಬಿಟ್ಟು ಬರುವ ಯಾವುದೇ ಯೋಚನೆ ಇಲ್ಲ ಎಂದಿದ್ದಾರೆ.
2018ರ ಜನವರಿಯಲ್ಲಿ ಮೂರು ರಾಜ್ಯಸಭೆ ಸ್ಥಾನಗಳು ತೆರವಾಗಲಿದೆ. ದೆಹಲಿ ವಿಧಾನಸಭೆಯಲ್ಲಿ ಎಎಪಿಗೆ ಇರುವ ಸದಸ್ಯಬಲದ ಆಧಾರದ ಮೂರೂ ಸ್ಥಾನಗಳು ಆ ಪಕ್ಷದ ಪಾಲಾಗಲಿವೆ. ಹೀಗಾಗಿ ಈ ರಘುರಾಮ್ ರಾಜನ್ ರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲು ಆಮ್ ಆದ್ಮಿ ಪಕ್ಷ ಮುಂದಾಗಿತ್ತು.
ಮೂರೂ ಸ್ಥಾನಗಳಿಗೆ ಪಕ್ಷದ ಹೊರಗಿನವರನ್ನು ನಾಮನಿರ್ದೇಶನ ಮಾಡಲು ಅರವಿಂದ ಕೇಜ್ರಿವಾಲ್ ಬಯಸಿದ್ದಾರೆ. ರಘುರಾಮ್ ರಾಜನ್ ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಬುಧವಾರ ವರದಿಯಾಗಿತ್ತು. ಆದರೆ ಇದೀಗ ರಾಜನ್ ರಾಜ್ಯಸಭೆ ಪ್ರವೇಶದಿಂದ ಹಿಂದೆ ಸರಿದಿದ್ದಾರೆ.
ರಾಜನ್ ಅವರು ಸದ್ಯ ಶಿಕಾಗೊ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್ನಲ್ಲಿ ಪ್ರಾಧ್ಯಾಪಕರಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.