ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್
ಭಾರತದ ಆರ್ಥಿಕತೆ ಪ್ರಗತಿ ಹಾದಿಯಲ್ಲಿದೆಯಾ? ಅಗತ್ಯ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಅಗದಿರುವಾಗ ಕೂಡ ಅಭಿವೃದ್ಧಿ ದರವು 7 ಪರ್ಸೆಂಟ್ ಇದೆಯಾ? ಪಕ್ಷಾತೀತವಾದ ಸಂಸ್ಥೆ ಅಥವಾ ಸಮಿತಿಯೊಂದನ್ನು ನೇಮಕ ಮಾಡಿ, ಜಿಡಿಪಿ ಸಂಖ್ಯೆಯ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಘುರಾಮ್ ರಾಜನ್ ಅವರು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿಯೂ ಕಾರ್ಯ ನಿರ್ವಹಿಸಿದವರು. ಸದ್ಯಕ್ಕೆ ಯಾವ ಅಂಕಿ-ಅಂಶ ಇದನ್ನು ಸೂಚಿಸುತ್ತಿದೆ ಎಂಬ ಬಗ್ಗೆ ನನಗೆ ಗೊತ್ತಾಗುತ್ತಿಲ್ಲ. ಆದರೆ ನಿಜವಾಗಲೂ ಭಾರತ ಅಭಿವೃದ್ಧಿ ದರ ಎಷ್ಟು ಎಂಬ ಬಗ್ಗೆ ಗೊತ್ತಾಗಬೇಕಿದೆ ಎಂದು ಹೇಳಿದ್ದಾರೆ.
ನನಗೆ ಗೊತ್ತಿದೆ: ಒಬ್ಬರು ಸಚಿವರು (ನರೇಂದ್ರ ಮೋದಿ ಸರಕಾರದಲ್ಲಿ) ಹೇಳಿದ್ದಾರೆ. ಉದ್ಯೋಗ ಇಲ್ಲದೆ ನಾವು ಹೇಗೆ 7 ಪರ್ಸೆಂಟ್ ನಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯ. ಆದರೆ ಒಂದು ಸಾಧ್ಯತೆ ಇದೆ, ನಾವು 7 ಪರ್ಸೆಂಟ್ ದರದಲ್ಲಿ ಬೆಳವಣಿಗೆ ಸಾಧಿಸುತ್ತಿಲ್ಲ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಆದರೆ ಆ ಸಚಿವರ ಹೆಸರನ್ನು ಅವರು ಹೇಳಿಲ್ಲ.
ಗೊಂದಲದ ಮೂಲ ತಿಳಿದುಕೊಳ್ಳಬೇಕು
ನಾವೀಗ ಎಲ್ಲ ಸ್ವಚ್ಛ ಮಾಡಿಕೊಳ್ಳಬೇಕಿದೆ. ಹೊಸ ಜಿಡಿಪಿ ಅಂಕಿಯಲ್ಲಿ ಇರುವ ಗೊಂದಲದ ಮೂಲ ಯಾವುದು ಅಂತ ತಿಳಿದುಕೊಳ್ಳಬೇಕು. ಪಕ್ಷಾತೀತವಾಗಿ ಒಂದು ಸಮಿತಿ ರಚಿಸಿ, ಮತ್ತೆ ವಿಶ್ವಾಸ ಗಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಒಂದು ವೇಳೆ ಆ ಸಮಿತಿ ಕೂಡ ಇದೇ ಸಂಖ್ಯೆಯನ್ನು ಮುಂದಿಟ್ಟರೆ ಆಗ ನಮ್ಮ ಜಿಡಿಪಿ ಅಂಕಿ-ಅಂಶದ ಬಗ್ಗೆ ವಿಶ್ವಾಸ ಹೆಚ್ಚುತ್ತದೆ ಎಂದಿದ್ದಾರೆ.
ನೋಟು ನಿಷೇಧದಂಥ ನಿರ್ಧಾರದ ಬಗ್ಗೆ ವಿಮರ್ಶೆ ಮಾಡಿಕೊಳ್ಳಲಿ
ವಿವಾದಾಸ್ಪದ ನೋಟು ನಿಷೇಧದಂಥ ತೀರ್ಮಾನಗಳ ಬಗ್ಗೆ ಸರಕಾರ ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳಬೇಕು. ನೋಟು ನಿಷೇಧದಿಂದ ನಾವು ಏನು ಕಲಿತಿದ್ದೇವೆ ಎಂದು ತಿಳಿಯಲು ಸಾಕಷ್ಟು ಸಮಯ ಆಗಿದೆ. ಅದರಿಂದ ಅಂದುಕೊಂಡ ಗುರಿ ಸಾಧಿಸಿದೆವಾ ಅಥವಾ ಇಲ್ಲವಾ? ಅದರ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳೇನು ಎಂದು ಸ್ವತಃ ಪರೀಕ್ಷೆ ಮಾಡಿಕೊಳ್ಳಲು ಸೂಕ್ತ ಕಾಲ. ಉತ್ತಮ ಆಡಳಿತಕ್ಕೆ ಹಾಗೂ ಕ್ಷಮತೆಗೆ ಇದು ಸಹಕಾರಿ ಎಂದು ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ದತ್ತಾಂಶ ತಿರುಚುತ್ತಿಲ್ಲ ಎಂದು ಜಗತ್ತಿನ ಮುಂದೆ ಹೇಳಬೇಕು
ನಾವು (ಭಾರತ) ದತ್ತಾಂಶಗಳನ್ನು ತಿರುಚುತ್ತಿಲ್ಲ ಎಂಬುದನ್ನು ಜಗತ್ತಿನ ಮುಂದೆ ಹೇಳಬೇಕಿದೆ. ಇದು ನಮ್ಮ ದತ್ತಾಂಶ, ಸ್ವತಂತ್ರ ಗುಂಪೊಂದು ಇದನ್ನು ಪರಿಶೀಲಿಸಿ, ಪ್ರಮಾಣೀಕರಿಸಲಿ. ಅಥವಾ ಬದಲಾವಣೆ ಅಗತ್ಯ ಇದ್ದಲ್ಲಿ ತಿಳಿಸಲಿ ಎಂದಿದ್ದಾರೆ ರಾಜನ್. ಭಾರತಕ್ಕೆ ಉತ್ತಮ ವಿಶ್ವಾಸಾರ್ಹ ದತ್ತಾಂಶ ಹೊಂದಿದ ದಾಖಲೆ ಇದೆ ಎಂದಿದ್ದಾರೆ.
ಹೊಸ ಪುಸ್ತಕ ಪ್ರಚಾರದ ಪ್ರವಾಸದಲ್ಲಿ
ನ್ಯಾಯಯುತ ಸ್ವಚ್ಛವಾದ, ಸ್ವತಂತ್ರ ಪರಿಶೀಲನೆಯೊಂದು ನಮ್ಮ ದತ್ತಾಂಶ ಪ್ರಕ್ರಿಯೆ ಮೇಲೆ ಆಗಬೇಕಿದೆ. ಇದಕ್ಕಾಗಿ ಸ್ವತಂತ್ರ ಸಮಿತಿ ರಚಿಸಿ, ಆದರಲ್ಲಿ ತಜ್ಞರಿದ್ದು, ಅವರ ಮೂಲಕ ಹೀಗೆ ಮಾಡಿಸುವುದು ಉತ್ತಮ. ನಾವು ಅನುಸರಿಸುತ್ತಿರುವ ಪ್ರಕ್ರಿಯೆ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಅವರು ತಮ್ಮ ಹೊಸ ಪುಸ್ತಕ "ದ ಥರ್ಡ್ ಪಿಲ್ಲರ್" ಪುಸ್ತಕದ ಪ್ರಚಾರಕ್ಕಾಗಿ ಪ್ರವಾಸ ಕೈಗೊಂಡಿದ್ದಾರೆ.