ತಿಲಕವಿಟ್ಟು, ಓಂ ಬರೆದು ರಫೇಲ್ ಸೇರ್ಪಡೆ: ತರ್ಕಕ್ಕೆ ನಿಲುಕದ ಇದರ ಹಿಂದಿನ ಔಚಿತ್ಯ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರಿಗೆ ಪ್ರಮುಖ ಅಸ್ತ್ರವಾಗಿದ್ದ ರಫೇಲ್ ಯುದ್ದವಿಮಾನ ಆಯುಧಪೂಜೆಯ ದಿನದಂದು ಭಾರತಕ್ಕೆ ಹಸ್ತಾಂತರಗೊಂಡಿದೆ.
ಫ್ರಾನ್ಸ್ ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಫೇಲ್ ವಿಮಾನಕ್ಕೆ ಕುಂಕುಮ ಹಚ್ಚಿ, ವ್ಹೀಲ್ ಕೆಳಗೆ ನಿಂಬೆಹಣ್ಣು ಇಟ್ಟು, ಓಂ ಎಂದು ಬರೆದು, ಪೂಜೆ ಮಾಡಿ, ರಕ್ಷಣಾ ಇಲಾಖೆಯ ಪರವಾಗಿ, ವಿಮಾನವನ್ನು ಸ್ವೀಕರಿಸಿದ್ದಾರೆ. ಯುದ್ದವಿಮಾನದಲ್ಲಿ ಮೊದಲ ರೈಡ್ ಅನ್ನೂ ಮಾಡಿದ್ದಾರೆ.
ರೇವಣ್ಣ ಹಿಡ್ಕೊಂಡ್ರೆ ನಿಂಬೆಹಣ್ಣು, ರಾಜನಾಥ್ ಸಿಂಗ್ ಹಿಡ್ಕೊಂಡ್ರೆ ಕುಂಬ್ಳಕಾಯಿನಾ?
ವಾಯುಪಡೆಯ 87ನೇ ವಾರ್ಷಿಕೋತ್ಸವದ ದಿನವೇ ಚೊಚ್ಚಲ ರಫೇಲ್ ಯುದ್ದವಿಮಾನವನ್ನು ಫ್ರಾನ್ಸ್, ಭಾರತಕ್ಕೆ ಹಸ್ತಾಂತರಿಸಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್, ಪೂಜೆ ಮಾಡಿ ವಿಮಾನವನ್ನು ಸ್ವೀಕರಿಸಿದ್ದು ಈಗ ಚರ್ಚೆಯ ವಿಷಯವಾಗಿದೆ.
ರಫೇಲ್ ಯುದ್ಧ ವಿಮಾನದ ನೆತ್ತಿಗೆ 'ಓಂ'ಕಾರ, ಚಕ್ರದಡಿ ನಿಂಬೆಹಣ್ಣು
ಒಂದು ಸಂಪ್ರದಾಯದ ಪ್ರಕಾರ, ವಿಮಾನಕ್ಕೆ ಪೂಜೆ ಮಾಡಿರುವುದು ಈಗ ಡಿಬೇಟಿನ ವಿಚಾರವಾಗಿ ಕೂತಿದೆ. ಭಾರತೀಯರ ತೆರಿಗೆ ದುಡ್ಡಿನಿಂದ ಖರೀದಿಸಿರುವ ಯುದ್ದವಿಮಾನ ಇದಾಗಿದೆ. ಬರೀ ಒಂದು ಕೋಮಿನವರ ಟ್ಯಾಕ್ಸ್ ಕೊಡುಗೆಯಿಂದ ಮಾತ್ರ ಈ ವಿಮಾನವನ್ನು ಖರೀದಿಸಲು ಸಾಧ್ಯವೇ ಎನ್ನುವುದು ಈಗ ಎದ್ದಿರುವ ಪ್ರಶ್ನೆ.
ಫ್ರಾನ್ಸ್ ಜೊತೆ 59,000 ಸಾವಿರ ಕೋಟಿ ರೂಪಾಯಿಯ ಒಪ್ಪಂದ
ಫ್ರಾನ್ಸ್ ಜೊತೆ 59,000 ಸಾವಿರ ಕೋಟಿ ರೂಪಾಯಿಯ ಒಪ್ಪಂದದ ಪ್ರಕಾರ 36 ರಫೇಲ್ ವಿಮಾನಗಳು 2022ರೊಳಗೆ ಭಾರತಕ್ಕೆ ಹಸ್ತಾಂತರಗೊಳ್ಳಲಿದೆ. ಆಯುಧಪೂಜೆಯ ದಿನದಂದು ಹಸ್ತಾಂತರಗೊಂಡ ಮೊದಲ ವಿಮಾನ, ಅಂಬಾಲ (ಪಂಜಾಬ್) ಏರ್ ಫೋರ್ಸ್ ಸ್ಟೇಶನ್ ನಲ್ಲಿರಲಿದೆ. (ಚಿತ್ರ:ಪಿಟಿಐ)
ಯುದ್ದವಿಮಾನದ ಸೇರ್ಪಡೆ ವಿಚಾರದಲ್ಲೂ 'ಬಿಜೆಪಿ ಬೆರೆಸಿದ್ದಾರಾ'?
ಇದು ದೇಶದ ರಕ್ಷಣೆಯ ವಿಚಾರ, ಇದು ಎಲ್ಲಾ ಜಾತ್ಯಾತೀತ ನಿಲುವನ್ನು ಮೀರಿ ನಿಲ್ಲುವಂತದ್ದು. ಹೀಗಿದ್ದಾಗ, ಕೇಂದ್ರ ರಕ್ಷಣಾ ಸಚಿವರು, ಯುದ್ದವಿಮಾನದ ಸೇರ್ಪಡೆ ವಿಚಾರದಲ್ಲೂ 'ಬಿಜೆಪಿ ಬೆರೆಸಿದ್ದಾರಾ' ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಯುದ್ದವಿಮಾನಕ್ಕೆ 'ಓಂ' ಎಂದು ಖುದ್ದು ರಕ್ಷಣಾ ಸಚಿವರೇ ಬರೆದಿದ್ದರು
ಯುದ್ದವಿಮಾನಕ್ಕೆ 'ಓಂ' ಎಂದು ಖುದ್ದು ರಕ್ಷಣಾ ಸಚಿವರೇ ಬರೆದಿದ್ದರು. ಜಾತ್ಯಾತೀತ ನಿಲುವನ್ನು ನಂಬುವಂತಹ ಪಕ್ಷ ನಮ್ಮದು ಎಂದು ಖುದ್ದು ಪ್ರಧಾನಿಗಳೇ ಹಲವು ಬಾರಿ ಹೇಳಿದ್ದುಂಟು. ಹೀಗಿರುವಾಗ, ಒಂದು ಸಂಪ್ರದಾಯದ ಭಾವನೆಗಳಿಗೆ ಚ್ಯುತಿ ಬರದಂತೆ ಮಾತ್ರ ನಡೆದುಕೊಂಡಿದ್ದು ಏಕೆ ಎನ್ನುವುದಿಲ್ಲಿ ಪ್ರಶ್ನೆ.
ಎಲ್ಲಾ ಕೋಮಿನವರ ಭಾವನೆಗಳಿಗೆ ಬೆಲೆ ಕೊಡಬೇಕಾಗುತ್ತದೆ
ಯುದ್ದವಿಮಾನ ಸೇರ್ಪಡೆ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಇದು ದೇಶದ ರಕ್ಷಣೆ ಎನ್ನುವ ಸೂಕ್ಷ್ಮ ವಿಚಾರ. ಇಲ್ಲಿ, ಎಲ್ಲಾ ಕೋಮಿನವರ ಭಾವನೆಗಳಿಗೆ ಬೆಲೆ ಕೊಡಬೇಕಾಗುತ್ತದೆ. ಎಲ್ಲಾ ವರ್ಗದ ಜನರ ತೆರಿಗೆ ದುಡ್ಡಿನಿಂದ ದೇಶವಿಂದು, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆದು ನಿಂತಿರುವುದು. ಹೀಗಿರುವಾಗ, ರಾಜನಾಥ್ ಸಿಂಗ್ ನಿಲುವು ಸರಿಯೇ ಎನ್ನುವ ಪ್ರಶ್ನೆ ಏಳಲಾರಂಭಿಸಿದೆ. (ಚಿತ್ರ:ಪಿಟಿಐ)
ಹಣೆಗೆ ಕುಂಕುಮವಿಟ್ಟು ಬರಮಾಡಿಕೊಳ್ಲುವುದು
ದೇಶಕ್ಕೆ ಯಾರೇ ಅತಿಥಿಗಳು ಬರಲಿ, ಅವರ ಹಣೆಗೆ ಕುಂಕುಮವಿಟ್ಟು ಬರಮಾಡಿಕೊಳ್ಲುವುದು ಹಿಂದಿನಿಂದಲೂ ಈ ದೇಶದಲ್ಲಿ ನಡೆದುಕೊಂಡು ಬಂದ ಪದ್ದತಿ. ಹೀಗಿರುವಾಗ, ನಮ್ಮ ದೇಶಕ್ಕೆ ಬರುವ ರಫೇಲ್ ಅನ್ನು ಅದೇ ರೀತಿ ಬರಮಾಡಿಕೊಂಡರೆ ಅದರಲ್ಲಿ ತಪ್ಪೇನು ಎನ್ನುವುದು ಇನ್ನೊಂದು ವಾದ. ಒಟ್ಟಿನಲ್ಲಿ, ತಿಲಕವಿಟ್ಟು, ಓಂ ಬರೆದು ರಫೇಲ್ ಸೇರ್ಪಡೆ ಸಣ್ಣದಾಗಿ ವಿವಾದವಾಗಿ ಕೂತಿದೆ. (ಚಿತ್ರ:ಪಿಟಿಐ)