ರಫೇಲ್ ಹಸ್ತಕ್ಷೇಪ : ವರದಿ ಪ್ರಕಟಿಸಿದ ಪತ್ರಿಕೆಗೆ ನಿರ್ಮಲಾ ಸವಾಲು
ನವದೆಹಲಿ, ಫೆಬ್ರವರಿ 8 : ರಫೇಲ್ ಡೀಲ್ ನಲ್ಲಿ ಹಸ್ತಕ್ಷೇಪ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಒಕ್ಕಣೆಯ ಪತ್ರವನ್ನು ವೃತ್ತಪತ್ರಿಕೆ ಪ್ರಕಟಿಸಿದೆ. ಆ ಪತ್ರಿಕೆಗೆ ನೈತಿಕತೆಯೇನಾದರೂ ಇದ್ದರೆ, ಆ ಪತ್ರಕ್ಕೆ ಅಂದಿನ ರಕ್ಷಣಾ ಸಚಿವರು ನೀಡಿದ್ದ ಉತ್ತರವನ್ನೂ ಪ್ರಕಟಿಸಲಿ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸವಾಲು ಹಾಕಿದ್ದಾರೆ.
ಶೃಂಗಸಭೆಯಲ್ಲಿ ನಡೆದ ಮಾತುಕತೆಯ ಪ್ರಗತಿಯನ್ನು ಪ್ರಧಾನಿ ಕಚೇರಿ ಮತ್ತು ಫ್ರಾನ್ಸ್ ಅಧ್ಯಕ್ಷರ ಕಚೇರಿ ಪರಿವೀಕ್ಷಿಸುತ್ತಿದೆ. ಆದರೆ, ಡೆಪ್ಯುಟಿ ಕಾರ್ಯದರ್ಶಿ ಅವರು ಬರೆದ ಪತ್ರದ 5ನೇ ಪ್ಯಾರಾದಲ್ಲಿ ಇರುವುದು ಅತಿರೇಕದ ಪ್ರತಿಕ್ರಿಯೆಯಾಗಿದೆ ಎಂದು ಅವರು ಮನೋಹರ್ ಪರಿಕ್ಕರ್ ಅವರು ಉತ್ತರ ನೀಡಿದ್ದರು.
'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'
ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಪ್ರತಿಕ್ರಿಯೆ ಪ್ರಸ್ತಾಪಿಸಿದ ಪತ್ರವನ್ನೂ ಈ ಪತ್ರಿಕೆ (ದಿ ಹಿಂದೂ) ಪ್ರಕಟಿಸಲಿ ಎಂದು ನಿರ್ಮಲಾ ಸೀತಾರಾಮನ್ ಅವರು ಸವಾಲು ಎಸೆದಿದ್ದಾರೆ. ಆದರೆ, ಪತ್ರಿಕೆ ಪ್ರಕಟಿಸಿರುವ ಲೇಖನದಲ್ಲಿ ಮನೋಹರ್ ಪರಿಕ್ಕರ್ ಅವರ ಉತ್ತರವನ್ನು ಪ್ರಕಟಿಸಲಾಗಿಲ್ಲ.
ಪತ್ರಿಕೆಯನ್ನು ತೀವ್ರವಾಗಿ ಟೀಕಿಸಿದ ನಿರ್ಮಲಾ ಅವರು, ಆ ಪತ್ರಿಕೆ ಉದ್ದೇಶಪೂರ್ವಕವಾಗಿಯೇ ಅಂದಿನ ರಕ್ಷಣಾ ಮಂತ್ರಿಯ ಉತ್ತರವನ್ನು ಮರೆಮಾಚಿದೆ. ಪ್ರತಿಕ್ರಿಯೆ ಪಡೆಯಲೆಂದೇ ಸ್ಟೋರಿಯನ್ನು ಸೃಷ್ಟಿಸುವುದು ಎಷ್ಟು ಸರಿ? ಇಂಥ ಬೇಜವಾಬ್ದಾರಿ ಮತ್ತು ನಿಂದನಾತ್ಮಕ ಪತ್ರಿಕೋದ್ಯಮವನ್ನು ನಾನು ಟೀಕಿಸುತ್ತೇನೆ ಎಂದು ಅವರು ಖಾರವಾಗಿ ಹೇಳಿದ್ದಾರೆ.
ಪತ್ರಿಕೆಗಳು ಸತ್ಯಾಂಶ ಹೇಳಬೇಕು
ಪತ್ರಿಕೆಗಳು ಮಾಹಿತಿಯಲ್ಲಿನ ಸತ್ಯಾಂಶವನ್ನು ಹೆಕ್ಕಬೇಕು. ಪ್ರಕಟಿಸುವ ಮುನ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಆದರೆ, ಆ ಪತ್ರಿಕೆ ಮಾಡಿರುವುದು ನಿಜಕ್ಕೂ ದುರಾದೃಷ್ಟಕರ. ಪತ್ರಿಕೆಗೆ ಸತ್ಯಾಂಶ ತಿಳಿಯಬೇಕಿದ್ದರೆ ರಕ್ಷಣಾ ಸಚಿವಾಲಯವನ್ನು ನೇರವಾಗಿ ಸಂಪರ್ಕಿಸಬಹುದಿತ್ತು. ಅವರು ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನಾದರೂ ಸಂಪರ್ಕಿಸಬಹುದಿತ್ತು. ಆದರೆ, ಯಾವುದೇ ಸತ್ಯಾಂಶವನ್ನು ಪರಿಶೀಲಿಸದೆ ಆ ಪತ್ರಿಕೆ ವರದಿಯನ್ನು ಪ್ರಕಟಿಸಿದೆ. ರಫೇಲ್ ಡೀಲ್ ಕುರಿತಂತೆ ಸಂಸತ್ತಿನಲ್ಲಿ ಮಾತ್ರವಲ್ಲ ನ್ಯಾಯಾಲಯದಲ್ಲಿಯೂ ಎಲ್ಲ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಮಾಡಿದ್ದೇನು?
ಪ್ರಧಾನಿ ಕಚೇರಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಕ್ಕೆ ಮನೋಹರ್ ಪರಿಕ್ಕರ್ ಅವರೇ ಉತ್ತರಿಸಿ ಎಲ್ಲ ಸಂದೇಹ ನಿವಾರಿಸಿದ್ದರು. ಶಾಂತವಾಗಿರಿ, ಯಾವುದೇ ಚಿಂತೆಗೆ ಕಾರಣವಿಲ್ಲ, ಎಲ್ಲ ಸುಗಮವಾಗಿ ನಡೆಯುತ್ತಿದೆ ಎಂದು ಅವರು ಉತ್ತರಿಸಿದ್ದರು. ಆದರೆ, ಸೋನಿಯಾ ಗಾಂಧಿ ಅವರು ಯುಪಿಎ ಸರಕಾರವಿದ್ದಾಗ ಮಾಡಿದ್ದೇನು? ಪ್ರಧಾನಿ ಕಚೇರಿಯೊಂದಿಗೆ ಮಾತ್ರವಲ್ಲ, ತಾವು ಅಧಿಕಾರಿದಲ್ಲಿದ್ದಾಗ ಎಲ್ಲ ಸಚಿವಾಲಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದುದು ಸೋನಿಯಾ ಗಾಂಧಿ ಅವರು ನಿರ್ಮಲಾ ಸೀತಾರಾಮನ್ ಅವರು ನೇರವಾಗಿ ಆರೋಪಿಸಿದರು.
ಮೋದಿ ಕೆಳಗಿಳಿಸಲು ಕಾಂಗ್ರೆಸ್ ಗೆ ಪಾಕ್ ನೆರವು: ನಿರ್ಮಲಾ ಸೀತಾರಾಮನ್
ರಾಹುಲ್ ಹೇಳಿಕೆ ನಾಚಿಕೆಗೇಡಿನದ್ದು : ನಿರ್ಮಲಾ
ಕಡೆಗೆ, ರಾಹುಲ್ ಗಾಂಧಿ ಅವರು ಬಳಸುತ್ತಿರುವ ಭಾಷೆ ಮತ್ತು ಅವರ ಉದ್ದೇಶವನ್ನು ನೋಡಿರಿ. ಪ್ರಧಾನಿ ಅವರನ್ನು ಚೋರ್ (ಕಳ್ಳ) ಮತ್ತು ನನ್ನನ್ನು ಯಾವುದು ಸಾಧ್ಯವೋ ಎಲ್ಲಾ ಹೆಸರುಗಳಿಂದ ಕರೆದಿರುವುದು ಒಂದೆಡೆಯಾದರೆ, ಇಂದು ಅವರು ದೇಶದ ಸೇನಾಪಡೆ ಮತ್ತು ರಾಷ್ಟ್ರದ ನಾಯಕರ ನಡುವೆ ಭಿನ್ನಾಭಿಪ್ರಾಯ ಬರುವಂತೆ ಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನದ್ದು. ಅವರು ಪ್ರಧಾನಿಯ ವಿರುದ್ಧವೇ ಸೇನಾಧಿಪತಿಗಳನ್ನು ಎತ್ತಿಕಟ್ಟಲು ಯತ್ನಿಸುತ್ತಿರುವುದು ಅಸಹ್ಯಕರ. ನಾವು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರಿಂದ ಉತ್ತಮ ವರ್ತನೆಯನ್ನು ನಿರೀಕ್ಷಿಸುತ್ತೇವೆ ಎಂದು ಮಾತಿನ ಚಾಟಿ ಬೀಸಿದ್ದಾರೆ ನಿರ್ಮಲಾ ಸೀತಾರಾಮನ್.
ಮನೋಹರ್ ಪರಿಕ್ಕರ್ ಉತ್ತರ
ಮನೋಹರ್ ಪರಿಕ್ಕರ್ ಅವರು, 'ಈ ವಿಷಯದಲ್ಲಿ ರಕ್ಷಣಾ ಕಾರ್ಯದರ್ಶಿ ಜಿ ಮೋಹನ್ ಅವರಿಗೆ ಗೊಂದಲಗಳೇನಾದರೂ ಇದ್ದರೆ ಅದನ್ನು ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಲಿ' ಎಂದು ಕೂಡ ಹೇಳಿದ್ದರು. ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಕುರಿತು ಭಾರತ ಸರಕಾರ ಮತ್ತು ಫ್ರಾನ್ಸ್ ನಡುವೆ ಮಾತುಕತೆ ನಡೆಯುತ್ತಿರುವಾಗಲೇ, ಪ್ರಧಾನಿ ಕಚೇರಿ ಮತ್ತು ಫ್ರಾನ್ಸ್ ಅಧ್ಯಕ್ಷರ ಕಚೇರಿಯ ಅಧಿಕಾರಿಗಳ ಜೊತೆ 'ಸಮಾನಾಂತರ ಮಾತುಕತೆ' ನಡೆಯುತ್ತಿದ್ದ ಬಗ್ಗೆ ರಕ್ಷಣಾ ಸಚಿವಾಲಯ ಆಕ್ಷೇಪ ಎತ್ತಿ ಪತ್ರ ಬರೆದಿತ್ತು.
ಮೂಗಲ್ಲಿ ನಳಿಗೆ ಸಿಕ್ಕಿಸಿಕೊಂಡೇ 'How's the Josh?' ಎಂದ ಪರಿಕ್ಕರ್!
ಮೋದಿಯದು ದ್ವಿವ್ಯಕ್ತಿತ್ವ : ರಾಹುಲ್ ಟೀಕೆ
ರಾಹುಲ್ ಗಾಂಧಿ ಅವರು, ಪ್ರಧಾನಿ ಅವರಿಗೆ ದ್ವಿವ್ಯಕ್ತಿತ್ವವಿದ್ದು, ಅವರು ತಮ್ಮನ್ನು ತಾವೇ ಚೌಕಿದಾರ್ ಮತ್ತು ಚೋರ್ ಎಂದು ಕರೆದುಕೊಳ್ಳುತ್ತಿದ್ದಾರೆ. ಚೌಕಿದಾರನೇ ಚೋರ್ ನನ್ನು ದೂಷಿಸುತ್ತಿದ್ದಾನೆ. ಅವರು ರಾತ್ರಿ ತಮಗೆ ತಾವೇ ಮಾತನಾಡಿಕೊಳ್ಳುತ್ತಾರೆ. ಒಂದು ದಿನ ಚೌಕಿದಾರ್ ನಾದರೆ ಮತ್ತೊಂದು ದಿನ ಚೋರ್ ಆಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀನಾಯವಾಗಿ ಟೀಕಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು, ರಫೇಲ್ ಡೀಲ್ ಬಗ್ಗೆ ಬೇಕಾದಷ್ಟು ವಿವರಣೆಗಳನ್ನು ಕೇಳಿದ್ದೇವೆ. ನಮಗೆ ಇನ್ನೂ ಏನೂ ವಿವರಣೆ ಬೇಕಾಗಿಲ್ಲ. ಜಂಟಿ ಸಂಸದೀಯ ಸಮಿತಿಯಿಂದ ರಫೇಲ್ ಡೀಲ್ ಹಗರಣದ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.