ರಫೇಲ್ ಡೀಲ್ : ವಿರೋಧಿಗಳಿಗೆ ತಿರುಗುಬಾಣವಾದ ಸ್ಪಷ್ಟೀಕರಣ
ನವದೆಹಲಿ, ಫೆಬ್ರವರಿ 8 : ರಫೇಲ್ ಡೀಲ್ ಬಗ್ಗೆ ಮಾತುಕತೆ ನಡೆಸುವಾಗ ಪ್ರಧಾನಿ ಕಚೇರಿ ಹಸ್ತಕ್ಷೇಪ ಮಾಡಿದ್ದಲ್ಲದೆ ಸುಪ್ರೀಂ ಕೋರ್ಟಿಗೂ ಬಿಜೆಪಿ ಸುಳ್ಳು ಹೇಳಿದೆ ಎಂದು ಆಕಾಶ ಭೂಮಿ ಒಂದು ಮಾಡಿದವರಿಗೆ ಇದೀಗ ಬಂದಿರುವ ಸ್ಪಷ್ಟೀಕರಣವೇ ತಿರುಗುಬಾಣವಾಗಿದೆ.
ಫ್ರಾನ್ಸ್ ಸರಕಾರದೊಂದಿಗೆ ಮಾತುಕತೆ ನಡೆಸಿದ ಭಾರತದ ಏಳು ಅಧಿಕಾರಿಗಳ ತಂಡದ ನೇತೃತ್ವ ವಹಿಸಿದ್ದ ಏರ್ ಮಾರ್ಷಲ್ ಎಸ್ಪಿಬಿ ಸಿನ್ಹಾ ಅವರು ನೀಡಿರುವ ಉತ್ತರ, ಹಲವಾರು ಸಂದೇಹಗಳನ್ನು ನಿವಾರಣೆ ಮಾಡಿದೆ.
ರಫೇಲ್ ಹಸ್ತಕ್ಷೇಪ : ವರದಿ ಪ್ರಕಟಿಸಿದ ಪತ್ರಿಕೆಗೆ ನಿರ್ಮಲಾ ಸವಾಲು
ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಡೆಪ್ಯೂಟಿ ಸೆಕ್ರೆಟರಿ ಎಸ್ ಕೆ ಶರ್ಮಾ ಅವರು ಬರೆದ ಪತ್ರದಲ್ಲಿ, ಭಾರತ ಮತ್ತು ಫ್ರಾನ್ಸ್ ಅಧಿಕಾರಿಗಳ ನಡುವೆ ರಫೇಲ್ ಡೀಲ್ ಬಗ್ಗೆ ಮಾತುಕತೆ ನಡೆಯುತ್ತಿರುವಾಗ, ಪ್ರಧಾನಿ ಕಚೇರಿಯ ಅಧಿಕಾರಿಗಳು ಹಸ್ತಕ್ಷೇಪ ಮಾಡುವುದು ಸಮಂಜಸವಲ್ಲ ಎಂದು ನೋಟ್ ಬರೆದಿದ್ದರು.
ಇದನ್ನು ಇಟ್ಟುಕೊಂಡು ದಿ ಹಿಂದೂ ಪತ್ರಿಕೆ ಒಂದು ವರದಿ ಪ್ರಕಟಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳು ಭಾರತೀಯ ಜನತಾ ಪಕ್ಷದ ವಿರುದ್ಧ ತಿರುಗಿಬಿದ್ದಿವೆ. ನರೇಂದ್ರ ಮೋದಿ ಅವರು 'ಚೋರ್' ಎಂದು ರಾಹುಲ್ ಮತ್ತೆ ಮೂದಲಿಸಿದ್ದಾರೆ. ಆ ವರದಿಯಲ್ಲಿ ಮನೋಹರ್ ಪರಿಕ್ಕರ್ ಅವರು ನೀಡಿದ ಉತ್ತರದ ಪ್ರಸ್ತಾಪವಿಲ್ಲ.
ಆದರೆ, ಎಸ್ಪಿಬಿ ಸಿನ್ಹಾ ಅವರು ನೀಡಿರುವ ಸ್ಪಷ್ಟೀಕರಣ ವಿರೋಧ ಪಕ್ಷಗಳಿಗೆ ಕಪಾಳಮೋಕ್ಷ ಮಾಡಿದಂತಿದೆ. ಫ್ರಾನ್ಸ್ ಸರಕಾರದೊಡನೆ ಅಧಿಕೃತವಾಗಿ ಮಾತುಕತೆ ನಡೆಸುತ್ತಿದ್ದ ವ್ಯಕ್ತಿಗಳಲ್ಲಿ ಯಾರೂ ಆ ಪತ್ರದಲ್ಲಿ ಟಿಪ್ಪಣಿ ಬರೆದಿಲ್ಲ. ಈ ವಿವಾದವನ್ನು ಅನಗತ್ಯವಾಗಿ ಕೆದಕಿದ ಎಸ್ ಕೆ ಶರ್ಮಾ ಅವರು ಮಾತುಕತೆ ನಡೆಸಿದ ಅಧಿಕೃತ ತಂಡದ ಸದಸ್ಯರೇ ಆಗಿರಲಿಲ್ಲ. ಅಲ್ಲಿ ಬರೆದಿರುವ ಟಿಪ್ಪಣಿಗೂ, ನಡೆಯುತ್ತಿದ್ದ ಮಾತುಕತೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಇದನ್ನು ಮಾಡೆಂದು ಯಾರು ಎಸ್ ಕೆ ಶರ್ಮಾ ಅವರ ಕಿವಿಯೂದಿದ್ದಾರೆ? ಎಂದು ಸಿನ್ಹಾ ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ರಫೇಲ್ : ಸಮಾನಾಂತರ ಮಾತುಕತೆ ಬಗ್ಗೆ ರಕ್ಷಣಾ ಮಂತ್ರಾಲಯ ಆಕ್ಷೇಪ
ರಫೇಲ್ ಯುದ್ಧ ವಿಮಾನ ಕೊಳ್ಳುವ ಪ್ರಕ್ರಿಯೆಗೆ ಅವಮಾನ ಮಾಡುವಂತೆ ಸತ್ಯಾಂಶಗಳನ್ನು ಮುಚ್ಚಿಟ್ಟು ವರದಿಯನ್ನು ಪ್ರಕಟಿಸಿದ್ದು ನಿಜಕ್ಕೂ ಅಚ್ಚರಿ ತಂದಿದೆ ಎಂದಿರುವ ಎಸ್ಪಿಬಿ ಸಿನ್ಹಾ ಅವರು, ಆ ಪತ್ರದಲ್ಲಿ ಅಂದಿನ ರಕ್ಷಣಾ ಸಚಿವರು ನೀಡಿದ್ದ ಪ್ರತಿಕ್ರಿಯೆಯ ಬಗ್ಗೆ ಪ್ರಸ್ತಾಪವೂ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಕೂಡ, ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ನೀಡಿದ್ದ ಪ್ರತಿಕ್ರಿಯೆ ಬಗ್ಗೆ ಪ್ರಸ್ತಾಪಿಸಿ, ಆ ಪತ್ರಿಕೆ ಉದ್ದೇಶಪೂರ್ವಕವಾಗಿಯೇ ಅಂದಿನ ರಕ್ಷಣಾ ಮಂತ್ರಿಯ ಉತ್ತರವನ್ನು ಮರೆಮಾಚಿದೆ. ಪ್ರತಿಕ್ರಿಯೆ ಪಡೆಯಲೆಂದೇ ಸ್ಟೋರಿಯನ್ನು ಸೃಷ್ಟಿಸುವುದು ಎಷ್ಟು ಸರಿ? ಇಂಥ ಬೇಜವಾಬ್ದಾರಿ ಮತ್ತು ನಿಂದನಾತ್ಮಕ ಪತ್ರಿಕೋದ್ಯಮವನ್ನು ನಾನು ಟೀಕಿಸುತ್ತೇನೆ ಎಂದು ಹರಿಹಾಯ್ದಿದ್ದಾರೆ.