ಮಾದಕದ್ರವ್ಯ ಮಾರುತ್ತಿದ್ದ ಎಂದು ಕೈ-ಕಾಲು ಕತ್ತರಿಸಿ ಕೊಂದೇಬಿಟ್ಟರು ಜನ
ಬತಿಂಡಾ, ಜೂನ್ 9: ಪಂಜಾಬ್ ನ ಬತಿಂಡಾದಲ್ಲಿ ಮಾದಕ ವಸ್ತು ಮಾರುತ್ತಿದ್ದ ಎಂದು ಆರೋಪಿಸಿ ಹಳ್ಳಿಯ ಜನರೆಲ್ಲ ಸೇರಿ ಯುವಕನೊಬ್ಬನ ಕೈ-ಕಾಲು ಕತ್ತರಿಸಿ ಹಾಕಿದ್ದಾರೆ. ಈ ಘಟನೆ ನಡೆದ ಕೆಲವು ಗಂಟೆಯೊಳಗೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಇಪ್ಪತ್ತೈದು ವರ್ಷದ ವಿನೋದ್ ಕುಮಾರ್ ಮೃತ ಯುವಕ. ಆತನ ಮೇಲೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಆ ಕಾರಣಕ್ಕೆ ಆರೇಳು ತಿಂಗಳ ಹಿಂದೆ ಹಳ್ಳಿ ಬಿಡುವಂತೆ ಆತನನ್ನು ಮಾಡಲಾಗಿತ್ತು. ಗುರುವಾರ ವಿನೋದ್ ಹಳ್ಳಿಗೆ ವಾಪಸಾಗಿದ್ದ. ಆ ವೇಳೆ ಪುರುಷರ ಗುಂಪೊಂದು ಆತನ ಮೇಲೆ ದಾಳಿ ನಡೆಸಿದೆ.[5ಕೆಜಿ ಚಿನ್ನಕ್ಕಾಗಿ ಮಗಳನ್ನೇ ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಹೆತ್ತವರು]
ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದಾರೆ. ಆತನನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಆ ವೇಳೆ ಆಕ್ರೋಶಗೊಂಡ ಹಳ್ಳಿಗರು ಆಸ್ಪತ್ರೆಯನ್ನು ಸುತ್ತುವರಿದಿದ್ದಾರೆ. ವಿನೋದ್ ವಿರುದ್ಧ ಹಲವು ಪ್ರಕರಣಗಳಿದ್ದವು. ಮೂರ್ನಾಲ್ಕು ದಿನದ ಹಿಂದಷ್ಟೇ ಆತ ಬಿಡುಗಡೆಯಾಗಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯಾವಾಗ ಸ್ಥಳೀಯ ಆಸ್ಪತ್ರೆ ಸುತ್ತ ಆಕ್ರೋಶಿತ ಹಳ್ಳಿಗರು ಗುಂಪುಗೂಡಿದರೋ ಆಗ ಪೊಲೀಸರು ವಿನೋದ್ ನನ್ನು ಅಲ್ಲಿಂದ ನಲವತ್ತೈದು ಕಿಲೋಮೀಟರ್ ದೂರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ಗಾಯಗಳಿಂದ ಆತ ಮೃತಪಟ್ಟಿದ್ದಾನೆ. ಇದೀಗ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೊಲೀಸರು.[ಹರ್ಯಾಣ: ಆಟೋದಲ್ಲೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ]
ಆತ ಮಾದಕ ದ್ರವ್ಯ ಮಾರುತ್ತಿದ್ದಾನೆ ಎಂದು ನಾವು ಎಷ್ಟು ಬಾರಿ ದೂರು ಕೊಟ್ಟರೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎಂದು ಹಳ್ಳಿಗರು ಆರೋಪ ಮಾಡಿದ್ದಾರೆ.