ಬನ್ಸಾಲಿ, ದೀಪಿಕಾ, ರಣ್ವೀರ್ ಬಂಧನಕ್ಕೆ ಕೋರ್ಟ್ ಬ್ರೇಕ್
ಚಂಡೀಗಢ, ನ 15: ಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ, ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣ್ವೀರ್ ಸಿಂಗ್ ಬಂಧನಕ್ಕೆ ಹೊರಡಿಸಿದ್ದ ವಾರಂಟಿಗೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ ಬ್ರೇಕ್ ನೀಡಿದೆ. ಇಂದು ವಿಶ್ವದಾದ್ಯಂತ ಬಿಡುಗೊಡೆಗೊಳ್ಳುತ್ತಿರುವ ರಾಮ್ ಲೀಲಾ ಚಿತ್ರಕ್ಕೆ ಸಂಬಂಧಿಸಿದಂತೆ ಈ ಮೂವರ ವಿರುದ್ದ ಜಲಂಧರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ನ್ಯಾ.ಜಿತೇಂದರ್ ಸಿಂಗ್ ಅವರ ನ್ಯಾಯಪೀಠ, ರಾಮ ಲೀಲಾ ಚಿತ್ರತಂಡ ಸಲ್ಲಿಸಿದ್ದ ಅರ್ಜಿ ಅನ್ವಯ ಬಂಧನಕ್ಕೆ ತಡೆನೀಡಿದ್ದು, ಈ ಮೂವರೂ ಸದ್ಯಕ್ಕೆ ನಿರಾಳರಾಗಿದ್ದಾರೆ. ಗುರುವಾರ (ನ 14) ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ ಚಿತ್ರತಂಡ ಜಲಂಧರ್ ಪೊಲೀಸರ ಬಗ್ಗೆ ತೀವ್ರ ಬೇಸರ ವ್ಯಕ್ತ ಪಡಿಸಿತ್ತು.
ಜಲಂಧರ್ ಪೊಲೀಸರು ದೂರಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ನಡೆಸದೆ ಮೂವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿಯ ಆದೇಶದಂತೆ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿದ್ದೇವೆ. ಆದರೂ ಏಕಾಏಕಿ ಪೊಲೀಸರು ನಮ್ಮ ವಿರುದ್ದ ಕೇಸ್ ದಾಖಲಿಸಿದ್ದು ನೋವುಂಟು ಮಾಡಿದೆ ಎಂದು ಚಿತ್ರತಂಡ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟಿದೆ.
ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಸನ್ನಿವೇಶ ಚಿತ್ರದಲ್ಲಿಲ್ಲ. ಚಿತ್ರದ ಟೈಟಲ್ ಸಂಬಂಧ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಚಿತ್ರದ ಶೀರ್ಷಿಕೆಗೂ ಪ್ರಭು ಶ್ರೀರಾಮಚಂದ್ರರ ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಕೋರ್ಟಿಗೆ ಪತ್ರ ಮುಖೇನ ಮನವರಿಕೆ ಮಾಡಿದೆ.
ಸೆಪ್ಟಂಬರ್ ತಿಂಗಳಲ್ಲಿ ಲಲಿತ್ ಕುಮಾರ್ ಎನ್ನುವವರು 'ರಾಮ್ ಲೀಲಾ ಚಿತ್ರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಚಿತ್ರ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದೆಂದು' ದೂರು ದಾಖಲಿಸಿದ್ದರು. ಇದರಂತೆ ಜಲಂಧರ್ ಪೊಲೀಸರು ಐಪಿಸಿ ಸೆಕ್ಷನ್ 295A ಅನ್ವಯ ಬನ್ಸಾಲಿ, ದೀಪಿಕಾ ಮತ್ತು ರಣ್ವೀರ್ ವಿರುದ್ದ ಎಫ್ಐಆರ್ ದಾಖಲಿಸಿದ್ದರು.
ರಾಮ್ ಲೀಲಾ ಚಿತ್ರಕ್ಕೆ ಮುಗಿಯದ ರಗಳೆ
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ
ರೋಮಿಯೋ ಹಾಗೂ ಜೂಲಿಯಟ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಆದರೆ, ದೇಸಿ ರೋಮಿಯೋ-ಜೂಲಿಯಟ್ ನಲಿದಾಟ, ಪ್ರಣಯ ಚೇಷ್ಟೆಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಇದೆ ಎಂದು ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಗುಜರಾತ್
ಚಿತ್ರ ಬಿಡುಗಡೆಗೆ ರಜಪೂತ ಸಮುದಾಯ ಭಾರಿ ಪ್ರತಿರೋಧ ಒಡ್ಡಿತ್ತು. ಗುಜರಾತಿನಲ್ಲಿ ಚಿತ್ರ ನಿಷೇಧಕ್ಕೆ ಆಗ್ರಹಿಸಿದ್ದರು. ರಜಪೂತರ ಸಂಪ್ರದಾಯ, ಧಾರ್ಮಿಕ ವಿಧಿ ವಿಧಾನಗಳಿಗೆ ಅವಹೇಳನ ಮಾಡಲಾಗಿದೆ. ಮಹಿಳೆಯರನ್ನು ಗೌರವಿಸುವ ನಮ್ಮ ನಂಬಿಕೆಗಳಿಗೆ ಚ್ಯುತಿ ಬರುವಂತೆ ಚಿತ್ರದಲ್ಲಿ ಮಹಿಳೆಯರನ್ನು ತೋರಿಸಲಾಗಿದೆ ಎಂದು ಪ್ರತಿಭಟಿಸಿದ್ದರು.
ಧಾರ್ಮಿಕ ಮುಖಂಡರು
ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಲು ಧಾರ್ಮಿಕ ಮುಖಂಡರು, ಸಂಘಟನೆಗಳೂ ಸಜ್ಜಾಗಿದ್ದವು. ಹಿಂದೂಗಳ ಭಾವನೆಗೆ ಧಕ್ಕೆ ತರುವ ಸನ್ನಿವೇಶಗಳು ಚಿತ್ರದಲ್ಲಿವೆ. ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದೆಂದು ಅಲ್ಲಲ್ಲಿ ಪ್ರತಿಭಟನೆಗಳು ನಡೆದಿದ್ದವು.
ದೆಹಲಿ ಕೋರ್ಟ್
ದೆಹಲಿ ಕೋರ್ಟ್ ಚಿತ್ರ ಬಿಡುಗಡೆಗೆ ತಡೆ ನೀಡಿ, ಹಿಂದೂ ಸಮುದಾಯ, ಪ್ರಭು ಸಮಾಜ್ ಧಾರ್ಮಿಕ್ ಲೀಲಾ ಕಮಿಟಿಯ ಸದಸ್ಯರನ್ನೊಳಗೊಂಡ ತಂಡ ರಚಿಸಿ ಅದರ ಶಿಫಾರಸಿನಂತೆ ಮುಂದಿನ ತೀರ್ಪು ನೀಡುವುದಾಗಿ ಹೇಳಿತ್ತು. ತದನಂತರ ಚಿತ್ರದ ಶೀರ್ಷಿಕೆಯನ್ನು 'ಗಲಿಯೋಂಕಿ ರಾಸಲೀಲಾ' ಎಂದು ಬನ್ಸಾಲಿ ಬದಲಿಸದ ಮೇಲೆ ಚಿತ್ರ ಬಿಡುಗಡೆಗೆ ಕೋರ್ಟ್ ಅನುಮತಿ ನೀಡಿದೆ.
ಸೆನ್ಸಾರ್ ಬೋರ್ಡ್
ಚಿತ್ರ ವೀಕ್ಷಿಸಿದ ಸೆನ್ಸಾರ್ ಬೋರ್ಡ್ ಚಿತ್ರಕ್ಕೆ U/A ಪ್ರಮಾಣಪತ್ರವನ್ನು ನವೆಂಬರ್ ಒಂದರಂದು ನೀಡಿತ್ತು. William Shakespeare ಅವರ ರೋಮಿಯೋ ಜ್ಯೂಲಿಯಟ್ ಕಥಾದಾರಿತ ಚಿತ್ರವೇ ರಾಮ್ ಲೀಲಾ ಅಥವಾ ಗಲಿಯೋಂಕಿ ರಾಸಲೀಲಾ.