ಪಂಜಾಬ್ ನ ಗಡಿ ಗ್ರಾಮಸ್ಥರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚನೆ
ಚಂಡೀಗಡ, ಸೆಪ್ಟೆಂಬರ್ 29: ಭಾರತೀಯ ಸೇನೆ ಗಡಿಯಾಚೆಗಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನ ಗಡಿಯ ಹತ್ತು ಕಿ.ಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ತೆರವು ಮಾಡುವಂತೆ ಪಂಜಾಬ್ ಸರಕಾರ ಆದೇಶಿಸಿದೆ. ಕೇಂದ್ರ ಸರಕಾರವೇ ಗುರುವಾರ ಪಂಜಾಬ್ ಗೆ ಈ ಬಗ್ಗೆ ಸೂಚನೆ ನೀಡಿದ್ದು, ಅದರಂತೆ ಗ್ರಾಮಸ್ಥರ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ.
ಸ್ಥಳೀಯ ಅಧಿಕಾರಿಗಳು ಮೈಕ್ ಗಳಲ್ಲಿ ಘೋಷಣೆ ಕೂಗಿ, ಗಡಿಯಂಚಿನ ಗ್ರಾಮಸ್ಥರನ್ನು ತೆರವು ಮಾಡಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸುತ್ತಿದ್ದಾರೆ. ಪಂಜಾಬ್ ನ ಗಡಿ ಜಿಲ್ಲೆಗಳಾದ ಅಮೃತ್ ಸರ್, ಗುರುದಾಸ್ ಪುರ್, ತಾರ್ಣ್ ತರಣ್, ಫಿರೋಜ್ ಪುರ್, ಫರೀದ್ ಕೋಟ್, ಅಬೋಹಾರ್ ಹಾಗೂ ಫಜಿಲ್ಕಾದಲ್ಲಿ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಹೇಳಲಾಗಿದೆ.[200ಕ್ಕೂ ಹೆಚ್ಚು ನುಸುಳುಕೋರರನ್ನು ಮಟ್ಟಹಾಕಿದ ಸೇನೆ]
ಇನ್ನು ಪಂಜಾಬ್ ಪಾಕಿಸ್ತಾನದೊಂದಿಗೆ ಹಂಚಿಕೋಳ್ಳುವ ಗಡಿಯುದ್ದಕ್ಕೂ ಎಸ್ ಎಫ್ ಪಡೆ ಜಮೆಯಾಗುತ್ತಿದೆ. ಅಂದ ಹಾಗೆ, ಪಂಜಾಬ್ ರಾಜ್ಯ ಪಾಕಿಸ್ತಾನದೊಂದಿಗೆ 553 ಕಿ.ಮೀ ಗಡಿ ಹಂಚಿಕೊಳ್ಳುತ್ತದೆ. ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಗುರುವಾರ ಸಂಜೆ ತುರ್ತು ಸಭೆ ಕರೆದಿದ್ದಾರೆ.