ಕ್ಷಮಾದಾನಕ್ಕಾಗಿ ಅರ್ಜಿ ಹಾಕಿದ 'ದೇವ ಮಾನವ' ಅಸಾರಾಮ್ ಬಾಪು
ಜೋಧ್ ಪುರ್, ಸೆಪ್ಟೆಂಬರ್ 11: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಅವರ ಶಿಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬಳಿಕ ಅಸಾರಾಮ್ ಅವರು ತಮ್ಮ ಕೊನೆ ಬೇಡಿಕೆ ಸಲ್ಲಿಸಿದ್ದಾರೆ. ನನಗೆ ಕ್ಷಮಾದಾನ ನೀಡಿ ಎಂದು ರಾಜಸ್ಥಾನ ಸರ್ಕಾರಕ್ಕೆ ಮೊರೆ ಸಲ್ಲಿಸಿದ್ದಾರೆ. ಏಪ್ರಿಲ್ 25ರಂದು ಜೋಧಪುರದ ನ್ಯಾಯಾಲಯ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಚಹಾದಂಗಡಿಯಲ್ಲಿ ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಸಾರಾಮ್ ಈಗ ಸರಿ ಸುಮಾರು ಸಾವಿರಾರು ಕೋಟಿ ರು ಒಡೆಯ, 16 ವರ್ಷ ವಯಸ್ಸಿನ ಯುವತಿ ಮೇಲೆ ಜೋಧಪುರದ ಆಶ್ರಮದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಪಡೆದು, ಜೈಲುವಾಸಿಯಾಗಿದ್ದಾರೆ.
ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್
ಜೋಧಪುರ ಸಮೀಪದ ಮನಾಯ್ ನಲ್ಲಿರುವ ಆಶ್ರಮಕ್ಕೆ 2013ರ ಆಗಸ್ಟ್ 15ರಂದು ತನ್ನನ್ನು ಕರೆಸಿಕೊಂಡು ತನ್ನ ಮೇಲೆ ಅಂದೇ ರಾತ್ರಿ ಅತ್ಯಾಚಾರ ನಡೆಸಲಾಗಿತ್ತು ಎಂದು 16 ವರ್ಷದ ಬಾಲಕಿ ದೂರು ಸಲ್ಲಿಸಿದ್ದಳು. ಈ ಪ್ರಕರಣದಲ್ಲಿ ಅಸಾರಾಂ ಶಿಕ್ಷೆಗೆ ಗುರಿಯಾಗಿದ್ದರು.
ಉತ್ತರ ಪ್ರದೇಶದ ಶಹಜಾನ್ಪುರಕ್ಕೆ ಸೇರಿದ ಯುವತಿ ಮಧ್ಯ ಪ್ರದೇಶದ ಛಿಂದ್ವಾರದಲ್ಲಿರುವ ಅಸರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದರ ಮಧ್ಯದಲ್ಲಿ ಆಕೆಯ ಮೇಲೆ ಅಸಾರಾಂ ಅತ್ಯಾಚಾರ ನಡೆಸಿದ್ದ.
ರಾಜ್ಯಪಾಲ ಕಲ್ಯಾಣ್ ಸಿಂಗ್ ಗೆ ತಲುಪಿದ ಮನವಿ
ಅಸಾರಾಮ್ ಬಾಪು ಅವರು ಸಲ್ಲಿಸಿರುವ ಕ್ಷಮಾದಾನದ ಅರ್ಜಿ ಸದ್ಯ ರಾಜ್ಯಪಾಲರ ಕಲ್ಯಾಣ್ ಸಿಂಗ್ ಅವರ ಕೈ ಸೇರಿದೆ. ಇದನ್ನು ರಾಜ್ಯ ಗೃಹ ಇಲಾಖೆಗೆ ಕಳಿಸಲಾಗಿದ್ದು, ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೋರಲಾಗಿದೆ.
ವಯಸ್ಸು ಹಾಗೂ ಆನಾರೋಗ್ಯದ ಕಾರಣ ನೀಡಿರುವ ಅಸಾರಾಮ್ ಅವರು ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿದ್ದಾರೆ. ಜೋಧ್ ಪುರ್ ಸೆಂಟ್ರಲ್ ಜೈಲ್ ನ ಎಸ್ಪಿ ಕೈಲಾಶ್ ತ್ರಿವೇದಿ ಅವರು ಜಿಲ್ಲಾಧಿಕಾರಿ ಹಾಗೂ ಪೊಲೀಸರಿಂದ ಈ ಬಗ್ಗೆ ಮಾಹಿತಿ ಕೋರಿದ್ದಾರೆ.
ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು
ಸುಮಾರು 200 ಕ್ಕೂ ಆಶ್ರಮಗಳ ಜತೆಗೆ 500 ಕೋಟಿ ರು.ಗೂ ಅಧಿಕ ಆಸ್ತಿ ಹೊಂದಿರುವ ಶ್ರೀಮಂತ ಧಾರ್ಮಿಕ ಗುರು ಅಸಾರಾಮ್, 2009ರಲ್ಲಿ ಅಸಾರಾಮ್ ಬಾಪು ಅವರ ಬಂಟ ಆಜು ಚಂದಕ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ 2009ರಲ್ಲಿ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಶ್ರಮದಲ್ಲಿ ತಾಂತ್ರಿಕ್ ಕ್ರಿಯೆ ನಡೆಸುವಾಗ ಅಸಭ್ಯ ಭಂಗಿಗಳಲ್ಲಿ ಅಸಾರಾಮ್ ಬಾಪು ಇರುವುದನ್ನು ನೋಡಿದ್ದೇನೆ ಎಂದು ತಾನು ನೀಡಿದ ದೂರಿನ ಜತೆ ಅಫಿಡವಿಟ್ ಕೂಡಾ ರಾಜು ಸಲ್ಲಿಸಿದ್ದರು.
ಅಸಾರಮ್ ಬಾಪು ಆಶ್ರಮ ಅತಿಕ್ರಮಣ
2000ರಲ್ಲಿ ಗುಜರಾತ್ ಸರ್ಕಾರ ನೀಡಿದ್ದ 10 ಎಕರೆ ಭೂಮಿಯಲ್ಲಿ ಆಶ್ರಮ ಸ್ಥಾಪಿಸಿದ್ದಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 18,000 ಚದರ ಮೀಟರ್ ಜಾಗವನ್ನು ಅಸಾರಮ್ ಬಾಪು ಆಶ್ರಮ ಅತಿಕ್ರಮಣ ಮಾಡಿಕೊಂಡಿತ್ತು. ಈ ಸಂಬಂಧ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮೊಕದ್ದಮೆ ದಾಖಲಾಗಿ ಕೋರ್ಟ್ ಸಮನ್ಸ್ ನೀಡಿತ್ತು. ಸಮನ್ಸ್ ಗೆ ಪ್ರತಿಕ್ರಿಯೆ ನೀಡದ ಕಾರಣ ಜಿಲ್ಲಾಧಿಕಾರಿಗಳು ಪೊಲೀಸರ ನೆರವಿನಿಂದ ಆಶ್ರಮದ ಅನಧಿಕೃತ ಕಟ್ಟಡವನ್ನು ನೆಲಸಮಗೊಳಿಸಿದ್ದರು.
ಆಶ್ರಮದಲ್ಲಿ ತಂತ್ರ ಸಾಧನೆ, ಮಾಟ ಮಂತ್ರ
ದೀಪೇಶ್ ವಘೇಲ(10) ಹಾಗೂ ಅಭಿಷೇಕ್ ವಘೇಲ (11) ಇಬ್ಬರು ಕಸಿನ್ಸ್ ಮೊಟೆರಾದಲ್ಲಿರುವ ಆಶ್ರಮದ ಗುರುಕುಲದಲ್ಲಿ ಓದುತ್ತಿದ್ದರು. ಕೆಲಕಾಲ ನಾಪತ್ತೆಯಾದವರು ಮತ್ತೆ ಶವವಾಗಿ ಪತ್ತೆಯಾಗಿದ್ದು ಸಬರಮತಿ ಆಶ್ರಮದ ದಂಡೆಯಲ್ಲಿ 2008ರ ಜು.5 ರಲ್ಲಿ ದಾಖಲಾದ ಪ್ರಕರಣದ ತನಿಖೆಗೆ ಆಯೋಗ ರಚನೆಯಾಗಿತ್ತು. ನಂತರ ಸಿಐಡಿ ತನಿಖೆ ಮುಂದುವರೆಸಿತು. ಆಶ್ರಮದಲ್ಲಿ ತಂತ್ರ ಸಾಧನೆ, ಮಾಟ ಮಂತ್ರ ನಡೆಸುವ ಬಗ್ಗೆ ಏಳು ಜನ ಆಶ್ರಮವಾಸಿಗಳನ್ನು ಪ್ರಶ್ನಿಸಲಾಯಿತು. ನಂತರ ಸುಳ್ಳು ಪತ್ತೆಯಂತ್ರಕ್ಕೂ ಅವರು ತಲೆಬಾಗಲಿಲ್ಲ. ಏಳು ಜನರ ಮೇಲೆ ಪ್ರಕರಣ ದಾಖಲಾಯಿತು.
ಆಶ್ರಮದಲ್ಲಿ ನಕಲಿ ಔಷಧ ಮಾರಾಟ
2013ರ ಫೆಬ್ರವರಿಯಲ್ಲಿ 24 ವರ್ಷದ ರಾಹುಲ್ ಪಚೌರಿ ಎಂಬ ಯುವಕ ಬಾಪು ಅವರ ಜಬಲ್ ಪುರದ ಆಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಬಾಪು ಆಶ್ರಮದಲ್ಲಿ ನನ್ನ ಮಗನಿಗೆ ವಿಷವಿಕ್ಕಿ ಕೊಲ್ಲಲಾಗಿದೆ ಎಂದು ರಾಹುಲ್ ತಂದೆ ಅರೋಪಿಸಿದರು. ಆಶ್ರಮದಲ್ಲಿ ನಕಲಿ ಔಷಧ ಮಾರಾಟ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಎಂದು ರಾಹುಲ್ ಅವರ ತಂದೆ ಹೇಳಿದ್ದ ಎನ್ನಲಾಗಿತ್ತು