ಪುಣೆ ಟೆಕಿ ಕೊಲೆ ಪ್ರಕರಣ, ಬೆಂಗಳೂರಿನ ಬುದ್ಧಿವಂತ ಕ್ರಿಮಿನಲ್ ಬಲೆಗೆ
ಪುಣೆ, ಡಿಸೆಂಬರ್ 29: ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಪುಣೆಯ ಟೆಕಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಸಂತೋಷ್ ಕುಮಾರ್ (25) ಬಂಧಿತ.
ಟೆಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲು ವಶಕ್ಕೆ ಪಡೆಯಲಾಗಿತ್ತು. ಆ ನಂತರ ಸಂತೋಷ್ ನನ್ನು ಅನುಮಾನದ ಮೇಲೆ ಬಂಧಿಸಲಾಗಿದೆ. ಆರೋಪಿಯು ಕೊಲೆ ಮಾಡಲು ತುಂಬ ಚೆನ್ನಾಗಿ ಸಿದ್ಧತೆ ನಡೆಸಿದ್ದ. ಕೊಲೆಯಾದ ದಿನ ತಾನು ಬೆಂಗಳೂರಿನಲ್ಲೇ ಇದ್ದುದಾಗಿ ಸಮರ್ಥನೆ ನೀಡಿದ್ದ.
ಅಂತರ ದಾಸ್ (21) ಅವರನ್ನು ಪುಣೆಯ ತಲ್ವಾಡೆಯಲ್ಲಿರುವ ಕನ್ಬಯ್ ಚೌಕ್ ಬಳಿ ಕಳೆದ ಶುಕ್ರವಾರ ಹರಿತವಾದ ಆಯುಧಗಳಿಂದ ಕೊಲಲ್ಲಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಮೃತಪಟ್ಟಿದ್ದರು ಎಂದು ಘೋಷಿಸಲಾಗಿತ್ತು. ಆಕೆಯ ಪೋಷಕರು, ಒಬ್ಬ ಯುವಕ ಆಕೆಯನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಎಂದು ದೂರಿದ್ದರು.[ಪನ್ವೇಲ್ ನಲ್ಲಿ ಹದಿಮೂರು ತುಂಡು ಮಾಡಿದ ಮಹಿಳೆ ಶವ ಪತ್ತೆ]
ಪೊಲೀಸರು ಕುಮಾರ್ ನನ್ನು ಪತ್ತೆ ಹಚ್ಚಿದ್ದರು. ಆತ ಕೂಡ ಟೆಕಿ, ಬೆಂಗಳೂರಿನವನು. ಆತ ಈ ದಾಳಿ ಮಾಡುವಂತೆ ಇನ್ನೊಬ್ಬನಿಗೆ ವಹಿಸಿದ್ದ. ಆತನ ಬಂಧನಕ್ಕಾಗಿ ಶೋಧ ಮುಂದುವರಿದಿದೆ. "ನಾವು ಕುಮಾರ್ ನನ್ನು ಬಂಧಿಸಿದ್ದೇವೆ. ಆತನನ್ನು ಕೋರ್ಟ್ ಗೆ ಹಾಜರುಪಡಿಸುತ್ತೇವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ದಿನ ತಾನು ಬೆಂಗಳೂರಿನಲ್ಲಿ ಇದ್ದೆ ಎಂದು ಆರೋಪಿಯು ಸಿಸಿಟಿವಿ ಫೂಟೇಜ್ ಒದಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. "ಕುಮಾರ್ ತನ್ನ ಜತೆಗೆ ಸಂಬಂಧ ಬೆಳೆಸುವಂತೆ ಅಂತರ ದಾಸ್ ಗೆ ಒತ್ತಾಯಿಸಿ ಕಳುಹಿಸಿದ್ದ ಮೆಸೇಜ್ ಗಳು ಸಿಕ್ಕಿವೆ. ಆದರೆ ಆಕೆ ಅದಕ್ಕೆ ಪ್ರತಿಕ್ರಿಯಿಸಿಲ್ಲ. ಇನ್ನೊಬ್ಬ ವ್ಯಕ್ತಿಯ ಹುಡುಕಾಟದಲ್ಲಿದ್ದೇವೆ. ಶೋಧ ಮುಂದುವರಿದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.