ಕಟ್ಟಿಗೆಯ ತುಂಡನ್ನು ವಿದ್ಯಾರ್ಥಿಯ ಗಂಟಲಲ್ಲಿ ತುರುಕಿದ ದುಷ್ಟ ಶಿಕ್ಷಕ!
ಅಹ್ಮದ್ ನಗರ, ಏಪ್ರಿಲ್ 14: ಎರಡನೇ ತರಗತಿಯ ವಿದ್ಯಾರ್ಥಿಯೊಬ್ಬ ಗಣಿತದ ಲೆಕ್ಕ ಬಿಡಿಸಲು ವಿಫಲವಾದ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಗಂಟಲಿಗೆ ಮರದ ಕೋಲನ್ನು ತುರುಕಿದ ಅಮಾನವೀಯ ಘಟನೆ ಅಹ್ಮದ್ ನಗರದ ಪಿಂಪಲ್ ಗಾಂವ್ ಎಂಬ ಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಜಿಲ್ಲಾ ಪರಿಶದ್ ಶಾಲೆಯ ಎಂಟು ವರ್ಷದ ಪುಟ್ಟ ಬಾಲಕ ಗಣಿತದ ಸಮಸ್ಯೆಯೊಂದನ್ನು ಪತರಿಹರಿಸಲು ವಿಫಲನಾಗಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕ ಕಟ್ಟಿಗೆಯ ತುಂಡೊಂದನ್ನು ಹುಡುಗನ ಬಾಯಿಯಲ್ಲಿ ಹಾಕಿ, ಅದನ್ನು ಗಂಟಲಲ್ಲಿ ತುರುಕಿದ್ದಾನೆ.
ಉತ್ತರ ಪ್ರದೇಶ: ಶಿಕ್ಷಕರ ಏಟಿಗೆ ವಿದ್ಯಾರ್ಥಿನಿ ಬಲಿ
ಇದರಿಂದ ಹುಡುಗನ ಗಂಟಲು ಸೀಳಿದಂತಾಗಿ ರಕ್ತಬರುವುದಕ್ಕೆ ಶುರುವಾಗಿದೆ. ನೋವು ತಾಳಲಾರದೆ ಮುಗ್ಧ ಬಾಲಕ ಒದ್ದಾಡುತ್ತ ಕ್ಲಾಸಿನಲ್ಲೇ ಬಿದ್ದಿದ್ದಾನೆ. ಆದರೆ ಗಂಟಲಿಗೆ ಕಟ್ಟಿಗೆಯ ತುಂಡು ಚುಚ್ಚಿ, ಗಾಯವಾಗಿದ್ದರಿಂದ ಆತನಿಗೆ ಕೂಗಾಡುವುದಕ್ಕೂ ಆಗದೆ ಧ್ವನಿ ನಿಂತುಹೋಗಿದೆ.
ಇದರಿಂದ ಆಘಾತಗೊಂಡ ಮಕ್ಕಳು ವಿಷಯವನ್ನು ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ತಕ್ಷಣವೇ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುಣೆಗೆ ತೆರಳುವಂತೆ ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಆತನನ್ನು ಪುಣೆಯ ಆಸ್ಪತ್ರೆಗೆ ಸೇರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕನ ಅನ್ನನಾಳಕ್ಕೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ನಂತರ ಶಿಕ್ಷಕನ ವಿರುದ್ಧ ಪಾಲಕರಿಂದ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.