ಭೀಮಸೇನ್ ಜೋಶಿ: ಅಪ್ಪನ ಆಸ್ತಿಗೆ ಮಕ್ಕಳ ಅಪಸ್ವರ
ಪುಣೆ, ನ.2: ಅಪ್ಪನ ಆಸ್ತಿ ಮತ್ತು ಆ ಸಂಬಂಧ ಅವರು ಬರೆದಿಟ್ಟಿದ್ದ ಉಯಿಲಿಗೆ ಮಕ್ಕಳು ಅಪಸ್ವರ ಎತ್ತಿದ್ದಾರೆ. ನಾಡು ಕಂಡ ಅಪರೂಪದ ಗಾಯಕ ದಿವಂಗತ ಭೀಮಸೇನ್ ಜೋಶಿ ಅವರ ಆಸ್ತಿ ಸಂಬಂಧ ಜೋಶಿ ಅವರ ಮೊದಲ ಮತ್ತು ಎರಡನೆಯ ಪತ್ನಿ ಮಕ್ಕಳ ಮಧ್ಯೆ ಈ ಕಲಹ ತಲೆದೋರಿದೆ.
ಭಾರತ ರತ್ನ ಪುರಸ್ಕೃತ ಭೀಮಸೇನ್ ಜೋಶಿ ಅವರ ಪುಣೆಯಲ್ಲಿನ ಸ್ಥಿರಾಸ್ತಿ ಈಗ ವಿವಾದದ ಕೇಂದ್ರವಾಗಿದೆ. ಪುಣೆಯಲ್ಲಿನ ಬಂಗಲೆ ಮತ್ತು ಎರಡು ಫ್ಲ್ಯಾಟ್ ಗಳನ್ನು ಮಾರಾಟ ಮಾಡಲು ಜೋಶಿ ಅವರ ಎರಡನೇ ಪತ್ನಿ ಮಕ್ಕಳಾದ ಶ್ರೀನಿವಾಸ ಮತ್ತು ಜಯಂತ್ ಅವರು ಮುಂದಾಗಿದ್ದಾರೆ. ಆದರೆ ಅದಕ್ಕೆ ಜೋಶಿ ಅವರ ಮೊದಲ ಪತ್ನಿ ಮಗ ರಾಘವೇಂದ್ರ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ತಮ್ಮ ತಂದೆ ಬರೆದಿದ್ದಾರೆ ಎನ್ನಲಾಗಿರುವ ಉಯಿಲಿನ ಅಸಲೀಯತ್ತನ್ನು ನಂಬಲು ಸಾಧ್ಯವಿಲ್ಲ. ಉಯಿಲು ಬರೆಯುವ ಸಮಯದಲ್ಲಿ ಅವರು ಮಾನಸಿಕವಾಗಿ ಆರೋಗ್ಯವಾಗಿದ್ದರು ಎಂಬುದನ್ನು ಸಾಬೀತುಪಡಿಸಲು ವೈದ್ಯರ ಪ್ರಮಾಣ ಪತ್ರ ನೀಡಿಲ್ಲ. ಹೀಗಾಗಿ ಅವರ ಆಸ್ತಿ ಮಾರಾಟಕ್ಕೆ ತಡೆ ನೀಡಬೇಕು ಎಂದು ರಾಘವೇಂದ್ರ ಅವರು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
86 ವರ್ಷದ ಜೋಶಿ ಅವರು 2011ರ ಜ. 24ರಂದು ನಿಧನ ಹೊಂದಿದ್ದರು. ಅವರ ನಿಧನಕ್ಕೆ 2 ವರ್ಷ ಮುಂಚೆ 8 ಪುಟಗಳ ಉಯಿಲು ಸಿದ್ಧವಾಗಿತ್ತು. ಅದೂ ಆಗ ಅವರು brain tumourನಿಂದಾಗಿ 42 ದಿನ ಆಸ್ಪತ್ರೆಯಲ್ಲಿದ್ದರು. ಜೋಶಿ ಅವರು ಮೃತಪಟ್ಟ ನಾಲ್ಕು ದಿನಗಳ ನಂತರ ಶ್ರೀನಿವಾಸ ಮತ್ತು ಜಯಂತ್ ಅವರು ರಾಘವೇಂದ್ರ ಅವರಿಗೆ ತೋರಿಸಿದ್ದರು. ಉಯಿಲು ಸಿದ್ಧಪಡಿಸಿದ 2 ತಿಂಗಳ ನಂತರ ರಿಜಿಸ್ಟರ್ ಮಾಡಿಸಲಾಗಿತ್ತು. ಅದೂ sub-registrar ಅವರೇ ಮನೆಗೆ ಬಂದು ಅಂಕಿತ ಹಾಕಿದ್ದರು. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.